ಸಾರಾಂಶ
‘ವಿಪಕ್ಷಗಳು ಮುಂಗಾರು ಅಧಿವೇಶನದಲ್ಲಿ ಆಪರೇಷನ್ ಸಿಂದೂರ ಕುರಿತಾದ ಚರ್ಚೆಗೆ ಸಮಯ ಕೇಳುವ ಮೂಲಕ ತಮ್ಮ ಗೋರಿಯನ್ನು ತಾವೇ ತೋಡಿಕೊಂಡವು’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಎನ್ಡಿಎ ಸಭೆಯಲ್ಲಿ ಸಿಂದೂರ, ಮಹಾದೇವಕ್ಕೆ ಪ್ರಶಂಸೆ
ನವದೆಹಲಿ: ‘ವಿಪಕ್ಷಗಳು ಮುಂಗಾರು ಅಧಿವೇಶನದಲ್ಲಿ ಆಪರೇಷನ್ ಸಿಂದೂರ ಕುರಿತಾದ ಚರ್ಚೆಗೆ ಸಮಯ ಕೇಳುವ ಮೂಲಕ ತಮ್ಮ ಗೋರಿಯನ್ನು ತಾವೇ ತೋಡಿಕೊಂಡವು’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷ ವಿರುದ್ಧ ವ್ಯಂಗ್ಯವಾಡಿದ್ದಾರೆ.ನರೇಂದ್ರ ಮೋದಿ 3.0 ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎನ್ಡಿಎ ಕೂಟದ 2ನೇಯ ಸಂಸದೀಯ ಸಭೆ ದೆಹಲಿಯಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಪ್ರಧಾನಿ, ‘ ವಿಪಕ್ಷಗಳು ಪ್ರತಿದಿನ ಸಂಸತ್ತಿನ ಬಾವಿಗಿಳಿದು ಘೋಷಣೆಗಳನ್ನು ಕೂಗುವುದು, ಪ್ರತಿಭಟನೆ ನಡೆಸುವ ಮೂಲಕ ತಮ್ಮನ್ನು ತಾವು ಬಹಿರಂಗಪಡಿಸಿಕೊಳ್ಳುತ್ತಿದ್ದಾರೆ. ತಮ್ಮ ಸಮಾಧಿಯನ್ನು ತಾವೇ ಅಗೆಯುತ್ತಿರುವವರನ್ನು ನಾವು ಏಕೆ ತಡೆಯಬೇಕು? ಅವರು ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಹಾಕಿಕೊಳ್ಳು ತ್ತಿದ್ದಾರೆ. ಮೈತ್ರಿಕೂಟದ ಸಂಸದರು ಸದನದಲ್ಲಿ ಏನೂ ನಡೆಯುತ್ತಿಲ್ಲ ಎಂದು ಭಾವಿಸಬಹುದು. ಆದರೆ ಬಹಳಷ್ಟು ನಡೆಯುತ್ತಿದೆ. ರಾಷ್ಟ್ರವು ಇದನ್ನೆಲ್ಲ ಗಮನಿಸುತ್ತಿದೆ’ ಎಂದು ಹರಿಹಾಯ್ದರು.
ಇದೇ ವೇಳೆ ಪಹಲ್ಗಾಂ ನರಮೇಧಕ್ಕೆ ದಿಟ್ಟ ಉತ್ತರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ, ಪಹಲ್ಗಾಂ ಉಗ್ರರ ವಿರುದ್ಧದ ಮಹಾದೇವ ಕಾರ್ಯಾಚರಣೆ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮೈತ್ರಿಕೂಟದ ಸಂಸದರು ಸನ್ಮಾನಿಸಿದರು.