ನೀರಿನ ಬಗ್ಗೆ ಆಧಾರರಹಿತ ಆರೋಪ ಮಾಡಬಾರದು. ನೀರಿನ ಗುಣಮಟ್ಟದ ಕುರಿತು ಅನುಮಾನ ಇದ್ದರೆ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿ ವೈಜ್ಞಾನಿಕ ವರದಿ ಆಧರಿಸಿ ಮಾತನಾಡಬೇಕು. ಜನರಲ್ಲಿ ಅನಗತ್ಯ ಭೀತಿ ಮೂಡಿಸುವುದು ತಪ್ಪು ನೀರಿನ ಬಗ್ಗೆ ನಿಜವಾದ ಕಾಳಜಿ ಇರುವವರು ‘ಜಲ ಸಂಕಲ್ಪ’ ಅಭಿಯಾನಕ್ಕೆ ಕೈಜೋಡಿಸಿ, ಕೆರೆಗಳನ್ನು ಸ್ವಚ್ಛಗೊಳಿಸುವಲ್ಲಿ ಪಾಲ್ಗೊಳ್ಳಬೇಕು
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ನಗರದ ಕಂದವಾರ ಕೆರೆಗೆ ಹರಿಸಲಾಗುತ್ತಿರುವ ಬೆಂಗಳೂರಿನ ಹೆಬ್ಬಾಳ- ನಾಗವಾರ ಕೆರೆಯ ಸಂಸ್ಕರಿಸಿದ ಎಚ್ಎನ್ ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಬೇಕು ಎಂಬ ಒತ್ತಾಯ ಒಂದೆಡೆ ಜೋರಾಗಿದ್ದು, ಹೋರಾಟಗಳು ನಡೆಯುತ್ತಿರುವ ನಡುವೆಯೇ ಜೈ ಫೌಂಡೇಶನ್ ಕೆರೆಗಳ ಸಂರಕ್ಷಣೆಗೆ ಮುಂದಾಗಿದೆ. ಜಲ ಸಂಕಲ್ಪ ಅಭಿಯಾನದಡಿ ಕೆರೆಗಳ ಸಂರಕ್ಷಣೆ ಮಾಡಲಾಗುವುದು ಎಂದು ಜೈ ಫೌಂಡೇಶನ್ ಅಧ್ಯಕ್ಷ ಡಾ. ಜಯಕುಮಾರ್ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೀರಿನ ಬಗ್ಗೆ ಆಧಾರರಹಿತ ಆರೋಪ ಮಾಡಬಾರದು. ನೀರಿನ ಗುಣಮಟ್ಟದ ಕುರಿತು ಅನುಮಾನ ಇದ್ದರೆ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿ ವೈಜ್ಞಾನಿಕ ವರದಿ ಆಧರಿಸಿ ಮಾತನಾಡಬೇಕು. ಜನರಲ್ಲಿ ಅನಗತ್ಯ ಭೀತಿ ಮೂಡಿಸುವುದು ತಪ್ಪು ನೀರಿನ ಬಗ್ಗೆ ನಿಜವಾದ ಕಾಳಜಿ ಇರುವವರು ‘ಜಲ ಸಂಕಲ್ಪ’ ಅಭಿಯಾನಕ್ಕೆ ಕೈಜೋಡಿಸಿ, ಕೆರೆಗಳನ್ನು ಸ್ವಚ್ಛಗೊಳಿಸುವಲ್ಲಿ ಪಾಲ್ಗೊಳ್ಳಬೇಕು ಎಂದರು.
ನೀರಿನ ವಿಷಯವನ್ನು ರಾಜಕೀಯಕ್ಕೆ ಬಳಸಬಾರದು. ಬದಲಾಗಿ ನೀರಿನ ಅಶುದ್ಧತೆ ಬಗ್ಗೆ ಎಲ್ಲರೂ ಚಿಂತಿಸಬೇಕಿದೆ. ಒಳ್ಳೆಯ ಉದ್ದೇಶದಿಂದ ಜೈ ಫೌಂಡೇಶನ್ ವತಿಯಿಂದ ಜಲ ಸಂಕಲ್ಪ ಅಭಿಯಾನ ಆರಂಭಿಸಲಾಗುವುದು. ನೀರು ಕಲುಷಿತವಾಗಿದೆ ಎಂಬ ಆರೋಪಗಳು ಇದೆ. ಆದರೆ ಕೆರೆಗಳ ಸಂರಕ್ಷಣೆ ಕೂಡ ಅಗತ್ಯ ಹಾಗಾಗಿ ಕೆರೆಗಳ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಸಚಿವರಿಗೆ ಮನವಿ ಸಲ್ಲಿಕೆಎಚ್ಎನ್ ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸುವ ಕುರಿತು ಸಣ್ಣ ನೀರಾವರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಇದರ ಜೊತೆಗೆ ನಾಗರಿಕರ ಜವಾಬ್ದಾರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಲಸಂಕಲ್ಪ ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ ಎಂದು ಡಾ.ಜಯಕುಮಾರ್ ಹೇಳಿದರು. ಈ ಅಭಿಯಾನದಡಿ ಕೆರೆಗಳಲ್ಲಿ ಜಮಾಯಿಸಿರುವ ಜಂಡು ತೆರವುಗೊಳಿಸುವುದು, ಸ್ವಚ್ಛತೆ ಕಾಪಾಡುವುದು ಸೇರಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕೆರೆಗಳನ್ನು ಸರಿಯಾಗಿ ಸಂರಕ್ಷಿಸಿದರೆ ನೀರಿನ ಕಲುಷಿತತೆ ತಡೆಯಲು ಸಾಧ್ಯವಾಗುತ್ತದೆ. ಜಿಲ್ಲೆಯ 44 ಕೆರೆಗಳಿಗೆ ಹರಿಸಲಾಗುತ್ತಿರುವ ಎಚ್ಎನ್ ವ್ಯಾಲಿ ನೀರಿನ ಹಿನ್ನಲೆಯಲ್ಲಿ,ಎಲ್ಲಾ ಕೆರೆಗಳ ಸಂರಕ್ಷಣೆಗಾಗಿ ಸಮಗ್ರ ಯೋಜನೆ ರೂಪಿಸಲಾಗಿದೆ. ಇದು ಕೇವಲ ಜೈ ಫೌಂಡೇಶನ್ನ ಕೆಲಸವಲ್ಲ,ಜಿಲ್ಲೆಯ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದರು.