ಸಾರಾಂಶ
ತಿರುಮಲ: ಶ್ರೀ ವೆಂಕಟೇಶ್ವರನ ಸನ್ನಿಧಾನದಲ್ಲಿ ಮುಸ್ಲಿಂ ಭಕ್ತರಿಗೂ ಶ್ರೀವಾರಿ ಸೇವೆಗೆ ಅವಕಾಶ ಕಲ್ಪಿಸುವ ವಿಷಯವನ್ನು ಪರಿಶೀಲಿಸುವುದಾಗಿ ತಿರುಪತಿ ತಿರುಮಲ ದೇಗುಲ ಮಂಡಳಿ(ಟಿಟಿಡಿ) ತಿಳಿಸಿದೆ.‘ಟಿಟಿಡಿ ಆಡಳಿತಾಧಿಕಾರಿಯೊಂದಿಗೆ ಮಾಸಿಕವಾಗಿ ನಡೆಸುವ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ನಾಯ್ಡುಪೇಟದ ಮುಸ್ಲಿಂ ಭಕ್ತ ಹುಸೇನ್ ಭಾಷಾ ತಮಗೂ ಶ್ರೀವಾರಿ ಸೇವೆಗೆ ಅವಕಾಶ ಕೊಡುವಂತೆ ಅವಕಾಶ ಕೇಳಿದ್ದರು. ಈ ರೀತಿ ಇತರ ಧಾರ್ಮಿಕ ಪಂಥಕ್ಕೆ ಸೇರಿದ ವ್ಯಕ್ತಿಗಳು ತಿಮ್ಮಪ್ಪನ ಸೇವೆ ಮಾಡಲು ಆಸಕ್ತಿ ತೋರಿರುವುದು ನಿಜಕ್ಕೂ ಹರ್ಷದ ಸಂಗತಿ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಭಕ್ತರಿಗೆ ಶ್ರೀವಾರಿ ಸೇವೆಗೆ ಅವಕಾಶ ಕಲ್ಪಿಸುವ ಕುರಿತು ಟಿಟಿಡಿ ಪರಿಶೀಲಿಸಲಿದೆ ಎಂದು ಟಿಟಿಡಿ ಕಾರ್ಯ ನಿರ್ವಹಣಾ ಅಧಿಕಾರಿ ಧರ್ಮಾರೆಡ್ಡಿ ಭರವಸೆ ನೀಡಿದರು.ಶ್ರೀವಾರಿ ಸೇವೆ ಎಂದರೇನು?ಶ್ರೀವಾರಿ ಎಂದರೆ ಸ್ವಯಂಸೇವೆ ಎಂದರ್ಥ. ತಿಮ್ಮಪ್ಪನ ಸನ್ನಿಧಾನದಲ್ಲಿ ಭಕ್ತರು ಬಯಸಿದಲ್ಲಿ ದೇಗುಲದ 60 ವಿಭಾಗಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಬಹುದು. ಇದರಲ್ಲಿ ಅನ್ನಶಾಲೆ, ಆರೋಗ್ಯ, ಉದ್ಯಾನ, ವೈದ್ಯಕೀಯ, ಲಾಡು ಸಮರ್ಪಣೆ, ದೇಗುಲ, ಸಾರಿಗೆ, ಕಲ್ಯಾಣ ಮಂದಿರ, ಪುಸ್ತಕ ಮಳಿಗೆ ಮೊದಲಾದವುಗಳಿವೆ. ಹಾಲಿ ಇದಕ್ಕೆ ಹಿಂದೂಗಳಿಗೆ ಮಾತ್ರ ಅವಕಾಶವಿದೆ.