ಸಾರಾಂಶ
ಪಹಲ್ಗಾಂ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ವಾಯು ಸೇನೆಗೆ ಭಾರೀ ಹಾನಿಯಾಗಿದೆ.
ನವದೆಹಲಿ: ಪಹಲ್ಗಾಂ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ವಾಯು ಸೇನೆಗೆ ಭಾರೀ ಹಾನಿಯಾಗಿದೆ. ಪಾಕ್ ವಾಯುಸೇನೆಯ 6 ಯುದ್ಧವಿಮಾನಗಳು, ಎರಡು ಭಾರೀ ಮೌಲ್ಯದ ಕಣ್ಗಾವಲು/ರೇಡಾರ್ ವಿಮಾನಗಳು, 10ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಡ್ರೋನ್ಗಳು, ಸಿ-130 ಹರ್ಕ್ಯುಲೆಸ್ ಮಿಲಿಟರಿ ಸರಕು ಸಾಗಣೆ ವಿಮಾನ ಮತ್ತು 30ಕ್ಕೂ ಹೆಚ್ಚು ಕ್ಷಿಪಣಿಗಳು ನಾಶವಾಗಿವೆ ಎಂದು ಮೂಲಗಳು ತಿಳಿಸಿವೆ.
ಭಾರತವು ರಫೇಲ್ ಮತ್ತು ಎಸ್ಯು-30 ಯುದ್ಧವಿಮಾನಗಳ ಮೂಲಕ ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಿಕೊಂಡು ಪಾಕಿಸ್ತಾನದ ಮೇಲೆ ಭಾರೀ ವಾಯು ದಾಳಿ ನಡೆಸಿತ್ತು. ಇದರಿಂದ ಕಂಗಾಲಾದ ಪಾಕಿಸ್ತಾನದ ತರಾತುರಿಯಲ್ಲಿ ಕದನವಿರಾಮದ ಪ್ರಸ್ತಾಪವಿಟ್ಟಿತು.
ಒಟ್ಟಾರೆ 4 ದಿನಗಳ ಕಾಲ ನಡೆದ ಈ ಆಪರೇಷನ್ ಸಿಂದೂರ ಕಾರ್ಯಾಚರಣೆಯ ತಾಂತ್ರಿಕ ವಿಶ್ಲೇಷಣೆಯ ಪ್ರಕಾರ, ಪಾಕಿಸ್ತಾನದ 6 ಯುದ್ಧವಿಮಾನಗಳನ್ನು ಭಾರತೀಯ ಯುದ್ಧವಿಮಾನಗಳಿಂದ ಹಾರಿಸಿದ ಕ್ಷಿಪಣಿಗಳೇ ಹೊಡೆದುರುಳಿಸಿವೆ. ಇನ್ನು ಎಲೆಕ್ಟ್ರಾನಿಕ್ ಯುದ್ಧಕ್ಕೆ ನೆರವಾಗಬಲ್ಲ ಅಥವಾ ವಾಯುದಾಳಿ ಕುರಿತು ಮುನ್ನೆಚ್ಚರಿಕೆ ನೀಡುವ ವಿಮಾನವೊಂದನ್ನು ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿ ಹೊಡೆದುರುಳಿಸಿದರೆ, ಸ್ಪೀಡನ್ ಮೂಲದ ಎಇಡಬ್ಲ್ಯುಆ್ಯಂಡ್ಸಿ ಕಣ್ಗಾವಲು ವಿಮಾನವನ್ನು ಭೋಲಾರಿ ಏರ್ಬೇಸ್ ಮೇಲಿನ ಕ್ಷಿಪಣಿ ದಾಳಿಯಲ್ಲಿ ನಾಶಪಡಿಸಲಾಗಿದೆ.
ಇನ್ನು ಯುದ್ಧದ ವೇಳೆ ಸರಕು ಸಾಗಣೆಗೆ ನೆರವಾಗುತ್ತಿದ್ದ ಸಿ-130 ಹರ್ಕ್ಯುಲೆಸ್ ಸರಕು ವಿಮಾನವನ್ನು ಪಂಜಾಬ್ ಪ್ರಾಂತ್ಯದ ಮುಲ್ತಾನ್ ಸಮೀಪದ ವಾಯುನೆಲೆ ಮೇಲಿನ ದಾಳಿಯಲ್ಲಿ ನಾಶವಾಗಿದೆ.
ಭಾರತದ ಕ್ಷಿಪಣಿ ದಾಳಿ ವೇಳೆ ಪಾಕಿಸ್ತಾನದ ಭೋಲಾರಿ ವಾಯುನೆಲೆಯಲ್ಲಿ ಹಲವು ಯುದ್ಧವಿಮಾನಗಳಿದ್ದವು ಎಂದು ಗುಪ್ತಚರ ಮೂಲಗಳು ಖಚಿತಪಡಿಸಿವೆ. ಆದರೆ ಅವುಗಳಲ್ಲಿ ಎಷ್ಟು ನಾಶವಾಗಿವೆ ಎಂಬ ಕುರಿತು ಪಾಕಿಸ್ತಾನ ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ ಎಂದು ಮೂಲಗಳು ಹೇಳಿವೆ.
ಚೀನಾ ನಿರ್ಮಿತ ಡ್ರೋನ್ಗಳು ಪುಡಿಪುಡಿ
ಯುದ್ಧವಿಮಾನಗಳು ಮಾತ್ರವಲ್ಲದೆ ಚೀನಾ ನಿರ್ಮಿತ ಹಲವು ವಿಂಗ್ ಲೂಂಗ್ ಡ್ರೋನ್ಗಳು, ಮಧ್ಯಮ ದೂರು ವ್ಯಾಪ್ತಿಯ ಹಲವು ಯುಎವಿಗಳೂ ಭಾರತದ ಕ್ಷಿಪಣಿ ದಾಳಿಗೆ ಪುಡಿಪುಡಿಯಾಗಿವೆ. ಒಟ್ಟಾರೆ ಭಾರತದ ವಾಯುದಾಳಿಯಿಂದ ಪಾಕಿಸ್ತಾನದ ವಾಯು ಹಾಗೂ ಭೂಸೇನೆಗೆ ಭಾರೀ ಹಾನಿಯಾಗಿದೆ. ಆದರೆ, ಪಾಕಿಸ್ತಾನ ಈ ಹಾನಿ ವಿವರವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಹೇಳಲಾಗಿದೆ.
ಭಾರತದ ನಿಯೋಗ ನಿರ್ಬಂಧಿಸುವ ಪಾಕ್ ಯತ್ನ ವಿಫಲ
ನವದೆಹಲಿ: ಪಾಕಿಸ್ತಾನದ ಉಗ್ರಮುಖವನ್ನು ಬಯಲು ಮಾಡಲು ಮಲೇಷ್ಯಾಕ್ಕೆ ತೆರಳಿರುವ ಸರ್ವಪಕ್ಷ ನಿಯೋಗದ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಪಾಕಿಸ್ತಾನ ರಾಯಭಾರ ಕಚೇರಿಯು ಮಲೇಷ್ಯಾಕ್ಕೆ ಒತ್ತಾಯಿಸಿತ್ತು. ಆದರೆ ಪಾಕ್ನ ಬೇಡಿಕೆಯನ್ನು ಮಲೇಷ್ಯಾ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿದ್ದು, ಭಾರತದ ನಿಯೋಗಕ್ಕೆ ಸಂಪೂರ್ಣ ಸಹಕಾರ ನೀಡಿದೆ.ಈ ಮೂಲಕ ವಿದೇಶದಲ್ಲೂ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದ್ದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಜೆಡಿಯು ಸಂಸದ ಸಂಜಯ್ ಝಾ, ಬಿಜೆಪಿ ಸಂಸದರಾದ ಅಪರಾಜಿತಾ ಸಾರಂಗಿ, ಬ್ರಿಜ್ ಲಾಲ್, ಪ್ರದಾನ್ ಬರೂವಾ, ಹೇಮಾಂಗ ಜೋಶಿ, ಟಿಎಂಸಿ ಸಂಸದ ಅಭಿಷೇಕ ಬ್ಯಾನರ್ಜಿ, ಸಿಪಿಎಂನ ಜಾನ್ ಬ್ರಿಟ್ಟಾಸ್, ಕಾಂಗ್ರೆಸ್ನ ಸಲ್ಮಾನ್ ಖುರ್ಷಿದ್ ಹಾಗೂ ಮಾಜಿ ರಾಜತಾಂತ್ರಿಕ ಮೋಹನ್ ಕುಮಾರ್ ಅವರನ್ನೊಳಗೊಂಡ ನಿಯೋಗ ಮಲೇಷ್ಯಾಕ್ಕೆ ತೆರಳಿತ್ತು. ಪೂರ್ವನಿರ್ಧಾರದಂತೆ ಎಲ್ಲ ಸಭೆ, ಕಾರ್ಯಕ್ರಮಗಳು ನಡೆದಿದ್ದು, ಪಾಕ್ನ ಕುತಂತ್ರ ವಿಫಲವಾಗಿದೆ.