ಕರ್ನಾಟಕದ ತಿರುಮಲ ತಿರುಪತಿ ದೇವಸ್ಥಾನಂ ಸದಸ್ಯನಿಂದ ಸಿಬ್ಬಂದಿಗೆ ನಿಂದನೆ : ವಿವಾದ

| N/A | Published : Feb 20 2025, 12:47 AM IST / Updated: Feb 20 2025, 05:47 AM IST

ಸಾರಾಂಶ

ಕರ್ನಾಟಕದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ಸದಸ್ಯ ಎಸ್. ನರೇಶ್ ಕುಮಾರ್ ಅವರು ಟಿಟಿಡಿ ಸೇವಾ ಸಿಬ್ಬಂದಿಯೊಬ್ಬರನ್ನು (ಅಟೆಂಡರ್‌) ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದು, ಭಕ್ತರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ತಿರುಮಲ: ಕರ್ನಾಟಕದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ಸದಸ್ಯ ಎಸ್. ನರೇಶ್ ಕುಮಾರ್ ಅವರು ಟಿಟಿಡಿ ಸೇವಾ ಸಿಬ್ಬಂದಿಯೊಬ್ಬರನ್ನು (ಅಟೆಂಡರ್‌) ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದು, ಭಕ್ತರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ದರ್ಶನ ಮುಗಿಸಿದ ನಂತರ ನರೇಶ್ ಕುಮಾರ್ ಮಹಾ ದ್ವಾರಂ (ಮುಖ್ಯ ದ್ವಾರ) ಮೂಲಕ ಹೊರಬರಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆ ಸಮಯದಲ್ಲಿ, ಗಣ್ಯ ವ್ಯಕ್ತಿಗಳಿಗೆ ಬಾಗಿಲು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು ಮತ್ತು ಹತ್ತಿರ ಇದ್ದ ಒಬ್ಬ ಸೇವಾ ಸಿಬ್ಬಂದಿ, ಅವರಿಗೆ ಈ ಬಗ್ಗೆ ಮಾಹಿತಿ ನೀಡಿದನು. ಆ ಮಾರ್ಗದಲ್ಲಿ ಯಾವುದೇ ಗಣ್ಯರಿಗೆ ಪ್ರವೇಶ ನೀಡಬಾರದು ಎಂಬ ಸೂಚನೆ ಇದೆ. ಅನ್ಯ ಮಾರ್ಗದ ಮೂಲಕ ಹೊರಹೋಗಿ ಎಂದು ತಿಳಿಸಿದರು.

ಆಗ ನರೇಶ್ ಕುಮಾರ್ ಕೋಪಗೊಂಡು ಸಿಬ್ಬಂದಿಯನ್ನು ನಿಂದಿಸಲು ಪ್ರಾರಂಭಿಸಿದರು. ವೀಡಿಯೊದಲ್ಲಿ, ಅವರು ಅಟೆಂಡರ್ ಅನ್ನು ‘ಥರ್ಡ್-ಕ್ಲಾಸ್ ಫೆಲೋ’ ಎಂದು ಕರೆದಿದ್ದಲ್ಲದೆ ‘ಗೆಟ್‌ ಔಟ್‌’ ಎಂದು ಆದೇಶಿಸಿ ಪಕ್ಕಕ್ಕೆ ತಳ್ಳಿದ್ದು ಕಂಡುಬಂದಿದೆ.

ಈ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಕೆಲವು ಭಕ್ತರು ಈ ನಡವಳಿಕೆಯನ್ನು ಖಂಡಿಸಿದರೆ, ಇನ್ನು ಕೆಲವರು ವಿಐಪಿ ನಿರ್ಬಂಧಗಳ ಜಾರಿಯನ್ನು ಪ್ರಶ್ನಿಸಿದ್ದಾರೆ. ಘಟನೆಯನ್ನು ಟಿಟಿಡಿ ನೌಕರರ ಸಂಘ ಖಂಡಿಸಿದೆ.