ಸಾರಾಂಶ
ಕೇರಳ: ದೇಶ ವಿರೋಧಿ ಕೃತ್ಯಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ನಿಷೇಧಿಸಲ್ಪಟ್ಟಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ರಾಜಕೀಯ ಮುಖವಾಣಿಯಾದ ಎಸ್ಡಿಪಿಐ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಬೆಂಬಲಿಸುವುದಾಗಿ ಘೋಷಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಕೇರಳ ಎಸ್ಡಿಪಿಐ ಅಧ್ಯಕ್ಷ ಮೂವತ್ತುಪುಳ ಅಶ್ರಫ್, ‘ಧರ್ಮದ ಆಧಾರದಲ್ಲಿ ಜನರಿಗೆ ಪೌರತ್ವ ನೀಡಲು ಬಿಜೆಪಿ ಕಾನೂನು ರೂಪಿಸುತ್ತಿದೆ. ನಮ್ಮ ಸಂವಿಧಾನವನ್ನೇ ಬಿಜೆಪಿ ಪ್ರಶ್ನಿಸುತ್ತಿದೆ. ಹೀಗಾಗಿ ಆ ಪಕ್ಷದ ವಿರುದ್ಧ ಹೋರಾಡುತ್ತಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಬೆಂಬಲಿಸಲು ನಿರ್ಧರಿಸಿದ್ದೇವೆ’ ಎಂದು ಪ್ರಕಟಿಸಿದರು. ಈ ಬೆಂಬಲವನ್ನು ಕಾಂಗ್ರೆಸ್ ಕೂಡಾ ಸ್ವಾಗತಿಸಿದೆ.
ಆದರೆ ಈ ಬೆಳವಣಿಗೆ ಬಗ್ಗೆ ಬಿಜೆಪಿ ದೊಡ್ಡ ಪ್ರಶ್ನೆ ಮುಂದೊಡ್ಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್, ‘ಎಸ್ಡಿಪಿಐ ಮತ್ತು ಪಿಎಫ್ಐ ದೇಶ ಒಡೆಯಲು ಪ್ರಯತ್ನಿಸಿದ್ದವು. ಹಿಂದೂ, ಕ್ರೈಸ್ತ್ರರ ಹತ್ಯೆ, ದೇವಾಲಯ, ಚರ್ಚು ನಾಶ ಈ ಸಂಘಟನೆಗಳ ಗುರಿ. ಇಂತಹ ಸಮಾಜಘಾತುಕ ಶಕ್ತಿಗಳು ಬಹಿರಂಗವಾಗಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಬೆಂಬಲವನ್ನು ನೀಡಲಿದೆ ಎಂದು ಘೋಷಣೆ ಮಾಡಿವೆ. ಇದು ಅತ್ಯಂತ ಆಘಾತಕಾರಿ ಸಂಗತಿ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯ ನಿಲುವು ಏನಾಗಿರಲಿದೆ ಎಂದು ಪ್ರಶ್ನಿಸಿದ್ಧಾರೆ.
ಮತ್ತೊಂದೆಡೆ ಸಿಪಿಎಂ ಕೂಡಾ ಈ ಬೆಳವಣಿಗೆ ಬಗ್ಗೆ ರಾಜ್ಯದ ಜನತೆ ಚುನಾವಣೆಯಲ್ಲಿ ಯುಡಿಎಫ್ ಮೈತ್ರಿಕೂಟಕ್ಕೆ ಸೂಕ್ತ ಉತ್ತರ ನೀಡಲಿದ್ದಾರ ಎಂದು ಹೇಳಿದ್ದಾರೆ.
ಈ ನಡುವೆ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ‘ನಾವು ಎಸ್ಡಿಪಿಐನಿಂದ ಯಾವುದೇ ಸಹಾಯ ಕೇಳಿಲ್ಲ. ಚುನಾವಣೆಯಲ್ಲಿ ಪ್ರತಿಯೊಬ್ಬರು ಮತ ಕೇಳುವುದು ಗೆಲುವಿಗಾಗಿ. ಆದರೆ ಈ ಹಂತದಲ್ಲಿ ಪಕ್ಷದ ರಾಜಕೀಯ ಸಿದ್ಧಾಂತಗಳ ಜೊತೆಗೆ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದಿದ್ದಾರೆ.