ಸಾರಾಂಶ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣೀಭೂತವಾಗಿರುವ ಕೃಷಿ ತ್ಯಾಜ್ಯ ದಹನವನ್ನು ತಪ್ಪಿಸದ ಹಾಗೂ ದಹನ ಮಾಡಿದ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣಕ್ಕೆ ಪಂಜಾಬ್ ಮತ್ತು ಹರ್ಯಾಣ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಬುಧವಾರ ಛೀಮಾರಿ ಹಾಕಿದೆ
ಪಿಟಿಐ ನವದೆಹಲಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣೀಭೂತವಾಗಿರುವ ಕೃಷಿ ತ್ಯಾಜ್ಯ ದಹನವನ್ನು ತಪ್ಪಿಸದ ಹಾಗೂ ದಹನ ಮಾಡಿದ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣಕ್ಕೆ ಪಂಜಾಬ್ ಮತ್ತು ಹರ್ಯಾಣ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಬುಧವಾರ ಛೀಮಾರಿ ಹಾಕಿದೆ. ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಅ.23ರಂದು ವಿಚಾರಣೆಗೆ ಹಾಜರಾಗಿ ವಿವರಣೆ ನೀಡಬೇಕು ಎಂದು ಸಮನ್ಸ್ ಜಾರಿಗೊಳಿಸಿದೆ.ಎರಡೂ ರಾಜ್ಯ ಸರ್ಕಾರಗಳು ಸಂವೇದನಾರಹಿತವಾಗಿ ವರ್ತಿಸುತ್ತಿವೆ. ಕೃಷಿ ತ್ಯಾಜ್ಯ ದಹಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿರುವ ಎರಡೂ ರಾಜ್ಯ ಸರ್ಕಾರಗಳ ಅಧಿಕಾರಿಗಳ ವಿರುದ್ಧ ವಾಯು ಗುಣಮಟ್ಟ ನಿರ್ವಹಣಾ ಆಯೋಗವು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.
ಕೃಷಿ ತ್ಯಾಜ್ಯ ಸುಡುವುದನ್ನು ನಿಲ್ಲಿಸುವಂತೆ 2021ರ ಜೂನ್ನಲ್ಲೇ ಸೂಚನೆ ನೀಡಲಾಗಿದೆ. ಆದರೆ ಮುಖ್ಯ ಕಾರ್ಯದರ್ಶಿಗಳು ಬೇರೆಯವರ ಸೂಚನೆಗೆ ತಕ್ಕಂತೆ ಕುಣಿಯುತ್ತಿದ್ದಾರೆ. ಪಂಜಾಬ್ ಸರ್ಕಾರವಂತೂ ಕಳೆದ 3 ವರ್ಷಗಳಿಂದ ಒಂದೇ ಒಂದು ವಿಚಾರಣೆಯನ್ನೂ ನಡೆಸಿಲ್ಲ. ಎಲ್ಲ ಪ್ರಕರಣಗಳನ್ನು ಸಹಿಸಿಕೊಳ್ಳುತ್ತಿದೆ. ಜನರನ್ನು ದಂಡಿಸಲು ಸಂಕೋಚ ಏಕೆ? ಇದೇನು ರಾಜಕೀಯ ವಿಷಯವಲ್ಲ. ತಪ್ಪು ಮಾಡಲು ಜನರಿಗೆ ನೀವೇ ಉತ್ತೇಜನ ಕೊಡುತ್ತಿದ್ದೀರಿ. ನಿರ್ದಿಷ್ಟ ಸ್ಥಳದಲ್ಲಿ ಕೃಷಿ ತ್ಯಾಜ್ಯ ದಹಿಸಲಾಗುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದರೂ, ಆ ಜಾಗ ಪತ್ತೆಯೇ ಆಗಿಲ್ಲ ಎಂದು ವಾದಿಸುತ್ತಿದ್ದೀರಿ ಎಂದು ಚಾಟಿ ಬೀಸಿತು.