ಉಪಟಳ ನಿಲ್ಲಿಸಿ, ಹೊರನಡೆಯಿರಿ: ಕಿಡಿ
ಕೆನಡಾ ಸಂಗೀತ ಕಾರ್ಯಕ್ರಮದಲ್ಲಿ ಘಟನೆಕ್ಯಾಲ್ಗರಿ (ಕೆನಡಾ): ಖ್ಯಾತ ಪಂಜಾಬಿ ಗಾಯಕ ದಿಲ್ಜೀತ್ ದೋಸಾಂಜ್ ಅವರು ಕೆನಡಾದ ಕ್ಯಾಲ್ಗರಿಯಲ್ಲಿ ತಮ್ಮ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಖಲಿಸ್ತಾನಿ ಧ್ವಜ ಪ್ರದರ್ಶಿಸುತ್ತಿದ್ದವರ ಮೇಲೆ ಗರಂ ಆಗಿದ್ದು, ಸ್ಥಳದಿಂದ ಹೊರನಡೆಯುವಂತೆ ನೇರವಾಗಿ ಎಚ್ಚರಿಸಿದ ಘಟನೆ ನಡೆದಿದೆ. ಇದರ ವಿಡಿಯೋ ವೈರಲ್ ಆಗಿದ್ದು, ಗಾಯಕನ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.ದಿಲ್ಜೀತ್ ಸಾವಿರಾರು ಜನರ ಎದುರು ಕಾರ್ಯಕ್ರಮ ನೀಡುತ್ತಿದ್ದರು. ಈ ವೇಳೆ ಕೆಲವರು ಭಾರತದಲ್ಲಿ ನಿಷೇಧಿತ ಉಗ್ರ ಸಂಘಟನೆಯನ್ನು ಪ್ರತಿನಿಧಿಸುವ ಧ್ವಜಗಳನ್ನು ಹಾರಿಸುತ್ತಿರುವುದನ್ನು ಗಮನಿಸಿದರು. ಕೂಡಲೇ ಹಾಡು ನಿಲ್ಲಿಸಿ, ‘ನಿಮ್ಮ ಉಪದ್ರವವನ್ನು ಇಲ್ಲಿ ನಿಲ್ಲಿಸಿ, ಬೇರೆಲ್ಲಾದರೂ ಮಾಡಿ. ನನಗೇನೂ ಸಾವಿನ ಭಯವಿಲ್ಲ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.ಒಂದು ದಿನದ ಹಿಂದಷ್ಟೇ, ಕೆನಡಾದ ಗುಪ್ತಚರ ಇಲಾಖೆಯು ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಂದ ತಮ್ಮ ದೇಶಕ್ಕೆ ಬೆದರಿಕೆಯಿದೆ ಎಂದು ವರದಿ ನೀಡಿತ್ತು. ಅದರ ಬೆನ್ನಲ್ಲೇ ದಿಲ್ಜೀತ್ ಅವರ ನಡೆ ಗಮನ ಸೆಳೆದಿದೆ.