ಮೀಸಲಾತಿ ರದ್ದುಪಡಿಸುವ ಕುರಿತು ಮಾತನಾಡಿದ ರಾಹುಲ್ ಗಾಂಧಿ ಅವರ ನಾಲಗೆ ಕತ್ತರಿಸಿದರೆ ಬಹುಮಾನ ನೀಡುವುದಾಗಿ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಮುಂಬೈ: ‘ಮೀಸಲಾತಿ ರದ್ದುಪಡಿಸುವ ಕುರಿತು ಮಾತನಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನಾಲಗೆಯನ್ನು ಯಾರಾದರೂ ಕತ್ತರಿಸಿದರೆ ಅವರಿಗೆ 11 ಲಕ್ಷ ರು. ಬಹುಮಾನ ನೀಡುವೆ’ ಎಂದು ಶಿವಸೇನೆ (ಶಿಂಧೆ ಬಣ) ಶಾಸಕ ಸಂಜಯ್‌ ಗಾಯಕ್ವಾಡ್‌ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬುಲ್ಢಾನಾ ಕ್ಷೇತ್ರದ ಶಿವಸೇನಾ ಶಾಸಕ ಗಾಯಕ್ವಾಡ್‌ ‘ರಾಹುಲ್ ಗಾಂಧಿ ವಿದೇಶದಲ್ಲಿದ್ದಾಗ ಭಾರತದಲ್ಲಿ ಮೀಸಲಾತಿ ಪದ್ಧತಿಯನ್ನು ರದ್ದು ಮಾಡುವುದಾಗಿ ಹೇಳಿದ್ದಾರೆ. 

ಇದು ಕಾಂಗ್ರೆಸ್‌ನ ನಿಜ ಬಣ್ಣ ತೋರಿಸುತ್ತದೆ’ ಎಂದರು. ಶಿವಸೇನೆಯ ಶಿಂಧೆ ಬಣದ ಶಾಸಕನ ವಿವಾದಾತ್ಮ ಕ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್‌ ಬಾವನ್‌ಕುಳೆ ಹೇಳಿದ್ದಾರೆ.

ಇತ್ತೀಚೆಗೆ ಅಮೆರಿಕದಲ್ಲಿ ಭಾಷಣ ಮಾಡಿದ್ದ ರಾಹುಲ್‌, ‘ದೇಶದಲ್ಲಿ ಸಂಪೂರ್ಣ ಸಮಾನತೆ ಬಂದಾಗ ಕಾಂಗ್ರೆಸ್‌ ಪಕ್ಷ ಮೀಸಲು ರದ್ದು ಮಾಡಲಿದೆ. ಆದರೆ ಸದ್ಯಕ್ಕೆ ಆ ಪರಿಸ್ಥಿತಿ ಇಲ್ಲ’ ಎಂದಿದ್ದರು.