ಸಾರಾಂಶ
ಬ್ಯಾಡಗಿ: ನಿಜಶರಣ ಅಂಬಿಗರ ಚೌಡಯ್ಯನವರ ಕರ್ಮಭೂಮಿ ನರಸೀಪುರ ಹಾಗೂ ಚೌಡಯ್ಯದಾನಪುರ ಅಭಿವೃದ್ಧಿಪಥ ದತ್ತ ಸಾಗುತ್ತಿವೆ, ಸಮಾಜ ಬಾಂಧವರು ಪೀಠದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಸಮಾಜದ ಪ್ರಗತಿಗೆ ಸಹಕರಿಸುವಂತೆ ಅಂಬಿಗರ ಚೌಡಯ್ಯನವರಪೀಠದ ಶಾಂತಭೀಷ್ಮ ಚೌಡಯ್ಯಶ್ರೀಗಳು ಕರೆ ನೀಡಿದರು.
ಪಟ್ಟಣದ ದುರ್ಗಾದೇವಿ ದೇವಸ್ಥಾನ ಸಭಾಭವನದಲ್ಲಿ ಜರುಗಿದ ಗಂಗಾಮತ ಸಮಾಜದ ತಾಲೂಕು ಘಟಕದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅಂಬಿಗರ ಸಮಾಜವನ್ನು ಕೂಲಿ, ಕಬ್ಬಲಿಗ, ಗಂಗೆ ಮಕ್ಕಳು, ಬೆಸ್ತರ, ಬಾರ್ಕಿ,ಸುಣಗಾರ ಸೇರಿದಂತೆ 37 ಹೆಸರುಗಳಲ್ಲಿ ಸಂಬೋಧಿಸಲಾಗುತ್ತಿದೆ. ಆದರೆ, ಇಷ್ಟು ಒಳಪಂಗಡಗಳು ಇಂದು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದು ರಾಜ್ಯಾದ್ಯಂತ ಸಂಘಟನೆ, ಗುರುಪೀಠದ ಬೆಳವಣಿಗೆ ಅಗತ್ಯವಿರುವುದನ್ನು ಪ್ರತಿಪಾದಿಸಿದರು.ಮೀಸಲಾತಿ ಸಿಕ್ಕಿಲ್ಲ: ವೇದವ್ಯಾಸ, ಚೌಡಯ್ಯನವರಂತಹ ಶರಣರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ ರಾಜ್ಯದಲ್ಲಿ 25 ಲಕ್ಷಕ್ಕೂ ಹೆಚ್ಚು ಸಮಾಜದ ಜನರಿದ್ದಾರೆ. ಹೀಗಾಗಿ ಸ್ವಾಭಿಮಾನದಿಂದ ನಮ್ಮ ಹಕ್ಕುಗಳನ್ನು ಸರ್ಕಾರಕ್ಕೆ ಕೇಳಬೇಕಿದೆ, ಸಮಾಜ ವನ್ನು ಎಸ್ಟಿ ಮೀಸಲಾತಿಗೆ ಸೇರ್ಪಡೆಗೊಳಿಸಲು ಹೋರಾಟ ನಡೆಯುತ್ತಿದೆ ಆದರೆ ಇಂದಿಗೂ ನ್ಯಾಯ ಸಿಕ್ಕಿಲ್ಲ ಎಂದರು.
2012 ರಲ್ಲಿ ಪೀಠ ಸ್ಥಾಪನೆ:ನರಸೀಪುರದಲ್ಲಿ ಪ್ರತಿ ವರ್ಷ ಸಂಕ್ರಮಣದಂದು ಸಾಂಸ್ಕೃತಿಕ ಜಾತ್ರೆ ನಡೆಯಲಿದೆ, ರಥೋತ್ಸವದಲ್ಲಿ ಚೌಡಯ್ಯನವರ ವಚನ ಪುಸ್ತಕ ಉತ್ಸವಮೂರ್ತಿಯನ್ನಾಗಿಸಿದ್ದೇವೆ, 2012ರಲ್ಲಿ ಪೀಠ ಸ್ಥಾಪನೆಯಾಗಿದ್ದು, ಸಾಕಷ್ಟು ಸಾಮಾಜಿಕ ಪ್ರಗತಿ ಕಂಡಿದ್ದರೂ ಸಹ ಮೂಲ ಅಂಬಿಗರ ಚೌಡಯ್ಯ ಗದ್ದುಗೆ ಪೂಜೆ ಸಲುವಾಗಿ ಸಾಕಷ್ಟು ಹೋರಾಟ ನಡೆಸುವ ದುಸ್ಥಿತಿ ಬಂದಿರುವುದು ಬೇಸರ ತರಿಸಿದೆ ಎಂದರು.ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಭೋವಿ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯನವರ ಕರ್ಮ ಭೂಮಿ, ಗದ್ದುಗೆ ಹಾವೇರಿ ಜಿಲ್ಲೆಯರುವುದು ವಿಶೇಷವಾಗಿದೆ, ಈಗ ನರಸೀಪುರ ಪೀಠ, ಚೌಡಯ್ಯದಾನಪುರ ಗ್ರಾಮಗಳು ಸುಕ್ಷೇತ್ರವಾಗಿ ಬೆಳೆದಿವೆ, ಸಮಾಜದ ಅಭಿವೃದ್ಧಿಯಾಗಲು ಎಲ್ಲರೂ ಶೈಕ್ಷಣಿಕವಾಗಿ ಬಲಿಷ್ಠರಾಗಬೇಕು, ಯುವಕರಿಗೆ ಗುಣ ಮಟ್ಟದ ಶಿಕ್ಷಣ ನೀಡಬೇಕಿದೆ, ಸ್ವಾರ್ಥ ಹಾಗೂ ದ್ವೇಷ ಅಸೂಯೆಗಳಿಂದ ಸಂಘ ಕಟ್ಟಬೇಡಿ, ಸಮಾಜದ ಹಿತ ಚಿಂತನೆ, ಅಭಿವೃದ್ದಿ, ಸಂಘದ ಬೆಳವಣಿಗೆ ಸಹಕರಿಸಬೇಕು ಎಂದರು. ಈ ವೇಳೆ ಗಂಗಾಮತ ಸಮಾಜದ ತಾಲೂಕು ಗೌರವಾಧ್ಯಕ್ಷ ಸುರೇಶ ಹುಳಬುತ್ತಿ, ನೂತನ ತಾಲೂಕಾಧ್ಯಕ್ಷ ನಿಂಗಪ್ಪ ಹೆಗ್ಗಣದ, ಶಹರ ಘಟಕದ ಅಧ್ಯಕ್ಷ ಜಯಣ್ಣ ಸುಣಗಾರ ಸೇರಿದಂತೆ ವಿವಿಧ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಂಕರ ಬಾರ್ಕಿ, ಪ್ರವೀಣ ವಡ್ನಿಕೊಪ್ಪ, ಮುಖಂಡರಾದ ಯಲ್ಲಪ್ಪ ಓಲೇಕಾರ, ಬಸವರಾಜ ಕಳಸೂರು, ಹೊನ್ನಪ್ಪ ಸಣ್ಣ ಬಾರ್ಕಿ, ಪುಟ್ಟಪ್ಪ ಬಾರ್ಕಿ, ಚಂದ್ರಪ್ಪ ದೊಡ್ಮನಿ, ಮಾಲತೇಶ ಬಾರ್ಕಿ, ಚಂದ್ರು ಮುಳಗುಂದ, ಶಿಕ್ಷಕ ಯಲ್ಲಪ್ಪ ಹೊಸಳ್ಳಿ ಇದ್ದರು. ಜೀತೆಂದ್ರ ಸುಣಗಾರ, ಮಾಲತೇಶ ದೇವಗಿರಿ ಕಾರ್ಯಕ್ರಮ ನಿರ್ವಹಿಸಿದರು.