ಸಾರಾಂಶ
ಭೂಕುಸಿತಕ್ಕೆ ಬಲಿಯಾದ ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದವರನ್ನು ಅವರ ಕುಟುಂಬದವರು ಗುರುತಿಸಿ ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ನೆರವೇರಿಸುತ್ತಿರುವ ದೃಶ್ಯಗಳು ಎಲ್ಲೆಂದರಲ್ಲಿ ಕಂಡುಬರುತ್ತಿವೆ.
ವಯನಾಡ್: ಭೂಕುಸಿತಕ್ಕೆ ಬಲಿಯಾದ ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದವರನ್ನು ಅವರ ಕುಟುಂಬದವರು ಗುರುತಿಸಿ ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ನೆರವೇರಿಸುತ್ತಿರುವ ದೃಶ್ಯಗಳು ಎಲ್ಲೆಂದರಲ್ಲಿ ಕಂಡುಬರುತ್ತಿವೆ. ಇದು ಹೃದಯ ಕಲಕುವಂತಿದೆ.
ಇದುವರೆಗೆ ಸುಮಾರು 200 ಜನ ಸಾವನ್ನಪ್ಪಿದ್ದು, 200 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೆಪ್ಪಾಡಿ ಆರೋಗ್ರ ಕೇಂದ್ರ ಹಾಗೂ ನಿಲಂಬೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಶವಗಳನ್ನು ಸಾಲಾಗಿ ಇರಿಸಲಾಗಿದ್ದು, ಸಂಬಂಧಪಟ್ಟವರು ಕೊಂಡೊಯ್ಯುತ್ತಿದ್ದಾರೆ.
ಮೆಪ್ಪಾಡಿಯಾ ಜುಮ್ಮಾ ಮಸ್ಜಿದ್ನಲ್ಲಿ ದೇಹಗಳನ್ನು ಹೂಳಲು ವ್ಯವಸ್ಥೆ ಮಾಡಿರುವುದಾಗಿ ಮಸೀದಿ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.
ಇದೇ ವೇಳೆ ಪುಟ್ಟ ಕಂದಮ್ಮಗಳ ಅಪ್ಪ-ಅಮ್ಮ ಕಾಣೆಯಾಗಿರುವ ಕಾರಣ ಅವರ ಶಿಕ್ಷಕರೇ ಕಂದಮ್ಮಗಳ ಶವ ಗುರುಗಿಸಿದ ಪ್ರಸಂಗವೂ ನಡೆದಿದೆ.
ಮೃತರಲ್ಲಿ 75 ಜನರ ಗುರುತು ಪತ್ತೆಯಾಗಿದ್ದು, 123 ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತರ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಹೇಳಿದೆ.