ಸಾರಾಂಶ
ದಾವಣಗೆರೆ : ದಾವಣಗೆರೆಯಲ್ಲಿ ಗಣೇಶ ಮೆರವಣಿಗೆಯನ್ನು ಅವಮಾನಿಸಿ, ಮೆರವಣಿಗೆಯಲ್ಲಿದ್ದವರನ್ನು ಕೊಲ್ಲುವ ಉದ್ದೇಶದಿಂದ 80-100 ಜನ ಮುಸ್ಲಿಂ ಯುವಕರ ಗುಂಪು ಕಲ್ಲು ತೂರಾಟ ನಡೆಸಿದ್ದ ಬಗ್ಗೆ ಆಘಾತಕಾರಿ ಸಂಗತಿಯು ಇದೀಗ ಹೊರ ಬಿದ್ದಿದೆ.
ಗಣೇಶ ಮೆರವಣಿಗೆಯಲ್ಲಿದ್ದವರನ್ನು ಕೊಲ್ಲುವ ಸಂಚಿನೊಂದಿಗೆ ಅನ್ಯ ಕೋಮಿನ ಗುಂಪು ಕಲ್ಲು ತೂರಾಟ ನಡೆಸಿದ್ದ ಬಗ್ಗೆ ಸ್ಪೋಟಕ ವಿಚಾರವು ಸ್ವತಃ ಪೊಲೀಸ್ ಇಲಾಖೆಯ ಕಾನ್ಸ್ಟೆಬಲ್ ಇಲ್ಲಿನ ಬಸವ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಬಯಲಾಗಿದೆ.
ಬಸವ ನಗರ ಠಾಣೆಯ ಹೆಡ್ ಕಾನ್ಸ್ಟೆಬಲ್ ಫಕೃದ್ದೀನ್ ಅಲಿ ಸೆ.19ರಂದು ಸಂಜೆ ಕೆಆರ್ ರಸ್ತೆಯ ಮುದೇಗೌಡ್ರ ಮಲ್ಲಮ್ಮ ಮುರಿಗೆಪ್ಪ ಪ್ರೌಢಶಾಲೆ ಪಕ್ಕದ ಪಾರ್ಕ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಸುಮಾರು70-80 ಜನ ಮುಸ್ಲಿಂ ಯುವಕರ ಗುಂಪು ಆಜಾದ್ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಗಳ 13ನೇ ದಿನದ ವಿಸರ್ಜನಾ ಮೆರವಣಿಗೆಗಳು ಇದ್ದ ದಿನ ಮೆರವಣಿಗೆಗೆ ಅವಮಾನಿಸಲು, ಮೆರವಣಿಗೆಯಲ್ಲಿದ್ದವರ ಕೊಲೆಗೆ ಸಂಚು ರೂಪಿಸಿದ್ದ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ.
ಕೆಆರ್ ರಸ್ತೆ, ಚೌಕಿಪೇಟೆಗಲ್ಲಿ ಅಂದು ಸಂಜೆ ಮೆರಣಿಗೆಗಳ ಬಂದೋಬಸ್ತ್ನಲ್ಲಿರುವಾಗ ಕೆಆರ್ ರಸ್ತೆಯಲ್ಲಿದ್ದಾಗ ಅರಳಿ ಮರ ವೃತ್ತದ ಕಡೆಯಿಂದ ಬಂದ ವೆಂಕಾ ಭೋವಿ ಕಾಲನಿಯ ಕಂಟಮ್ಮ ದೇವಿ ಯುವಕರ ಸಂಘದ ಮೆರವಣಿಗೆ ಸಂಜೆ ಕೆಆರ್ ರಸ್ತೆಯ ಜಗಳೂರು ಬಸ್ಸು ನಿಲ್ದಾಣದ ಪಕ್ಕ ವಾಟರ್ ಟ್ಯಾಂಕ್ ಸಮೀಪ ಬರುತ್ತಿದ್ದಂತೆಯೇ ನರಸರಾಜ ಪೇಟೆ ಮುಖ್ಯರಸ್ತೆ ಕಡೆಯಿಂದ ಬಂದ ಸುಮಾರು 70-80 ಮುಸ್ಲಿಂ ಯುವಕರು ಏಕಾಏಕಿ ಮೆರವಣಿಗೆ ಕಡೆಗೆ ಕಲ್ಲು ತೂರಿದರು ಎಂದು ಅವರು ತಿಳಿಸಿದ್ದಾರೆ.
ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೂ ಕಲ್ಲಿನೇಟು ಬಿದ್ದು, ಚಿಕ್ಕಪುಟ್ಟ ಗಾಯಗಳಾಗಿವೆ. ತಕ್ಷಣ ಗುಂಪನ್ನು ಚೆದುರಿಸಿ, ಮೆರವಣಿಗೆ ಮುಂದೆ ಸಾಗಿಸಲಾಯಿತು. ಗಲಾಟೆ ಮಾಡಿದ ಯುವಕರು ಮುಸ್ಲಿಂ ಕೋಮಿಗೆ ಸೇರಿದವರಾಗಿದ್ದು, ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಹಾಗೂ ಧಾರ್ಮಿಕ ಶ್ರದ್ಧೆಯನ್ನು ಅವಮಾನಿಸುವ ಉದ್ದೇಶದಿಂದ ಹಾಗೂ ಮೆರವಣಿಗೆಯಲ್ಲಿದ್ದವರನ್ನು ಕೊಲೆ ಮಾಡುವ ಉದ್ದೇಶದಿಂದ ಪ್ರಚೋದನಾಕಾರಿಯಾಗಿ ಕಲ್ಲು ತೂರಾಟ ಮಾಡಿರುವದು ತಿಳಿದು ಬಂದಿದೆ ಎಂದು ಅವರು ದೂರಿನಲ್ಲಿ ಮಾಹಿತಿ ನೀಡಿದ್ದಾರೆ.
ಗಲಾಟೆ ಮಾಡಿ, ಕಲ್ಲು ತೂರಾಟ ನಡೆಸಿದ ಪ್ರಮುಖ 10ಜನರ ಜೊತೆಗೆ ಇತರೆ ಸುಮಾರು 70-80 ಯುವಕರ ಗುಂಪು ಇದ್ದು, ಅವರನ್ನು ಮರಳಿ ನೋಡಿದರೆ ಗುರುತಿಸಬಹುದು. ಕಲ್ಲು ತೂರಾಟ ಮಾಡಿದವರನ್ನು ಪತ್ತೆ ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಸವ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಹೆಡ್ ಕಾನ್ಸ್ಟೆಬಲ್ ಫಕೃದ್ದೀನ್ ಅಲಿ ಮನವಿ ಮಾಡಿದ್ದಾರೆ. ಹೆಡ್ ಕಾನ್ಸ್ಟೇಬಲ್ ನೀಡಿರುವ ದೂರಿಗೆ ಸಂಬಂಧಿಸಿದಂತೆ ಎಫ್ಐಆರ್ ಪ್ರತಿಗಳು ಮಾಧ್ಯಮಗಳ ಲಭ್ಯವಾಗಿದ್ದು. ಸ್ವತಃ ಮಾಧ್ಯಮದವರನ್ನೂ ಬೆಚ್ಚಿ ಬೀಳಿಸಿದ ಸಂಗತಿ ಇದಾಗಿತ್ತು.
6 ಪ್ರಕರಣ ದಾಖಲಾಗಿದ್ದು, ಈವರೆಗೆ 48 ಜನರನ್ನು ಬಂಧಿಸಲಾಗಿದ್ದು, ಸಾಕ್ಷ್ಯಾಧಾರ ಅದರಿಸಿ ಆರೋಪಿಗಳನ್ನು ಬಂಧಿಸುವ ಪ್ರಕ್ರಿಯೆ
ದಾವಣಗೆರೆ : ದಾವಣಗೆರೆಯಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಪ್ರಕರಣ ದಾಖಲಾಗಿದ್ದು, ಈವರೆಗೆ 48 ಜನರನ್ನು ಬಂಧಿಸಲಾಗಿದ್ದು, ಸಾಕ್ಷ್ಯಾಧಾರ ಅದರಿಸಿ ಆರೋಪಿಗಳನ್ನು ಬಂಧಿಸುವ ಪ್ರಕ್ರಿಯೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ತಿಳಿಸಿದರು.
ಇಲ್ಲಿನ ಬಸವ ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.19ರಂದು ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಬಸವ ನಗರ, ಆರ್ಎಂಸಿ ಯಾರ್ಡ್ ಹಾಗೂ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ 6ಕೇಸ್ ದಾಖಲಾಗಿದ್ದು, 48 ಜನರನ್ನು ಬಂಧಿಸಲಾಗಿದೆ ಎಂದರು.
