ಬಸವ ಜಯಂತಿ ನಿಮಿತ್ತ ‘ಬಸವ ಭೂಷಣ’ ಪ್ರಶಸ್ತಿ ಪ್ರದಾನ

| Published : Jun 27 2025, 12:48 AM IST

ಸಾರಾಂಶ

ಮಾಧ್ಯಮ ಕ್ಷೇತ್ರ ಕೆ. ದೀಪಕ್, ಕೃಷಿ ಕ್ಷೇತ್ರ ಬಂದಿಗೆಗೌಡ, ಶಿಕ್ಷಣ ಕ್ಷೇತ್ರ ಪ್ರಸನ್ನ ಮೋಹನ ಮಡಿವಾಳ, ಸಾರ್ವಜನಿಕ ಕ್ಷೇತ್ರ ಗೋಪಾಲ್, ಜಾನಪದ ಕ್ಷೇತ್ರ ಆರ್.ಕೆ. ಸ್ವಾಮಿ ಹಾಗೂ ಯೋಗ ಮತ್ತು ಶಿಕ್ಷಣ ಕ್ಷೇತ್ರ ಮಲ್ಲರಾಜೇ ಅರಸ್ ಅವರಿಗೆ ಬಸವ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬಸವ ಜಯಂತಿ ಹಾಗೂ ಬಸವ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗುರುವಾರ ಆಯೋಜಿಸಲಾಗಿತ್ತು.

ಮಾಧ್ಯಮ ಕ್ಷೇತ್ರ ಕೆ. ದೀಪಕ್, ಕೃಷಿ ಕ್ಷೇತ್ರ ಬಂದಿಗೆಗೌಡ, ಶಿಕ್ಷಣ ಕ್ಷೇತ್ರ ಪ್ರಸನ್ನ ಮೋಹನ ಮಡಿವಾಳ, ಸಾರ್ವಜನಿಕ ಕ್ಷೇತ್ರ ಗೋಪಾಲ್, ಜಾನಪದ ಕ್ಷೇತ್ರ ಆರ್.ಕೆ. ಸ್ವಾಮಿ ಹಾಗೂ ಯೋಗ ಮತ್ತು ಶಿಕ್ಷಣ ಕ್ಷೇತ್ರ ಮಲ್ಲರಾಜೇ ಅರಸ್ ಅವರಿಗೆ ಬಸವ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಕಾರ್ಯಕ್ರಮ ಉದ್ಘಾಟಿಸಿದ ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ನಟರಾಜ ಜೋಯ್ಸ್ ಮಾತನಾಡಿ, ಬಸವೇಶ್ವರರಂತಹ ಒಬ್ಬರೇ ಒಬ್ಬ ಮಹನೀಯರು ಹೇಳಿದ ಮಾತನ್ನು ಅನುಸರಿಸಿದರೂ ಸಮಾಜ ಸುಧಾರಣೆ ಸಾಧ್ಯ ಆಗುತ್ತದೆ. ನಿತ್ಯ ಮಕ್ಕಳಿಗೆ ಅವರ ವರ್ಣಚಿತ್ರ, ಭಾವಚಿತ್ರಗಳನ್ನು ತೋರಿಸಿ ಅವರ ಮಾತಿನ ಒಂದೇ ಸಾಲನ್ನು ಹೇಳಿದರೂ ಅವರು ದಾರಿ ತಪ್ಪುವುದಿಲ್ಲ ಎಂದು ಹೇಳಿದರು.

ಸಮಾಜ ಉದ್ಧಾರ ಆಗಬೇಕಾದಲ್ಲಿ ಶಂಕರಾಚಾರ್ಯ, ಬಸವಣ್ಣ, ಅಂಬೇಡ್ಕರ್ ಅಂತಹವರ ನೀತಿಯನ್ನು ಮಕ್ಕಳಿಗೆ ತಿಳಿ ಹೇಳಬೇಕು. ಇಂದು ದೇವಸ್ಥಾನಗಳು ದುಡ್ಡಿನ ದೇವಸ್ಥಾನಗಳಾಗಿವೆ. ಎಲ್ಲರೂ ಹೋಗಿ ಹಣ ಹಾಕುತ್ತಾರೆ. ಆದರೆ ಮನೆಯೇ ದೇವಸ್ಥಾನ ಆಗಬೇಕಾದ ಅಗತ್ಯವಿದೆ ಎಂದರು.

ರಾಜ್ಯ ಶಿವಾರ್ಚಕ ಸಂಘದ ಅಧ್ಯಕ್ಷ ಅಂಬಳೆ ಶಿವಣ್ಣ, ನಿವೃತ್ತ ಪ್ರಾಂಶುಪಾಲರಾದ ಸುನಂದ ಭೂಪಾಳಿ, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಟಿ. ಸುರೇಶ್, ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಮೊದಲಾದವರು ಇದ್ದರು.

ಯುವತಿಯರಿಗೆ ಉಚಿತ ಕಂಪ್ಯೂಟರ್ ತರಬೇತಿ

ಮೈಸೂರು: ಸಮರ್ಥನಂ ಅಂಗವಿಕಲರ ಸಂಸ್ಥೆಯಿಂದ ಬಡ ವಿದ್ಯಾವಂತ ನಿರುದ್ಯೋಗಿ ಯುವತಿಯರಿಗೆ ಉಚಿತ ಕಂಪ್ಯೂಟರ್ ತರಬೇತಿ ಮತ್ತು ಉದ್ಯೋಗ ವಿಕಸನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತರಬೇತಿಯ ಅವಧಿ ಮೂರು ತಿಂಗಳು ಇರುತ್ತದೆ. ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ತರಗತಿ ನಡೆಯಲಿದ್ದು, ತರಗತಿಯಲ್ಲಿ ಬಿಪಿಓ, ಕಂಪ್ಯೂಟರ್ ಕೌಶಲ್ಯ, ಕಮ್ಯುನಿಕೇಶನ್ ಕೌಶಲ್ಯ ಉಚಿತ ತರಬೇತಿ ನೀಡಲಾಗುವುದು. ಕನಿಷ್ಠ ಎಸ್ಎಸ್ಎಲ್ಸಿ ಉತ್ತೀರ್ಣ ಆಗಿರಬೇಕು, 18 ರಿಂದ 35 ವರ್ಷ ಒಳಗಿರಬೇಕು, ಆರ್ಥಿಕವಾಗಿ ಹಿಂದುಳಿದ ವಿದ್ಯಾವಂತ ಬಡ ಯುವತಿಯರು ಸದರಿ ತರಬೇತಿಗೆ ಅರ್ಹತೆ ಹೊಂದಿರುತ್ತಾರೆ. ತರಬೇತಿಯು ಜುಲೈ 1 ರಿಂದ ಪ್ರಾರಂಭವಾಗುತ್ತದೆ. ಶೈಕ್ಷಣಿಕ ದಾಖಲಾತಿಗಳು, ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ/ ಬಿಪಿಎಲ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಫೋಟೋ ನೀಡಬೇಕಾಗುತ್ತದೆ. ಮಾಹಿತಿಗಾಗಿ ಮೊ. 90350 84948, 63648 67818, 90350 84949 ಸಂಪರ್ಕಿಸಬಹುದು ಎಂದು ಸಂಸ್ಥೆಯ ಮೈಸೂರು ವಿಭಾಗೀಯ ಮುಖ್ಯಸ್ಥ ಶಿವರಾಜು ತಿಳಿಸಿದ್ದಾರೆ.