ಸಾರಾಂಶ
ನವದೆಹಲಿ: ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಪ್ರಾಮುಖ್ಯ ಸಿಗಬೇಕು ಎಂಬ ಕೂಗು ದೇಶಾದ್ಯಂತ ಹೆಚ್ಚುತ್ತಿರುವ ನಡುವೆಯೇ, ‘ಪ್ರಾದೇಶಿಕ ಭಾಷೆಗಳೇ ದೇಶದ ಅನನ್ಯತೆಯ ಕೇಂದ್ರಬಿಂದು. ವಿದೇಶಿ ಭಾಷೆಗಳಿಗಿಂತ ದೇಶೀಯ ಭಾಷೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.
ಮಾಜಿ ಐಎಎಸ್ ಅಧಿಕಾರಿ ಅಶುತೋಷ್ ಅಗ್ನಿಹೋತ್ರಿ ಬರೆದ ‘ಮೈ ಬೂಂದ್ ಸ್ವಯಂ, ಖುದ್ ಸಾಗರ್ ಹೂಂ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಭಾಷೆಗಳನ್ನು ಬಳಸುವ ಮೂಲಕ ಶ್ರೀಮಂತ ಭಾಷಾ ಪರಂಪರೆಯನ್ನು ಉಳಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.
‘ಈ ದೇಶದಲ್ಲಿ ಇಂಗ್ಲಿಷ್ ಮಾತನಾಡುವ ಜನರು ನಾಚಿಕೆ ಪಟ್ಟುಕೊಳ್ಳುವ ದಿನಗಳು ಶೀಘ್ರದಲ್ಲೇ ಬರುತ್ತವೆ. ಅಂತಹ ಸಮಾಜ ಸದ್ಯದಲ್ಲೇ ನಿರ್ಮಾಣವಾಗುತ್ತದೆ. ದೃಢನಿಶ್ಚಯ ಇರುವವರು ಮಾತ್ರ ಬದಲಾವಣೆ ತರಲು ಸಾಧ್ಯ. ನಮ್ಮ ದೇಶದ ಭಾಷೆಗಳೇ ನಮ್ಮ ಸಂಸ್ಕೃತಿಯ ಆಭರಣಗಳು ಎಂಬುದು ನನ್ನ ವಿಶ್ವಾಸ. ನಮ್ಮ ಭಾಷೆಗಳಿಲ್ಲದೆ, ನಾವು ನಿಜವಾದ ಭಾರತೀಯರಾಗಿ ಉಳಿಯುವುದಿಲ್ಲ’ ಎಂದರು.
‘ನಮ್ಮ ದೇಶ, ಸಂಸ್ಕೃತಿ, ಇತಿಹಾಸ ಮತ್ತು ಧರ್ಮವನ್ನು ಅರ್ಥಮಾಡಿಕೊಳ್ಳಲು ಯಾವುದೇ ವಿದೇಶಿ ಭಾಷೆ ಸಾಕಾಗುವುದಿಲ್ಲ. ಅರೆಬೆಂದ ವಿದೇಶಿ ಭಾಷೆಗಳ ಮೂಲಕ ಸಂಪೂರ್ಣ ಭಾರತದ ಪರಿಕಲ್ಪನೆಯನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಈ ಹೋರಾಟ ಎಷ್ಟು ಕಠಿಣ ಎಂದು ನನಗೆ ಸಂಪೂರ್ಣವಾಗಿ ತಿಳಿದಿದೆ, ಆದರೆ ಭಾರತೀಯ ಸಮಾಜವು ಇದರಲ್ಲಿ ಗೆಲ್ಲುತ್ತದೆ ಎಂಬ ಸಂಪೂರ್ಣ ವಿಶ್ವಾಸವೂ ನನಗಿದೆ. ಮತ್ತೊಮ್ಮೆ, ನಾವು ನಮ್ಮ ದೇಶವನ್ನು ನಮ್ಮದೇ ಭಾಷೆಗಳಲ್ಲಿ ನಡೆಸುತ್ತೇವೆ ಮತ್ತು ಜಗತ್ತನ್ನು ಸಹ ಮುನ್ನಡೆಸುತ್ತೇವೆ ಎಂದು ಸ್ವಾಭಿಮಾನದಿಂದ ಹೇಳುತ್ತೇನೆ’ ಎಂದರು.