ಸಾರಾಂಶ
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಅವರನ್ನು 20 ಬಾರಿ ರಾಜಕೀಯದಲ್ಲಿ ಲಾಂಚ್ ಮಾಡಲು ಪ್ರಯತ್ನಿಸಿದರು.
ಹುಕ್ಕೇರಿ : ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಅವರನ್ನು 20 ಬಾರಿ ರಾಜಕೀಯದಲ್ಲಿ ಲಾಂಚ್ ಮಾಡಲು ಪ್ರಯತ್ನಿಸಿದರು. ಆದರೆ ಪ್ರತಿ ಪ್ರಯತ್ನದಲ್ಲೂ ಅವರಿಗೆ ಸೋಲಾಯಿತು. ಇದೀಗ ಇದೀಗ ರಾಹುಲ್ ಗಾಂಧಿ ರಾಯ್ಬರೇಲಿಯಿಂದ ಕಣಕ್ಕಿಳಿದಿದ್ದು, ಈ ಬಾರಿಯೂ ಅವರನ್ನು ರಾಜಕೀಯ ಮುನ್ನಲೆಗೆ ತರುವ ಪ್ರಯತ್ನ ವಿಫಲವಾಗಲಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ವ್ಯಂಗ್ಯವಾಡಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಶುಕ್ರವಾರ ಪ್ರಚಾರ ನಡೆಸಿ ಮಾತನಾಡಿದ ಅವರು, ಒಂದು ಕಡೆ ಮೋದಿ ಮೊದಲ ಪ್ರಯತ್ನದಲ್ಲೇ ಚಂದ್ರಯಾನ-3 ಉಡ್ಡಯನ ಯಶಸ್ವಿಯಾಗಿದೆ. ಇನ್ನೊಂದು ಕಡೆ ಸೋನಿಯಾ ಗಾಂಧಿ ಅವರು ರಾಹುಲ್ ಯಾನದ ಉಡ್ಡಯನ (ರಾಜಕೀಯ ಮುನ್ನಲೆಗೆ ತರುವ ಪ್ರಯತ್ನ)ಕ್ಕೆ ಸುಮಾರು 20 ಬಾರಿ ಪ್ರಯತ್ನ ಮಾಡಿದರು. ಆದರೆ ಪ್ರತಿ ಬಾರಿಯೂ ಅವರ ಯೋಜನೆ ವಿಫಲವಾಯಿತು. ಇದೀಗ 21ನೇ ಪ್ರಯತ್ನದ ಭಾಗವಾಗಿ ರಾಹುಲ್ ಗಾಂಧಿ ಅವರು ಅಮೇಥಿಯಿಂದ ರಾಯ್ಬರೇಲಿಗೆ ಪರಾರಿಯಾಗಿದ್ದಾರೆ. ಆದರೆ ರಾಯ್ಬರೇರಿಯಲ್ಲೂ ಅವರು ಸೋಲಲಿದ್ದಾರೆ. ಬಿಜೆಪಿ ಅಭ್ಯರ್ಥಿ ಅವರು ದೊಡ್ಡ ಅಂತರದಿಂದ ಗೆಲ್ಲಲಿದ್ದಾರೆ ಎಂದು ಶಾ ಭವಿಷ್ಯ ನುಡಿದರು.
ಕರ್ನಾಟಕ ಬರ್ಬಾದ್:
ಕೇವಲ 10 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಬರ್ಬಾದ್ ಮಾಡಿದೆ. ವೋಟ್ ಹಾಕದಿದ್ದರೆ ಕರೆಂಟ್ ಕಟ್ ಮಾಡುತ್ತೇವೆ ಎಂದು ಈ ಸರ್ಕಾರದಲ್ಲಿ ಬೆದರಿಕೆ ಹಾಕಲಾಗುತ್ತದೆ. ಮೋದಿ ಅವರು ಮತ್ತೆ ಪ್ರಧಾನಿಯಾದರೆ ಕರ್ನಾಟಕವನ್ನು ರಕ್ಷಣೆ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರದಿಂದ ಕರ್ನಾಟಕಕ್ಕೆ ರಕ್ಷಣೆ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ₹10 ಸಾವಿರ ಹಣ ಜಮೆ ಆಗುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ತನ್ನ ಪಾಲಿನ ₹4 ಸಾವಿರ ಹಣ ಸ್ಥಗಿತಗೊಳಿಸಿದೆ. ರೈತ ಪರ ಇದ್ದೇವೆ ಎನ್ನುವ ಈ ಸರ್ಕಾರ ರೈತರಿಗೆ ರಾಜ್ಯ ಸರ್ಕಾರದಿಂದ ಕೊಡುತ್ತಿದ್ದ ₹4 ಸಾವಿರ ಹಣವನ್ನು ಸ್ಥಗಿತಗೊಳಿಸಿದ್ದು ಯಾಕೆ ಎಂಬುದಕ್ಕೆ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ತಲೆ ಕೆಳಗೆ ಮಾಡಿ ತಕ್ಕ ಶಾಸ್ತಿ ಮಾಡ್ತಿವಿ:
ಹುಬ್ಬಳ್ಳಿಯಲ್ಲಿ ನೇಹಾಳಿಗೆ ನ್ಯಾಯ ಸಿಗಬೇಕಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಆಗ ಅನ್ಯಾಯ ಮಾಡಿದವರಿಗೆ ತಲೆ ಕೆಳಗೆ ಮಾಡಿ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಗುಡುಗಿದ ಶಾ, ಮತಾಂತರ ಆಗಲು ವಿರೋಧಿಸಿದ್ದಕ್ಕೆ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯಾಗಿದೆ. ಆದರೆ, ಕಾಂಗ್ರೆಸ್ನವರು ಈ ಪ್ರಕರಣವನ್ನು ವೈಯಕ್ತಿಕ ಎಂದು ಹೇಳಿದ್ದರು ಎಂದು ಕಿಡಿಕಾರಿದರು.
ಜಾರಕಿಹೊಳಿ ಕುಟುಂಬದ ವಿರುದ್ಧ ಕಿಡಿ: ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ತಂದೆ ಅನಧಿಕೃತವಾಗಿ ಗಣಿಗಾರಿಕೆ ಮಾಡುತ್ತಾರೆ. ಅವರ ಕುಟುಂಬಸ್ಥರು ಗುಡ್ಡ ತೆರವು ಮಾಡಿ ಜಾಗವನ್ನು ಕಬ್ಜಾ ತೆಗೆದುಕೊಂಡಿದ್ದಾರೆ. ಹಿಂದು ಸಂಸ್ಕೃತಿ, ಪರಂಪರೆಗೆ ಅವಮಾನ ಮಾಡುತ್ತಾರೆ. ಹಿಂದು ಮಹಾನ್ ನಾಯಕರನ್ನು ಅಪಮಾನಿಸುತ್ತಾರೆ. ಛತ್ರಪತಿ ಶಿವಾಜಿ ಮಹಾರಾಜ ಮತ್ತು ಸಂಭಾಜಿ ಮಹಾರಾಜರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಕಳ್ಳಭಟ್ಟಿ ಸಾರಾಯಿ ತಯಾರಿಸುವವರು ಇವರ ಜೊತೆಗಿದ್ದಾರೆ. ಸಾವಿರಾರು ಎಕರೆ ಜಮೀನನ್ನೂ ಅವರು ಕಬಳಿಸಿದ್ದಾರೆ. ಅವರ ಏಜೆಂಟರು ಕಮಿಷನ್ ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೆಸರೆತ್ತದೆ ಅವರ ಕುಟುಂಬದ ವಿರುದ್ಧ ಹರಿಹಾಯ್ದರು.
ದೇಶ ಸುರಕ್ಷಿತವಾಗಲ್ಲ: ರಾಹುಲ್ ಬಾಬಾ ಆ್ಯಂಡ್ ಕಂಪನಿ ಈ ದೇಶವನ್ನು ಸುರಕ್ಷಿತವಾಗಿ ಇಡುವುದಿಲ್ಲ. ಕೇವಲ ಮೋದಿ ಅವರಿಂದ ಮಾತ್ರ ದೇಶ ಸುರಕ್ಷಿತವಾಗಿರಲು ಸಾಧ್ಯ ಎಂದು ಇದೇ ವೇಳೆ ಶಾ ಹೇಳಿದರು.
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಆದಾಗ ಕಾಂಗ್ರೆಸ್ಸಿಗರು ಸಿಲಿಂಡರ್ ಸ್ಫೋಟ ಎಂದು ಹೇಳಿದರು. ಆದರೆ ಪ್ರಕರಣದಲ್ಲಿ ಎಸ್ಡಿಪಿಐನ ಸಮಾಜವಿರೋಧಿಗಳ ಕೈವಾಡವಿದೆ ಎಂಬುದನ್ನು ರಾಷ್ಟ್ರೀಯ ತನಿಖಾ ದಳದ ತನಿಖೆಯಿಂದ ಬೆಳಕಿಗೆ ಬಂತು. ಅಂಥ ಎಸ್ಡಿಪಿಐ ಸಹಕಾರ ಪಡೆದು ಕಾಂಗ್ರೆಸ್ ಇದೀಗ ಲೋಕಸಭಾ ಚುನಾವಣೆ ಎದುರಿಸುತ್ತಿದೆ. ಪ್ರಧಾನಿ ಮೋದಿ ಅವರು ಈ ದೇಶಕ್ಕೆ ಅಂಟಿದ್ದ ಭಯೋತ್ಪಾದನೆ ನಿರ್ಮೂಲನೆ ಮಾಡಿದರು. ಆದರೆ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಸ್ಡಿಪಿಐಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
10 ವರ್ಷಗಳಲ್ಲಿ ಮೋದಿಯವರ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪ ಕೇಳಿ ಬಂದಿಲ್ಲ. ಮೂರು ತಿಂಗಳಿಗೊಮ್ಮೆ ವಿದೇಶ ಪ್ರಯಾಣ ಮಾಡುವ ರಾಹುಲ್ ಬಾಬಾ ಬೇಕಾ? ಅಥವಾ ರಜೆ ಪಡೆಯದೇ ಕೆಲಸ ಮಾಡುವ ಮೋದಿ ಬೇಕಾ ಎಂದು ಜನರೇ ನಿರ್ಧರಿಸಬೇಕು ಎಂದರು.