ಸಾರಾಂಶ
ದೇಶದಲ್ಲಿ ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆ ಇರುವ ತನಕ ಮೀಸಲಾತಿ ಇರಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಮೀಸಲಾತಿಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜಮ್ಮು: ‘ದೇಶದಲ್ಲಿ ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆ ಇರುವ ತನಕ ಮೀಸಲಾತಿ ಇರಲಿದೆ. ಕಾಂಗ್ರೆಸ್ ಮೀಸಲಾತಿಗೆ ಸಂಪೂರ್ಣವಾಗಿ ಬೆಂಬಲಿಸಲಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮೀಸಲಾತಿ ಕುರಿತಾಗಿ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ‘ಅವರು ಹಾಗೇ ಹೇಳಿಲ್ಲ. ಹಾಗೇ ಹೇಳುವುದಿಲ್ಲ, ಆ ರೀತಿ ಹೇಳುವುದಕ್ಕೆ ನಾವು ಬಿಡುವುದಿಲ್ಲ. ನಮ್ಮ ಪಕ್ಷ ಸಂಪೂರ್ಣವಾಗಿ ಮೀಸಲಾತಿಗೆ ಬೆಂಬಲಿಸುತ್ತದೆ. ಮೀಸಲಾತಿ ಹೋಗುವುದಿಲ್ಲ. ನಾವು ಅದಕ್ಕಾಗಿ ಹೋರಾಡುತ್ತೇವೆ’ ಎಂದಿದ್ದಾರೆಜಮ್ಮು ಕಾಶ್ಮೀರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ‘ ಹಿಂದೂ ಧರ್ಮದಲ್ಲಿ ಜಾತಿ ಪದ್ಧತಿ ಇರುವ ತನಕ ಮೀಸಲಾತಿ ರದ್ದಾಗುವುದಿಲ್ಲ. ಎಲ್ಲಿಯವರೆಗೆ ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ ಇರುತ್ತದೆಯೋ ಅಲ್ಲಿಯ ತನಕ ಮೀಸಲಾತಿ ಮುಂದುವರೆಯುತ್ತದೆ. ನಾನು ಸಾಯುವ ತನಕವೂ ಮೀಸಲಾತಿ ಇರುತ್ತದೆ. ನನ್ನ ಮಕ್ಕಳಿಗೆ ಇದಕ್ಕೆ ಹೋರಾಡಲು ಹೇಳುತ್ತೇನೆ’ ಎಂದಿದ್ದಾರೆ.