ಜೂ.10ಕ್ಕೆ ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ

| N/A | Published : Jun 05 2025, 03:08 AM IST / Updated: Jun 05 2025, 04:49 AM IST

ಜೂ.10ಕ್ಕೆ ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಜೂ.8ರಂದು ಕರೆದೊಯ್ಯುವ ಬಹುನಿರೀಕ್ಷಿತ ಆಕ್ಸಿಯಂ-4 ಮಿಷನ್‌ನ ಉಡಾವಣೆ ಮತ್ತೆ ಮುಂದೂಡಿಕೆಯಾಗಿದೆ.

 ನವದೆಹಲಿ: ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಜೂ.8ರಂದು ಕರೆದೊಯ್ಯುವ ಬಹುನಿರೀಕ್ಷಿತ ಆಕ್ಸಿಯಂ-4 ಮಿಷನ್‌ನ ಉಡಾವಣೆ ಮತ್ತೆ ಮುಂದೂಡಿಕೆಯಾಗಿದೆ. ಜೂ.10ರ ಬೆಳಿಗ್ಗೆ 8:22ಕ್ಕೆ ನಾಸಾ ಕೆನಡಿಯಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39ಎನಿಂದ ಮಿಷನ್‌ನ ಉಡಾವಣೆ ಮಾಡಲಿದೆ ಎಂದು ಬಾಹ್ಯಾಕಾಶ ಕಂಪನಿ ಆಕ್ಸಿಯೋಂ ಸ್ಪೇಸ್ ತಿಳಿಸಿದೆ.

ಹ್ಯೂಸ್ಟನ್ ಮೂಲದ ಬಾಹ್ಯಾಕಾಶ ಕಂಪನಿ ಆಕ್ಸಿಯೋಂ ಸ್ಪೇಸ್ ಅಮೆರಿಕದ ಸ್ಪೇಸ್ ಎಕ್ಸ್ ಹಾಗೂ ನಾಸಾ ಜತೆಗಿನ ಸಹಭಾಗಿತ್ವದಲ್ಲಿ ಆಕ್ಸಿಯಂ-4 ಮಿಷನ್ ಅನ್ನು ಸಿದ್ಧಪಡಿಸಿದೆ. ಈ ಮಿಷನ್‌ನ ಉಡಾವಣೆ ಈ ಹಿಂದೆ ಮೇ 29 ಹಾಗೂ ಜೂ.8ಕ್ಕೆ ನಿಗದಿಯಾಗಿತ್ತು. ಕಾರ್ಯಾಚರಣೆ ಸಂಬಂಧಿತ ಶಿಷ್ಟಾಚಾರಗಳ ಕಾರಣದಿಂದ ಮತ್ತೆ ಜೂ.10ಕ್ಕೆ ಮುಂದೂಡಿಕೆಯಾಗಿದೆ.

ಮತ್ತೆ 300 ಜನರಿಗೆ ಕೋವಿಡ್; 2 ಸಾವು: ಒಟ್ಟು ಕೇಸ್ 4,302ಕ್ಕೇರಿಕೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸ 300 ಜನರಲ್ಲಿ ಕೊರೋನಾ ಸೋಂಕು ಕಂಡುಬಂದಿದ್ದು, ಸೋಂಕಿತರ ಸಂಖ್ಯೆ 4,302ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ. 3,281 ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಿಮಾಲಯ ಪ್ರದೇಶದಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ಕೇರಳದಲ್ಲಿ ಅತಿ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ದೆಹಲಿ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ.

ರೈಲ್ವೆ ತತ್ಕಾಲ್‌ ಟಿಕೆಟ್‌ಗೆ ಇ-ಆಧಾರ್ ದೃಢೀಕರಣ ಕಡ್ಡಾಯ

ನವದೆಹಲಿ: ತತ್ಕಾಲ್‌ ಟಿಕೆಟ್‌ ಬುಕ್ಕಿಂಗ್‌ ಅಕ್ರಮ ತಡೆಯುವ ಸಲುವಾಗಿ ರೈಲ್ವೆ ಇಲಾಖೆ, ತತ್ಕಾಲ್‌ ಟಿಕೆಟ್‌ಗೆ ಶೀಘ್ರ ಇ-ಆಧಾರ್‌ ದೃಢೀಕರಣ ಕಡ್ಡಾಯ ಮಾಡಲಿದೆ. ಇದು ಮಾಸಾಂತ್ಯಕ್ಕೆ ಜಾರಿಗೆ ಬರುವ ಸಂಭವವಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಟ್ವೀಟ್‌ ಮಾಡಿದ್ದು, ‘ತತ್ಕಾಲ್ ಟಿಕೆಟ್‌ ಬುಕ್ ಮಾಡಲು ಇ-ಆಧಾರ್ ದೃಢೀಕರಣ ಜಾರಿ ಮಾಡುತ್ತೇವೆ. ಇದು ನೈಜ ಪ್ರಯಾಣಿಕರಿಗೆ ಅಗತ್ಯವಿದ್ದಾಗ ದೃಢೀಕೃತ ಟಿಕೆಟ್‌ ಪಡೆಯಲು ಸಹಾಯ ಮಾಡುತ್ತದೆ’ ಎಂದಿದ್ದಾರೆ. ತತ್ಕಾಲ್‌ ಟಿಕೆಟ್‌ ಅನ್ನು ಅಕ್ರಮವಾಗಿ ಬುಕ್‌ ಮಾಡಿ ದುಬಾರಿ ಬೆಲೆಗೆ ಮಾರುವ ಜಾಲಕ್ಕೆ ಅಂಕುಶ ಹಾಕಲು ಈ ತೀರ್ಮಾನ ಮಾಡಲಾಗಿದೆ.

