ಸಾರಾಂಶ
ನವದೆಹಲಿ: ಲೋಕಸಭೆ ಚುನಾವಣೆ ಪೂರ್ವದಲ್ಲಿ ಪತನದ ಭೀತಿ ಎದುರಿಸುತ್ತಿದ್ದ ಹಿಮಾಚಲಪ್ರದೇಶದ ಸುಖ್ವಿಂದರ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಲ ವಿಧಾನಸಭೆ ಉಪಚುನಾವಣೆಯಿಂದಾಗಿ ಮತ್ತಷ್ಟು ವೃದ್ಧಿಯಾಗಿದೆ. ಇದರಿಂದಾಗಿ ಸರ್ಕಾರ ಮತ್ತಷ್ಟು ಗಟ್ಟಿಯಾಗಿದೆ. ಜತೆಗೆ ಪಕ್ಷದ ಒಳಗೂ ಸುಖು ಮತ್ತಷ್ಟು ಬಲಾಢ್ಯರಾಗಿದ್ದಾರೆ.
ಲೋಕಸಭೆ ಚುನಾವಣೆ ಪೂರ್ವದಲ್ಲಿ ಆಂತರಿಕ ಕಚ್ಚಾಟ ಹಾಗೂ ಶಾಸಕರ ರಾಜೀನಾಮೆಯಿಂದಾಗಿ ಕಾಂಗ್ರೆಸ್ ಸರ್ಕಾರದ ಬಲ 36ಕ್ಕೆ ಕುಸಿದಿತ್ತು. ಹೀಗಾಗಿ ಸರ್ಕಾರ ಅಲ್ಪಮತದ ಅಂಚಿಗೆ ತಲುಪಿತ್ತು. ಆರು ವಿಧಾನಸಭೆ ಕ್ಷೇತ್ರಗಳಿಗೆ ಲೋಕಸಭೆ ಜತೆಗೇ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ 4 ಸ್ಥಾನ ಗೆದ್ದಿತ್ತು. ಇದರಿಂದಾಗಿ ಪಕ್ಷದ ಬಲ 38ಕ್ಕೇರಿಕೆಯಾಗಿತ್ತು.
68 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 35 ಸ್ಥಾನ ಬೇಕು. ಸರಳ ಬಹುಮತ ಹೊಂದಿದ್ದ ಸರ್ಕಾರ ಇದೀಗ ಮೂರು ಪಕ್ಷೇತರ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರಿಂದ ನಡೆದ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ 2 ಸ್ಥಾನ ಗೆದ್ದಿದೆ. ತನ್ಮೂಲಕ ಸರ್ಕಾರದ ಬಲ 40ಕ್ಕೆ ವೃದ್ಧಿಯಾಗಿದೆ. 2022ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೂಡ 40 ಸ್ಥಾನ.
ಪಕ್ಷೇತರರಿಲ್ಲ- ಇದೇ ಮೊದಲು:
ಈ ನಡುವೆ, ಹಿಮಾಚಲ ವಿಧಾನಸಭೆಯಲ್ಲಿ ಬಿಜೆಪಿ ಸೇರಿದ ಪಕ್ಷೇತರರು ಸೋತಿದ್ದಾರೆ. ಹೀಗಾಗಿ ಇದೇ ಮೊದಲ ಬಾರಿ ವಿಧಾನಸಭೆಯಲ್ಲಿ ಒಬ್ಬರೂ ಪಕ್ಷೇತರರು ಇಲ್ಲದಂತಾಗಿದೆ.