ಸಾರಾಂಶ
ಸುಪ್ರೀಂಕೋರ್ಟ್ನ ನ್ಯಾಯಾಧೀಶರ ಗ್ರಂಥಾಲಯದಲ್ಲಿ ನ್ಯಾಯದೇವತೆ ನೂತನ ಮೂರ್ತಿಯೊಂದನ್ನು ಅಳವಡಿಸಲಾಗಿದ್ದು, ಅದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕಾರಣ, ಈ ನ್ಯಾಯದೇವತೆಯ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಲಾಗಿದ್ದು, ಆಕೆ ಕೈಯ್ಯಲ್ಲಿದ್ದ ಖಡ್ಗದ ಬದಲು ಸಂವಿಧಾನ ಕೊಡಲಾಗಿದೆ.
ನವದೆಹಲಿ: ಸುಪ್ರೀಂಕೋರ್ಟ್ನ ನ್ಯಾಯಾಧೀಶರ ಗ್ರಂಥಾಲಯದಲ್ಲಿ ನ್ಯಾಯದೇವತೆ ನೂತನ ಮೂರ್ತಿಯೊಂದನ್ನು ಅಳವಡಿಸಲಾಗಿದ್ದು, ಅದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕಾರಣ, ಈ ನ್ಯಾಯದೇವತೆಯ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಲಾಗಿದ್ದು, ಆಕೆ ಕೈಯ್ಯಲ್ಲಿದ್ದ ಖಡ್ಗದ ಬದಲು ಸಂವಿಧಾನ ಕೊಡಲಾಗಿದೆ.
ಈ ಮೂಲಕ ಕಾನೂನು ಕುರುಡಲ್ಲ ಹಾಗೂ ಶಿಕ್ಷೆಯನ್ನು ಪ್ರತಿನಿಧಿಸುವುದಿಲ್ಲ ಎಂಬ ಸಂದೇಶ ರವಾನಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಆದೇಶದಂತೆ ಈ ಬದಲಾವಣೆಗಳನ್ನು ಮಾಡಲಾಗಿದೆ.
‘ಭಾರತವು ವಸಾಹತುಶಾಹಿ ಪರಂಪರೆಯನ್ನು ಕೈಬಿಟ್ಟು ಮುಂದುವರೆಯಬೇಕು. ಕಾನೂನು ಕುರುಡಲ್ಲ, ಹಾಗೂ ಅದು ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಖಡ್ಗ ಕ್ರೌರ್ಯದ ಸಂಕೇತ. ಹಾಗಾಗಿ ಅದರ ಬದಲು ನ್ಯಾಯದೇವತೆಯ ಕೈಗೆ ಸಂವಿಧಾನವನ್ನು ಕೊಡುವುದರಿಂದ ಆಕೆ ಅದರ ಪ್ರಕಾರವೇ ನ್ಯಾಯ ಮಾಡುತ್ತಾಳೆ ಎಂಬ ಸಂದೇಶ ರವಾನೆಯಾಗುತ್ತದೆ’ ಎಂದು ನಂಬಿರುವ ಚಂದ್ರಚೂಡ್ ಬದಲಾವಣೆಗಳನ್ನು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.
ಮೊದಲು ನ್ಯಾಯದೇವತೆ ಹೇಗಿದ್ದಳು?
ಈ ಮೊದಲು ನ್ಯಾಯ ದೇವತೆಯ ಕಣ್ಣಿಗೆ ಕಪ್ಪು ಪಟ್ಟಿಯನ್ನು ಕಟ್ಟಲಾಗಿತ್ತು. ಇದು, ಆಕೆ ಸಂಪತ್ತು, ಅಧಿಕಾರ, ಅಥವಾ ಸ್ಥಾನಮಾನಗಳನ್ನು ಸೂಚಿಸುವ ಏನನ್ನೂ ನೋಡದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಾಳೆ ಎಂಬ ಸಂದೇಶವನ್ನು ಸಾರುತ್ತಿತ್ತು. ಅಂತೆಯೇ, ಖಡ್ಗವು ಅನ್ಯಾಯ ಮಾಡುವವರಿಗೆ ಶಿಕ್ಷೆ ಖಚಿತ ಎನ್ನುವುದನ್ನು ಸೂಚಿಸುತ್ತಿತ್ತು.
ಬದಲಾವಣೆಯ ಅರ್ಥವೇನು?
ನ್ಯಾಯದೇವತೆಯ ಕಣ್ಣಿಗೆ ಕಟ್ಟಲಾಗಿದ್ದ ಪಟ್ಟಿ ಬಿಚ್ಚುವ ಮೂಲಕ ದೇಶದಲ್ಲಿನ ಕಾನೂನು ಕುರುಡಲ್ಲ, ಅದು ಎಲ್ಲರನ್ನೂ ಸಮಾನವಾಗಿ ನೋಡುತ್ತದೆ ಎಂಬ ಸಂದೇಶ ಸಾರಲಾಗಿದೆ. ಅಂತೆಯೇ ಖಡ್ಗದ ಬದಲು ಸಂವಿಧಾನ ಕೊಡುವ ಮೂಲಕ, ಆಕೆ ಕ್ರೌರ್ಯವನ್ನು ಬೆಂಬಲಿಸುವುದಿಲ್ಲ. ಬದಲಿಗೆ ಸಂವಿಧಾನಕ್ಕೆ ಅನುಗುಣವಾಗಿ ನ್ಯಾಯ ಮಾಡುತ್ತಾಳೆ ಎಂಬುದನ್ನು ಸೂಚಿಸಲಾಗಿದೆ.