ಸಾರಾಂಶ
ಮೇರಠ್: ಗುಂಡಿನ ದಾಳಿ ನಡೆದಾಗ ದೇಹದೊಳಗೆ ಗುಂಡು ತೂರುವುದು ಸಹಜ. ಆದರೆ ಮಹಿಳೆಯೊಬ್ಬರು ಎದುರಾಳಿ ವಿರುದ್ಧ ಸೇಡುತೀರಿಸಿಕೊಳ್ಳಲು ಆಪರೇಷನ್ ಮೂಲಕ ಎದೆಗೆ ಗುಂಡು ತೂರಿಸಿಕೊಂಡ ವಿಚಿತ್ರ ಘಟನೆ ಉತ್ತರಪ್ರದೇಶದ ಮೇರಠ್ನಲ್ಲಿ ನಡೆದಿದೆ.
ಆಗಿದ್ದೇನು?: ಆರೋಪಿ ಮಹಿಳೆ ಮೇರಠ್ ಮೇಯರ್ ಮನೆಯಲ್ಲಿ ಮನೆ ಕೆಲಸಕ್ಕೆ ಮಾಡುತ್ತಿದ್ದಳು. ಆದರೆ ಯಾವುದೋ ವಿಷಯಕ್ಕೆ ಈಕೆಯನ್ನು ಮೇಯರ್ ಮಡದಿ ಕೆಲಸದಿಂದ ತೆಗೆದುಹಾಕಿದ್ದರು. ಇದರಿಂದ ಸಿಟ್ಟಿಗೆದ್ದ ಆಕೆ ಆಸ್ಪತ್ರೆಯೊಂದಕ್ಕೆ ಹೋಗಿ ಅಲ್ಲಿ ಆಪರೇಷನ್ ಮೂಲಕ ಮೂಲಕ ಎದೆಯೊಳಗೆ ಗುಂಡು ತೂರಿಸಿಒಕೊಂಡಿದ್ದಾರೆ. ಬಳಿಕ 5 ಜನ ತನ್ನನ್ನು ಅಪಹರಿಸಿ, ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ, ಗುಂಡಿಕ್ಕಿದ್ದರು ಎಂದು ಆರೋಪಿಸಿದ್ದಳು. ಈ ವೇಳೆ, ಮೇಯರ್ ಉಮೇಶ್ ಗೌತಮ್ ಮತ್ತು ಅವರ ಮಗ ಪಾರ್ಥ್ ಗೌತಮ್ ಅವರನ್ನೂ ಹೆಸರಿಸಿದ್ದಳು.
ಇದರ ತನಿಖೆಗಿಳಿದ ಪೊಲೀಸರು, ಆಕೆ ಘಟನೆ ನಡೆದಿತ್ತು ಎಂದು ಹೇಳಿದ ಪ್ರದೇಶದ ಸಿಸಿಟೀವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಪಹರಣ ನಡೆದಿಲ್ಲ ಎಂಬುದನ್ನು ಧೃಡಪಡಿಸಿದ್ದರು. ಅದಾದ ಬಳಿಕ ಆಕೆಯ ಸುಳ್ಳು ಬೆಳಕಿಗೆ ಬಂದಿದ್ದು ಪ್ರಕರಣ ಸಂಬಂದ ಆಕೆ ಹಾಗೂ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.