ಸಾರಾಂಶ
ನವದೆಹಲಿ: ಜನಾಂಗೀಯ ಸಂಘರ್ಷಪೀಡಿತ ಮಣಿಪುರದ ಎಲ್ಲ ರಸ್ತೆಗಳನ್ನು ಮಾ.8ರಂದು ತರೆಯಬೇಕು. ಅಂದಿನಿಂದ ಜನರು ಎಲ್ಲಾ ಕಡೆಗಳಲ್ಲಿ ಮುಕ್ತವಾಗಿ ಓಡಾಡುವಂತತೆ ನೋಡಿಕೊಳ್ಳಬೇಕು ಇದಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆ.
ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟ ಬಳಿಕ ಮೊದಲ ಬಾರಿ ಭದ್ರತಾ ಪರಿಶೀಲನಾ ಸಭೆ ನಡೆಸಿದ ಶಾ, ‘ಶಾಂತಿ ಮರುಸ್ಥಾಪಿಸಲು ಕೇಂದ್ರ ಬದ್ಧವಾಗಿದ್ದು, ಅದಕ್ಕೆ ಎಲ್ಲ ಸಹಕಾರ ನೀಡುತ್ತದೆ. ಜತೆಗೆ, ರಾಜ್ಯದ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಗೊತ್ತುಪಡಿಸಿದ ಪ್ರವೇಶ ಸ್ಥಳಗಳ ಎರಡೂ ಬದಿಗಳಲ್ಲಿ ಬೇಲಿ ಹಾಕುವ ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಹಾಗೂ ಮಾದಕವಸ್ತು ಜಾಲವನ್ನು ಭೇದಿಸಿ ನಾಶ ಮಾಡಬೇಕು’ ಎಂದು ಸೂಚಿಸಿದರು
ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಜನಾಂಗೀಯ ಸಂಘರ್ಷ ಶುರುವಾಗಿ 250 ಜನರನ್ನು ಬಲಿ ಪಡೆದಿದ್ದು, ಸಿಎಂ ಬಿರೇನ್ ಸಿಂಗ್ ರಾಜೀನಾಮೆಯ ಬಳಿಕ 2025ರ ಫೆ.13ರಂದು ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿತ್ತು.
ಸಭೆಯಲ್ಲಿ ರಾಜ್ಯಪಾಲ ಅಜಯ್ ಭಲ್ಲಾ, ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ಇಲಾಖೆ ನಿರ್ದೇಶಕ ತಪನ್ ದೆಕಾ, ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥ ಮತ್ತು ಪೂರ್ವ ಕಮಾಂಡ್ನ ಕಮಾಂಡರ್ ಸೇರಿದ ಹಲವರು ಉಪಸ್ಥಿತರಿದ್ದರು.