ಸಾರಾಂಶ
ಢಾಕಾ: ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರದ ನಡುವೆಯೇ, ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲಾಗಿದೆ. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಬೆನ್ನಲ್ಲೇ ಹಿಂಸಾಚಾರ ತಾರಕಕ್ಕೇರಿದ್ದು, ದೇಶದ ಹಲವು ಭಾಗಗಳಲ್ಲಿ ಹಿಂದೂಗಳು, ಅವರಿಗೆ ಸೇರಿದ ಆಸ್ತಿ ಹಾಗೂ ದೇಗುಲಗಳನ್ನು ಧ್ವಂಸಗೊಳಿಸಲಾಗಿದೆ.ಮೀಸಲಿಗಾಗಿ ನಡೆದ ಹೋರಾಟ ಹಿಂಸಾರೂಪ ಪಡೆದು ದೇಶದಲ್ಲಿ ಅಯೋಮಯ ಸ್ಥಿತಿ ನಿರ್ಮಾಣವಾಗಿರುವುದರ ಲಾಭ ಪಡೆದಿರುವ ಮತೀಯ ಶಕ್ತಿಗಳು ಮತ್ತು ದುಷ್ಕರ್ಮಿಗಳು ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಹಿಂಸಿಸುತ್ತಿದ್ದಾರೆ.ಸೋಮವಾರ ಬೆಳಗ್ಗೆಯಿಂದಲೇ ಹಿಂದೂಗಳ ಮೇಲೆ, ದೇಗುಲಗಳ ಮೇಲೆ, ಹಿಂದೂಗಳ ಮನೆ, ಕಟ್ಟಡಗಳು, ವಾಣಿಜ್ಯ ಸಮುಚ್ಚಯಗಳ ಮೇಲೆ ದಾಳಿ ನಡೆಸಲಾಗಿದೆ.ಈ ಪೈಕಿ ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಹಿಂದೂಗಳನ್ನು ಹತ್ಯೆ ಮಾಡಿದ್ದರೆ, ಇನ್ನು ಹಲವು ಕಡೆ ಹಿಂದೂಗಳ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದೆ. ಹಲವು ಕಡೆ ದೇಗುಲಗಳಿಗೆ ನುಗ್ಗಿ ವಿಗ್ರಹ ಧ್ವಂಸ ಮಾಡುವ, ಬೆಂಕಿ ಹಚ್ಚಿ ಸಂಭ್ರಮಿಸುವ ವಿಕೃತಿಗಳೂ ನಡೆದಿವೆ. ಜೊತೆಗೆ ವಾಣಿಜ್ಯ ಸ್ಥಳಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸಿ ಕೈಗೆ ಸಿಕ್ಕ ವಸ್ತುಗಳನ್ನು ದೋಚಲಾಗುತ್ತಿದೆ.ಇನ್ನು ಕೆಲವು ಕಡೆ ಹಿಂದೂ ಮಹಿಳೆಯರನ್ನು ಅಪಹರಣ ಮಾಡಿರುವ ಆಘಾತಕಾರಿ ವರದಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿವೆ. ಇದರ ನಡುವೆಯೇ ಹಲವು ಹಿಂದೂ ಕುಟುಂಬಗಳು ತಮ್ಮ ಮನೆ ಮೇಲೆ ದಾಳಿ ನಡೆದ ವೇಳೆ ಮನೆಯೊಳಗೆ ಜೀವರಕ್ಷಣೆಗಾಗಿ ಚೀರಾಡುತ್ತಿರುವ, ಮನೆಗೆ ಬೆಂಕಿ ಹಚ್ಚಿದ ವೇಳೆ ಭೀತಿಯಿಂದ ಕೂಗಾಡುತ್ತಿರುವ, ತಮ್ಮನ್ನು ಭಾರತಕ್ಕೆ ಕರೆಸಿಕೊಂಡು ಪ್ರಾಣಭಿಕ್ಷೆ ನೀಡುವಂತೆ ಮನವಿ ಮಾಡಿಕೊಂಡ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.
ಪ್ರತಿಭಟನಾಕಾರರು ಇಸ್ಕಾನ್ ಹಾಗೂ ಕಲ್ಕಿ ದೇಗುಲಗಳನ್ನು ಟಾರ್ಗೆಟ್ ಮಾಡಿದ್ದಾರೆ. ಮೆಹರ್ಪುರದಲ್ಲಿರುವ ಇಸ್ಕಾನ್ ದೇಗುಲದ ಮೇಲೆ ದಾಳಿ ಮಾಡಿರುವ ಗುಂಪು ದೇವಾಲಯವನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಿದೆ. ದಾಳಿಗೊಳಗಾದ ಕೆಲ ದೇಗುಲಗಳ ಬಳಿ ಸೇನೆ ನಿಯೋಜಿಸಲಾಗಿದೆಯಾದರೂ, ಹಿಂಸಾಚಾರ ನಿಂತಿಲ್ಲ.