ಕುಂದಾಪುರ: ಅಂಪಾರು ಸಹಕಾರಿ ವ್ಯವಸಾಯಿಕ ಸಂಘ ಶಂಕರನಾರಾಯಣದಿಂದ‌ ವಿಭಜನೆಗೊಂಡು 1997-98 ರಲ್ಲಿ ಸ್ವಂತ ಶಕ್ತಿಯಲ್ಲಿ‌ ಸದೃಢವಾಗಿ ಬೆಳೆದು ನಿಂತಿದೆ. ಗ್ರಾಮೀಣ ಭಾಗದ ರೈತರು ಹಾಗೂ ಗ್ರಾಹಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಎರಡೂವರೆ ಕೋಟಿ ರು.ಗೂ ಅಧಿಕ ಮೊತ್ತದ ಸುಸಜ್ಜಿತ ನೂತನ ಕಟ್ಟಡ ‘ರೈತ ಸೌಧ’ ಶನಿವಾರ ಲೋಕಾರ್ಪಣೆಗೊಳ್ಳಲಿದೆ ಎಂದು ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರದೀಪ್‌ ಶೆಟ್ಟಿ ಗುಡಿಬೆಟ್ಟು ತಿಳಿಸಿದ್ದಾರೆ.

ಸಂಘದ ನೂತನ‌ ಕಟ್ಟಡದ ಡಾ.‌ಎಂ.ಎನ್ ರಾಜೇಂದ್ರ ಕುಮಾರ್ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.ಹಿರಿಯರು ಶ್ರಮದಿಂದಲೇ ಕಟ್ಟಿ ಬೆಳೆಸಿದ ಅಂಪಾರು ಸಹಕಾರಿ ವ್ಯವಸಾಯಿಕ ಸಂಘವು ಇದೀಗ 29 ವರ್ಷಗಳನ್ನು ಪೂರೈಸುತ್ತಿದೆ. 55 ಕೋಟಿ 87 ಲಕ್ಷ ರು. ಠೇವಣಾತಿ ಹೊಂದಿದ್ದು,

55 ಕೋಟಿ 78 ಲಕ್ಷ ಸಾಲ ವಿತರಣೆಯಾಗಿದೆ. ಒಂದು ಗ್ರಾಮಕ್ಕೆ ಮಾತ್ರ ಸೀಮಿತವಾದ ಸಂಘವು ಇಷ್ಟು ದೊಡ್ಡ ಮಟ್ಟದಲ್ಲಿ ವ್ಯವಹಾರ ನಡೆಸಿ ಲಾಭದಾಯಕವಾಗಿರುವುದು ನಮ್ಮ ಹೆಮ್ಮೆ ಎಂದರು.ಹಿಂದಿನ‌ ಕಟ್ಟಡದಲ್ಲಿ ಸ್ಥಳಾವಕಾಶ ಕೊರತೆ ಮನಗಂಡ ಹಿಂದಿನ‌ ಆಡಳಿತವು ಹೊಸ ಕಟ್ಟಡದ ರೂಪುರೇಷೆ ಹಾಕಿ ಕಟ್ಟಡದ ಕಾಮಗಾರಿ ಆರಂಭಿಸಿತ್ತು. ಇದೀಗ‌ ಬಂದ ಹೊಸ‌ ಆಡಳಿತ‌ ಮಂಡಳಿ ಕಾಮಗಾರಿ ಸಂಪೂರ್ಣಗೊಳಿಸಿ ಲೋಕಾರ್ಪಣೆಗೆ ಸಜ್ಜುಗೊಳಿಸಿದ್ದೇವೆ ಎಂದರು.ಕಟ್ಟಡದ ಕೆಳಭಾಗದಲ್ಲಿ ಕೃಷಿ ಪರಿಕರಗಳ ಗೋದಾಮು‌ ಮತ್ತು ಪಡಿತರ ವ್ಯವಸ್ಥೆ, ಮೊದಲ ಅಂತಸ್ತಿನಲ್ಲಿ ಬ್ಯಾಂಕಿಂಗ್‌ ಸೌಲಭ್ಯ ಹಾಗೂ ಈ ಸ್ಟ್ಯಾಂಪ್ ಸೌಲಭ್ಯ, ಸಭಾಂಗಣ, ಎರಡನೇ ಅಂತಸ್ತಿನಲ್ಲಿ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಸಭಾಂಗಣ ಹಾಗೂ ಮೊಳಹಳ್ಳಿ ಶಿವರಾವ್ ಹೆಸರಿನ ಸಭಾಂಗಣವಿದ್ದು, ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಟ್ಟಡಕ್ಕೆ ಲಿಫ್ಟ್ ಸೌಲಭ್ಯ ಅಳವಡಿಸಲಾಗಿದೆ ಎಂದರು.ಉದ್ಘಾಟನಾ ಸಮಾರಂಭ: ರೈತ ಸೌಧ ನೂತನ ಕಟ್ಟಡವನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದು, ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ. ಪ್ರದೀಪ ಕುಮಾರ್ ಶೆಟ್ಟಿ ಗುಡಿಬೆಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ‌. ಡಾ. ಎಂ.ಎನ್ ರಾಜೇಂದ್ರ ಕುಮಾರ್ ಸಭಾಭವನವನ್ನು ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಉದ್ಘಾಟಿಸಲಿದ್ದು, ಬ್ಯಾಂಕಿಂಗ್ ವಿಭಾಗವನ್ನು ಶಾಸಕ ಗುರುರಾಜ್ ಗಂಟಿಹೊಳೆ, ಆಡಳಿತ ಸಭಾಂಗಣವನ್ನು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಭದ್ರತಾ ಕೊಠಡಿಯನ್ನು ಮಾಜಿ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ, ಗೋದಾಮನ್ನು ದೇವಿಪ್ರಸಾದ್ ಶೆಟ್ಟಿ ಬೆಳಪು, ಮೊಳಹಳ್ಳಿ ಶಿವರಾವ್ ಸಭಾಂಗಣವನ್ನು ಮೊಳಹಳ್ಳಿ ಮಹೇಶ್ ಹೆಗ್ಡೆ, ಸಾಮಾನ್ಯ ಸೇವಾ ಕೇಂದ್ರವನ್ನು ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್, ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಮಲ್ಯಾಡಿ ಶಿವರಾಮ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ: ಸಮಾರಂಭದ ಪ್ರಯುಕ್ತ ಸಾಂಸ್ಕೃತಿಕ ವೈಭವ ನೆರವೇರಲಿದ್ದು, ಶನಿವಾರ ಬೆಳಗ್ಗೆ ನಿನಾದ ಮ್ಯೂಸಿಕಲ್ ಇವೆಂಟ್ ಅಂಪಾರು ಅವರಿಂದ ಸಂಗೀತ ವೈಭವ, ಮಧ್ಯಾಹ್ನ ಅರೆಹೊಳೆ ಪ್ರತಿಷ್ಠಾನ ಮಂಗಳೂರಿನ ನಂದಗೋಕುಲ ಕಲಾವಿದರಿಂದ ನೃತ್ಯ ವೈಭವದ ಬಳಿಕ ‘ಮಾಗದ ವಧೆ’ ಯಕ್ಷಗಾನ ನೆರವೇರಲಿದೆ.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ನವೀನ್ ಕುಮಾರ್ ಶೆಟ್ಟಿ ಶಾನ್ಕಟ್ಟು, ನಿರ್ದೇಶಕರಾದ ಮೋಹನ್ ವೈದ್ಯ, ಕಿರಣ್ ಹೆಗ್ಡೆ, ಅರುಣ್ ಕುಮಾರ್ ಶೆಟ್ಟಿ, ಮನೋಹರ ಶೆಟ್ಟಿ, ಜಯರಾಮ ಶೆಟ್ಟಿ, ಉಮೇಶ್ ಕೊಠಾರಿ, ಅಜಿತ್‌ ಕುಮಾರ್, ಜ್ಯೋತಿ ಉದಯ ಕುಮಾರ್ ಶೆಟ್ಟಿ, ಭಾರತಿ ಬಾಲಕೃಷ್ಣ ಶೇಟ್, ಮಂಜುನಾಥ್ ನಾಯ್ಕ್, ಸುನಿಲ್, ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.