ಸಾರಾಂಶ
ತಿರುವನಂತಪುರ: ಕೇರಳದ ಮೊದಲ ಬಿಜೆಪಿ ಸಂಸದ ಹಾಗೂ ಭಾನುವಾರ ಸಂಜೆಯಷ್ಟೇ ನರೇಂದ್ರ ಮೋದಿ ಮಂತ್ರಿಮಂಡಲ ಸೇರಿದ ಮಲಯಾಳಿ ನಟ ಸುರೇಶ್ ಗೋಪಿ ಅವರು ನೀಡಿದ್ದರು ಎನ್ನಲಾದ ಕೆಲವು ನಕಾರಾತ್ಮಕ ಹೇಳಿಕೆಗಳು, ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಪುಕಾರುಗಳಿಗೆ ಕಾರಣವಾಗಿವೆ. ಆದರೆ ‘ಇದು ಸುಳ್ಳು’ ಎಂದಿರುವ ಗೋಪಿ, ‘ಮೋದಿ ಸರ್ಕಾರದ ಮಂತ್ರಿ ಪರಿಷತ್ತಿನಲ್ಲಿ ಇರುವುದು ಮತ್ತು ಕೇರಳದ ಜನರನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ’ ಎಂದಿದ್ದಾರೆ.ಈ ವಿವಾದದ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ‘ಸುಮ್ಮನೇ ನಾಟಕ ಮಾಡದೇ ಆಸಕ್ತಿ ಇರುವವರನ್ನು ಮೋದಿ ಅವರು ಮಂತ್ರಿ ಮಾಡಬೇಕು. ಕೇವಲ ಯಾರನ್ನೋ ಮಂತ್ರಿ ಮಾಡಿದೆ ಎಂದು ನಾಟಕ ಮಾಡಬಾರದು’ ಎಂದು ಟೀಕಿಸಿದೆ.
ಆಗಿದ್ದೇನು?:
ಭಾನುವಾರ ಮಂತ್ರಿ ಆಗುವೆ ಎಂಬ ಸೂಚನೆಯ ಹಿನ್ನೆಲೆಯಲ್ಲಿ, ಶನಿವಾರ ದಿಲ್ಲಿಗೆ ತೆರಳಿದ್ದ ಗೋಪಿ, ಭಾನುವಾರ ಬೆಳಗ್ಗೆ ತಿರುವನಂತಪುರಕ್ಕೆ ವಾಪಸಾಗಿದ್ದರು ಎನ್ನಲಾಗಿದೆ. (ಪುನಃ ಮತ್ತೆ ಭಾನುವಾರ ಮಧ್ಯಾಹ್ನ ದಿಲ್ಲಿಗೆ ಹೋದರು). ಇದರ ನಡುವೆ, ‘ನನಗೆ ಮಂತ್ರಿ ಆಗಲು ಆಸಕ್ತಿ ಇಲ್ಲ. ಮಂತ್ರಿ ಆಗುವ ಬದಲು, ಕೇರಳದ ಹಲವು ಅಭಿವೃದ್ಧಿ ಕೆಲಸಗಳನ್ನು ಮಂತ್ರಿಗಳ ಜತೆ ಕೆಲಸ ಮಾಡಲು ನನಗೆ ಇಷ್ಟ. ಅಲ್ಲದೆ, ದಕ್ಷಿಣದಲ್ಲಿ ಬಿಜೆಪಿ ಕಟ್ಟುವುದೂ ನನ್ನ ಗುರಿ. ಇದರ ಜತೆಗೆ ನನಗೆ ಚಿತ್ರರಂಗಕ್ಕೆ ಮರಳಿ ಹೋಗಬೇಕು ಎನ್ನಿಸುತ್ತಿದೆ’ ಎಂದು ಗೋಪಿ ನೀಡಿದ್ದಾರೆ ಎಂಬ ಸಂದರ್ಶನದ ವಿಡಿಯೋ ತುಣುಕನ್ನು ಕೇರಳ ಕಾಂಗ್ರೆಸ್ ತನ್ನ ಟ್ವೀಟರ್ ಖಾತೆಯಲ್ಲಿ ಪ್ರಸಾರ ಮಾಡಿತ್ತು.
ಇದರ ಬೆನ್ನಲ್ಲೇ ಕೇರಳದ ಸುದ್ದಿ ಮಾಧ್ಯಮಗಳು, ‘ಗೋಪಿ ಶೀಘ್ರ ರಾಜೀನಾಮೆ ನೀಡಲಿದ್ದಾರೆ. ಮತ್ತೆ ಚಿತ್ರರಂಗಕ್ಕೆ ಮರಳಲಿದ್ದಾರೆ’ ಎಂಬ ಸುದ್ದಿ ಪ್ರಸಾರ ಮಾಡಿದ್ದವು.