ಸಾರಾಂಶ
ನವದೆಹಲಿ: 370ನೇ ವಿಧಿ ರದ್ದತಿ ಬಳಿಕ ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯನ್ನು ನಡೆಸಲು ಚುನಾವಣಾ ಆಯೋಗವು ಶೀಘ್ರದಲ್ಲೇ ತನ್ನ ಪ್ರಕ್ರಿಯೆಗಳನ್ನು ಆರಂಭಿಸಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಜಮ್ಮು ಕಾಶ್ಮೀರ ಪ್ರದೇಶದಲ್ಲಿ ನಾಲ್ಕು ದಶಕಗಳಲ್ಲೇ ಅತ್ಯಂತ ಹೆಚ್ಚಿನ ಮತದಾನ (ಶೇ.58.58) ದಾಖಲಾಗಿರುವುದು ಚುನಾವಣಾ ಆಯೋಗಕ್ಕೆ ವಿಧಾನಸಭಾ ಚುನಾವಣೆಯನ್ನು ನಡೆಸಲು ಉತ್ಸಾಹ ತುಂಬಿದೆ. ಶೀಘ್ರ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ತಿಳಿಸಿದರು.
ಭಯವಿಲ್ಲದೆ ಕೆಲಸ ಮಾಡಿ: ಖರ್ಗೆ
ನವದೆಹಲಿ: ಅಧಿಕಾರಿಗಳು ಯಾರ ಭಯವೂ ಇಲ್ಲದೆ, ಒತ್ತಡಕ್ಕೂ ಬಗ್ಗದೆ ನಿಷ್ಪಕ್ಷಪಾತವಾಗಿ ಸಂವಿಧಾನದ ನಿಯಮಗಳಿಗೆ ಅನುಸಾರ ಮತ ಎಣಿಕೆ ವೇಳೆ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಧಿಕಾರ ವರ್ಗಕ್ಕೆ ಬಹಿರಂಗ ಪತ್ರ ಬರೆದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 150 ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹೇರಿದ್ದಾರೆ ಎಂದು ತಮ್ಮದೇ ಪಕ್ಷದ ನಾಯಕ ಜೈರಾಂ ರಮೇಶ್ ಮಾಡಿದ ಆರೋಪದ ಬೆನ್ನಲ್ಲೇ ಖರ್ಗೆ ಈ ಪತ್ರ ಬರೆದಿದ್ದಾರೆ.