ಘಟನೆಗೆ ಸಂಬಂಧಿಸಿದಂತೆ ವೀಡಿಯೋ ದೃಶ್ಯಾವಳಿಗಳು, ಸಿಸಿ ಕ್ಯಾಮೆರಾ ಫುಟೇಜ್, ಫೋಟೋಗಳ ಪರಿಶೀಲನೆ ನಡೆಸಿದ್ದು, ಹಲವರನ್ನು ಬಂಧಿಸುವ ಸಾಧ್ಯತೆ ಇದೆ. ಅಮಾಯಕರನ್ನು ಬಂಧಿಸದಂತೆ ಕೂಗು ಕೇಳಿ ಬರುತ್ತಿದೆ. ಡಿಜಿಪಿ, ಎಡಿಜಿಪಿ, ಐಜಿಪಿ, ನಾವು ಸಹ ನಮ್ಮ ತಂಡಗಳಿಗೆ ಅಮಾಯಕರನ್ನು ಬಂಧಿಸದಂತೆ ಸೂಚಿಸಿದ್ದೇವೆ ಎಂದು ಹೇಳಿದರು.
ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ವೀಡಿಯೋ ದೃಶ್ಯಾವಳಿಗಳ ಪರಿಶೀಲನೆ ಮುಂದುವರಿದಿದೆ. ಕೆಲವರು ಪೊಲೀಸರು ಬಂಧಿಸುತ್ತಾರೆ ಎಂಬ ಭೀತಿಯಿಂದ ಊರು ಬಿಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ತಪ್ಪು ಮಾಡದಿದ್ದರೆ ಯಾಕೆ ಊರು ಬಿಡಬೇಕು? ತಪ್ಪು ಮಾಡದ ಯಾರನ್ನೂ ಬಂಧಿಸುವುದಿಲ್ಲ. ಘಟನೆಯಲ್ಲಿ ಭಾಗಿಯಾದವರನ್ನು ಸಾಕ್ಷ್ಯಗಳ ಆಧಾರದ ಮೇಲೆ ಬಂಧಿಸುತ್ತಿದ್ದೇವೆ ಎಂದು ಹೇಳಿದರು.
ವಿಶೇಷವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಕೋಮು ಭಾವನೆ ಕೆರಳಿಸುವಂತಹ ಫೋಟೋ, ವೀಡಿಯೋ, ಬರಹಗಳನ್ನು ಯಾರೂ ಸಹ ಹಾಕಬಾರದು. ಅಂತಹ ಪ್ರಚೋದನಾಕಾರಿ ಪೋಸ್ಟ್ಗಳನ್ನು ಶೇರ್ ಸಹ ಮಾಡಬಾರದು. ಒಂದು ವೇಳೆ ಪ್ರಚೋದನಾಕಾರಿ ಪೋಸ್ಟ್ ಮಾಡುವುದು, ಹೇಳಿಕೆ ನೀಡುವುದು, ಸಾಮರಸ್ಯಕ್ಕೆ ಭಂಗ ತರಲು ಯತ್ನಿಸಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪೊಲೀಸ್ ಇಲಾಖೆಯಿಂದ 2 ಸಾವಿರ ಸಿಬ್ಬಂದಿಗಳನ್ನು ಬಂದೋಬಸ್ತ್ ನೇಮಿಸಲಾಗಿದೆ. ಶನಿವಾರ(ಸೆ.21ರಂದು) ಮಲೆಬೆನ್ನೂರು ಗಣೇಶ ವಿಸರ್ಜನಾ ಮೆರವಣಿಗೆ ನಡೆದಿದ್ದು, ಬಂದೋಬಸ್ತ್ ಕಲ್ಪಿಸಿದ್ದೇವೆ. ಸೆ.22ರಂದು ಚನ್ನಗಿರಿ ಹಾಗೂ ಹೊನ್ನಾಳಿಯಲ್ಲಿ ಹಿಂದು ಮಹಾಸಭಾ ಗಣೇಶ ವಿಸರ್ಜನಾ ಮೆರಣಿಗೆ ನಡೆಯಲಿದೆ. ಅಲ್ಲಿಯೂ ಸಹಿತ ಬಂದೋಬಸ್ತ್ ಕಲ್ಪಿಸಲಾಗಿದೆ. ಅಲ್ಲದೆ ದಾವಣಗೆರೆಯಲ್ಲೂ ಸೂಕ್ಷ್ಮ ಪ್ರದೇಶಗಳು, ಪ್ರಮುಖ ವೃತ್ತ, ರಸ್ತೆಗಳಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ ಮಾಹಿತಿ ನೀಡಿದರು.