ಸಾರಾಂಶ
ನವದೆಹಲಿ: ‘ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ದೇಶಕ್ಕೆ ಸೇನೆಯ ಅಗತ್ಯವೇ ಇಲ್ಲ. ಅವರ ಕೆಲಸವನ್ನು ಪೊಲೀಸರು ಮಾಡುತ್ತಾರೆ ಎಂಬ ನೀತಿ ಹೊಂದಿದ್ದರು’ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದರು.
ಲೋಕಸಭೆಯಲ್ಲಿ ಆಪರೇಷನ್ ಸಿಂದೂರ ಚರ್ಚೆಯಲ್ಲಿ ಮಾತನಾಡಿದ ಅವರು, ‘ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶಕ್ಕೆ ಸೇನೆಯ ಅಗತ್ಯವಿಲ್ಲ ಎಂಬ ನೀತಿಯನ್ನು ಪಂಡಿತ್ ನೆಹರು ಹೊಂದಿದ್ದರು. ನಮ್ಮನ್ನು ಅಹಿಂಸಾ ನೀತಿಯಾಗಿರುವ ಕಾರಣ ಸೇನೆಯನ್ನು ಆಧುನೀಕರಿಸುವ ಯಾವುದೇ ಅಗತ್ಯವಿಲ್ಲ ಎಂದು ಪಂಡಿತ್ ನೆಹರು ಅವರು ಜನರಲ್ ಲಾಕ್ಹಾರ್ಟ್ ಮಾರ್ಟಿನ್ ಅವರ ಬಳಿ ಹೇಳಿದ್ದರು. ಸೇನೆ ಮಾಡುವ ಕೆಲಸವನ್ನು ಪೊಲೀಸರೇ ಮಾಡುತ್ತಾರೆ ಎಂದು ನೆಹರು ಹೇಳಿದ್ದರು’ ಎಂದರು.
ಸುಪ್ರಿಯಾ ತರಾಟೆ:
ತೇಜಸ್ವಿ ಸೂರ್ಯ ಹೇಳಿಕೆಗೆ ಅಸಮಾಧಾನ ಹೊರಹಾಕಿರುವ ಎನ್ಸಿಪಿ (ಎಸ್ಪಿ) ಸಂಸದೆ ಸುಪ್ರಿಯಾ ಸುಳೆ, ತೇಜಸ್ವಿ ತಮ್ಮ ಹೇಳಿಕೆಯಿಂದ ಕೋಟ್ಯಂತರ ಸೈನಿಕರಿಗೆ ಅವಮಾನಿಸಿದ್ದಾರೆ. ಈ ಮೊದಲು ಸೇನೆ ಯಾವುದೇ ಶೌರ್ಯ ತೋರಿಯೇ ಇಲ್ಲ ಎಂದಿದ್ದಾರೆ. ಇತಿಹಾಸ ತಿಳಿಯದಿದ್ದರೆ, ಮೊದಲ ಹೋಗಿ ಓದಿ. ಅಥವಾ ಪಂಡಿತ್ ನೆಹರು ಬಗೆಗಿನ ಹೇಳಿಕೆಗೆ ಸಾಕ್ಷಿ ನೀಡಲಿ’ ಎಂದು ಆಗ್ರಹಿಸಿದ್ದಾರೆ.