ಪಂಢರಪುರ ದೇಗುಲಕ್ಕೆ: ಟೋಕನ್‌ ದರ್ಶನ ಮಿತಿ 3600ಕ್ಕೆ ಏರಿಕೆ

ಮುಂಬೈ: ಮಹಾರಾಷ್ಟ್ರದ ಪ್ರಸಿದ್ಧ ಪಂಢರಪುರ ವಿಠಲ ರುಕ್ಮಿಣಿ ದೇವಸ್ಥಾನಕ್ಕೆ ನಿತ್ಯ ಟೋಕನ್‌ ಪಡೆದು ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು 1200 ರಿಂದ 3600ಕ್ಕೇರಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.ಈ ಬಗ್ಗೆ ದೇವಸ್ಥಾನದ ದರ್ಶನ ಸಮಿತಿ ಅಧ್ಯಕ್ಷ ರಾಜೇಂದ್ರ ಶೇಳ್ಕೆ ಮಾಹಿತಿ ನೀಡಿದ್ದು, ‘ ಈ ಹಿಂದೆ 6 ಸ್ಲಾಟ್‌ಗಳ ಮೂಲಕ 1200 ಜನರು ಟೋಕನ್ ಪಡೆದು ಪ್ರಾರ್ಥನೆ ಮಾಡುತ್ತಿದ್ದರು. ಈಗ ನಾವು ಸಾಮರ್ಥ್ಯವನ್ನು 3600ಕ್ಕೆ ಹೆಚ್ಚಿಸಿದ್ದೇವೆ. 2 ದಿನಗಳ ಹಿಂದೆಯೇ ಈ ವ್ಯವಸ್ಥೆ ಜಾರಿಗೆ ಬಂದಿದೆ’ ಎಂದರು.ಇದು ಟೋಕನ್‌ ಪಡೆದು ದರ್ಶನ ಪಡೆವವರಿಗೆ ಮಾತ್ರ ಅನ್ವಯಿಸುತ್ತದೆ. ಉಚಿತ ಧರ್ಮದರ್ಶನವನ್ನು ಸಾಮಾನ್ಯ ಸರದಿಯಲ್ಲಿ ತೆರಳಿ ಯಾರು ಬೇಕಾದರೂ ದರ್ಶನ ಪಡೆಯಹುದು.

ವಿಠಲ ರುಕ್ಮಿಣಿ ದೇವಸ್ಥಾನ ಮಹಾರಾಷ್ಟ್ರದ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದ್ದು, ವರ್ಷಕ್ಕೆ 2 ಕೋಟಿ ಭಕ್ತರು ಭೇಟಿ ನೀಡುತ್ತಾರೆ.==

ಇಂದು ರಾಮದರ್ಬಾರ್‌ ಪ್ರತಿಷ್ಠಾಪನೆ: ಸಿಎಂ ಯೋಗಿ ನೇತೃತ್ವ

ಅಯೋಧ್ಯೆ: ಅಯೋಧ್ಯೆ ರಾಮಮಂದಿರದಲ್ಲಿನ ರಾಮದರ್ಬಾರ್‌ ಪ್ರತಿಷ್ಠಾಪನೆ ತ್ರಯೋದಶಿ ದಿನವಾದ ಗುರುವಾರ ನಡೆಯಲಿದೆ. ಗುರುವಾರವೇ 53ನೇ ಜನ್ಮದಿನ ಆಚರಿಸಿಕೊಳ್ಳಲಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಮಾರಂಭದ ಸಾನ್ನಿಧ್ಯ ವಹಿಸಲಿದ್ದಾರೆ. ರಾಮ ದರ್ಬಾರ್‌ ಹಾಲ್‌ನಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮಂತರು ಆಸ್ಥಾನದಲ್ಲಿ ಇರುವ ಚಿತ್ರಣ ಸೃಷ್ಟಿಸಲಾಗಿದೆ. ಅದು ಲೋಕಾರ್ಪಣೆಗೊಳ್ಳಲಿದೆ. ಇದೇ ವೇಳೆ ಮಂದಿರ ಆವರಣದಲ್ಲಿ ಜೂ.3ರಿಮದಲೇ ಆರಂಭವಾಗಿರುವ ಪ್ರಾಣಪ್ರತಿಷ್ಠಾ ಮಹೋತ್ಸವ ಗುರುವಾರವೇ ಅಂತ್ಯಗೊಳ್ಳಲಿದೆ. ತ್ರಯೋಧಶಿಯು ಸರಯೂ ನದಿಯ ಉಗಮ ದಿನವೂ ಆಗಿದೆ ಎಂದು ದೇಗುಲ ಟ್ರಸ್ಟ್ ತಿಳಿಸಿದೆ.

Read more Articles on