ಸಾರಾಂಶ
ಕನ್ನಡಪ್ರಭ ವಾರ್ತೆ ಟೇಕಲ್
ಕೋಲಾರ ಜಿಲ್ಲೆಯಲ್ಲಿ ಪ್ರಥಮವಾಗಿ ಹೊಸ ತಂತ್ರಜ್ಞಾನ ಬಳಸಿ ನೂತನ ರೀತಿಯಲ್ಲಿ ಗ್ರಾಮೀಣ ರಸ್ತೆಯ ಕಾಮಗಾರಿಯನ್ನು ಮಾಡಲಾಗುತ್ತಿದ್ದು, ಈ ಕಾಮಗಾರಿ ಯಶಸ್ವಿಗೊಂಡರೆ ಮುಂದಿನ ದಿನಗಳಲ್ಲಿ ಮಾಲೂರು ತಾಲೂಕಿನ ಎಲ್ಲ ರಸ್ತೆಗಳನ್ನು ಇದೇ ರೀತಿಯಲ್ಲಿ ಮಾಡಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡರು ತಿಳಿಸಿದರು.ಅವರು ಗುರುವಾರ ಟೇಕಲ್ನ ಹುಳದೇನಹಳ್ಳಿ ಗ್ರಾಪಂನ ವೆಂಕಟರಾಜನಹಳ್ಳಿ ಗ್ರಾಮದಲ್ಲಿ 40 ಲಕ್ಷ ರೂಪಾಯಿ ಅಂದಾಜು ವೆಚ್ಚದ ವೆಂಕಟರಾಜನಹಳ್ಳಿಯಿಂದ ಸೀತಹಳ್ಳಿ ಗ್ರಾಮದೊಳಗಿನವರೆಗಿನ ಸಂಪರ್ಕ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಲೂರು ತಾಲೂಕಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 25 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಈ ಯೋಜನೆಯಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಇಂದು ಪ್ರಾರಂಭಿಸಲಾಗಿದ್ದು ಮುಂದಿನ ದಿನಗಳಲ್ಲಿ ಆದ್ಯತೆ ಮೇರೆಗೆ ರಸ್ತೆಗಳನ್ನು ಹೊಸ ರೀತಿಯಲ್ಲಿ ನಿರ್ಮಾಣ ಮಾಡಲು ಯೋಜನೆ ಕೈಗೊಳ್ಳಲಾಗುತ್ತದೆ. ಅಧುನಿಕ ತಂತ್ರಜ್ಞಾನ ಬಳಕೆ
ಈ ಭಾಗದಲ್ಲಿ ಹೊಸ ತಂತ್ರಜ್ಞಾನದ ರಸ್ತೆ ಮಾಡಲಾಗುತ್ತಿದ್ದು ಅತೀ ಹೆಚ್ಚು ಮರಳು ಅದಕ್ಕೆ ಜೆಲ್ಲಿ, ಸಿಮೆಂಟ್ ಹಾಕಿ ರಾಸಾಯನಿಕ ದ್ರಾವಣ ಸೇರಿಸಿ ರಸ್ತೆ ನಿರ್ಮಿಸಲಾಗುತ್ತದೆ. ಅದರ ಮೇಲೆ ಡಾಂಬರು ಹಾಕಲಾಗುತ್ತದೆ. ಈ ತಂತ್ರಜ್ಞಾನ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಳಸಲಾಗಿದೆ. ಇದು ಉತ್ತಮವಾಗಿ ಬಾಳಿಕೆ ಬರುತ್ತದೆ ಎಂದು ತಜ್ಞರು ಭರವಸೆ ನೀಡಿದ್ದಾರೆ ಎಂದರು.ಹುಳದೇನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಮಮ್ಮ, ಉಪಾಧ್ಯಕ್ಷೆ ಸುಧಾಸತೀಶ್, ಮಾಜಿ ಗ್ರಾ.ಪಂ.ಅಧ್ಯಕ್ಷೆ ಹಾಲಿಸದಸ್ಯೆ ಹೇಮಾಮಾಲಿನಿ ನಾರಾಯಣಸ್ವಾಮಿ, ಗ್ರಾ.ಪಂ.ಸದಸ್ಯ ಕೋಟೆ ಮುನಿರಾಜು, ಮುಖಂಡರಾದ ವಿ.ಎಸ್.ಕೃಷ್ಣಪ್ಪ, ಚಲಪತಿ, ರಾಮಚಂದ್ರಗೌಡ, ಗುತ್ತಿಗೆದಾರ ಮಹೇಶ್, ಕಾಂಗ್ರೇಸ್ ಮುಖಂಡ ಹೆಚ್.ವಿ.ಚಂದ್ರಶೇಖರ್ಗೌಡ, ಮತ್ತಿತರರು ಹಾಜರಿದ್ದರು.