ಸಾರಾಂಶ
ನವದೆಹಲಿ : ಕೋಲ್ಕತಾದ ಪ್ರತಿಷ್ಠಿತ ಆರ್ಜಿ ಕರ್ ಆಸ್ಪತ್ರೆಯಲ್ಲಿ ಸಂಭವಿಸಿದ ವೈದ್ಯೆಯ ಮೇಲಿನ ಭೀಕರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿಚಾರಣೆಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಲು ಈಗ ಸುಪ್ರೀಂ ಕೋರ್ಟ್ ನಿರ್ಧರಿದ್ದು, ಮಂಗಳವಾರ ವಿಚಾರಣೆ ನಡೆಸಲು ನಿರ್ಧರಿಸಿದೆ.
ದೇಶಾದ್ಯಂತ ಸುದ್ದಿ ಮಾಡಿರುವ ಈ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ನಡೆಸಲಿದೆ.
ಇತ್ತೀಚೆಗೆ ಕೋಲ್ಕತಾ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ, ಸಿಬಿಐ ತನಿಖೆಗೆ ಆದೇಶಿಸಿತ್ತು ಹಾಗೂ ಪ್ರಕರಣದ ವಿಚಾರಣೆ ಮಾಡುವಲ್ಲಿ ಕೋಲ್ಕತಾ ಪೊಲೀಸರು ಎಡವಿದ್ದಾರೆ ಎಂದು ಚಾಟಿ ಬೀಸಿತ್ತು. ಅಲ್ಲದೆ, ಕರ್ ಆಸ್ಪತ್ರೆಯ ಪ್ರಾಚಾರ್ಯರನ್ನೂ ಹಿಗ್ಗಾಮುಗ್ಗಾ ಝಾಡಿಸಿತ್ತು.
==
ವೈದ್ಯರಿಗೆ ರಕ್ಷಣೆ ಕೋರಿ ಮೋದಿಗೆ 70 ಪದ್ಮ ಪುರಸ್ಕೃತ ವೈದ್ಯರ ಪತ್ರ
ನವದೆಹಲಿ: ಕೋಲ್ಕತಾ ವೈದ್ಯೆಯ ರೇಪ್ ಮತ್ತು ಕೊಲೆ ಪ್ರಕರಣದ ಹಿನ್ನೆಲೆ ಆರೋಗ್ಯ ಸಿಬ್ಬಂದಿ ಮೇಲಿನ ಹಿಂಸಾಚಾರವನ್ನು ನಿಭಾಯಿಸಲು ವಿಶೇಷ ಕಾನೂನನ್ನು ಜಾರಿಗೊಳಿಸಬೇಕೆಂದು 70ಕ್ಕೂ ಹೆಚ್ಚು ಪದ್ಮ ಪ್ರಶಸ್ತಿ ಪುರಸ್ಕೃತ ವೈದ್ಯರು ಭಾನುವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಆರೋಗ್ಯ ಕಾರ್ಯಕರ್ತರ ಮೇಲೆ ನಡೆಯುವ ಮೌಖಿಕ ಅಥವಾ ದೈಹಿಕ ಹಿಂಸಾಚಾರ ಮಾಡುವವರ ವಿರುದ್ಧ ಕಠಿಣ ಶಿಕ್ಷೆ ನೀಡುವಂತೆ ಕೇಂದ್ರ ತಕ್ಷಣ ಸಗ್ರೀವಾಜ್ಞೆ ಜಾರಿಗೆ ತರಬೇಕು. ಜತೆಗೆ ವೈದ್ಯಕೀಯ ಸೌಲಭ್ಯಗಳಲ್ಲಿ ಸಿಬ್ಬಂದಿಗೆ ಸುರಕ್ಷತಾ ಪ್ರೋಟೋಕಾಲ್ಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
==
ರೇಪ್ ಸಂತ್ರಸ್ತೆ ಪರ ಒಗ್ಗೂಡಿ ಫುಟ್ಬಾಲ್ ವೈರಿಗಳಿಂದ ಪ್ರತಿಭಟನೆ!
ಕೋಲ್ಕತಾ: ಭಾರತದ ಫುಟ್ಬಾಲ್ನಲ್ಲಿ ಮೋಹನ್ ಬಗಾನ್ ಹಾಗೂ ಈಸ್ಟ್ ಬೆಂಗಾಲ್ ತಂಡಗಳು ಪರಸ್ಪರ ಬದ್ಧ ವೈರಿಗಳು. ಆದರೆ ಭಾನುವಾರ ಎರಡೂ ತಂಡಗಳ ಬೆಂಬಲಿಗರು ಒಗ್ಗೂಡಿ ಸಾಲ್ಟ್ ಲೇಕ್ ಸ್ಟೇಡಿಯಂ ಬಳಿ ಮಹಿಳಾ ವೈದ್ಯೆಗೆ ನ್ಯಾಯಕ್ಕಾಗಿ ಆಗ್ರಹಿಸಿದರು. ಘೋರ ಅಪರಾಧವನ್ನು ಖಂಡಿಸಿ ಮತ್ತು ಕ್ರಮಕ್ಕೆ ಕರೆ ನೀಡಿದರು. ಈ ಅಪರೂಪದ ದೃಶ್ಯಕ್ಕೆ ಕೋಲ್ಕತಾ ಸಾಕ್ಷಿ ಆಯಿತು. ಈ ವೇಳೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.