‘ಯುಜಿಸಿ ಪ್ರಸ್ತಾಪ ರದ್ದುಗೊಳಿಸಿ’

| Published : Jan 14 2025, 01:04 AM IST

ಸಾರಾಂಶ

ಈಗ ಪರಿಷ್ಕೃತ ನಿಯಮಗಳು ಕುಲಪತಿಗಳ ಆಯ್ಕೆಯಲ್ಲಿ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ. ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಮತ್ತು ತಂತ್ರಜ್ಞಾನ ಸ್ನಾತಕೋತ್ತರ ಪದವಿ ಪಡೆದವರು ಕನಿಷ್ಠ ಶೇ ೫೫ ರಷ್ಟು ಅಂಕಗಳನ್ನು ಗಳಿಸಿದರೆ ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇರವಾಗಿ ಅರ್ಹತೆ ಪಡೆಯುತ್ತಾರೆ.

ಕನ್ನಡಪ್ರಭ ವಾರ್ತೆ ಕೋಲಾರದೇಶಾದ್ಯಂತ ಇರುವ ವಿಶ್ವವಿದ್ಯಾಲಯಗಳ ಅನುದಾನ ಆಯೋಗ ನಿಯಮಗಳ ಪ್ರಸ್ತಾಪವನ್ನು ಕೂಡಲೇ ರದ್ದು ಪಡಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಸಂಘಟನೆಯಿಂದ ತಹಸೀಲ್ದಾರ್ ಕಚೇರಿಯ ಉಪ ತಹಸೀಲ್ದಾರ್ ಭಾಸ್ಕರ್‌ರವರಿಗೆ ಮನವಿಸಲ್ಲಿಸಿ ಒತ್ತಾಯಿಸಿತು.ಎಸ್‌ಎಫ್‌ಐ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಶಶಿಕುಮಾರ್ ಮಾತನಾಡಿ, ವಿಶ್ವವಿದ್ಯಾಲಯದ ಅನುದಾನ ಆಯೋಗವು ಕಾಲೇಜುಗಳಲ್ಲಿ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಶಿಕ್ಷಕರು ಮತ್ತು ಶೈಕ್ಷಣಿಕ ಸಿಬ್ಬಂದಿಯ ನೇಮಕಾತಿ ಮತ್ತು ಮುಂಬಡ್ತಿ ನಿಯಮಗಳ ಕರಡನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬಿಡುಗಡೆ ಮಾಡಿದ್ದು ಈ ಕರಡು ಕಾರ್ಪೊರೇಟ್ ಶಿಕ್ಷಣ ವ್ಯವಸ್ಥೆಗೆ ಅವಕಾಶ ಮಾಡಿಕೊಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.ರಾಜ್ಯಪಾಲರಿಗೆ ಹೆಚ್ಚು ಅಧಿಕಾರ

ದೇಶದಲ್ಲಿ ಕೇಂದ್ರ ಸರ್ಕಾರದ ವಿರೋಧ ಪಕ್ಷಗಳು ಆಡಳಿತವಿರುವ ತಮಿಳುನಾಡು, ಕೇರಳದಂತಹ ಹಲವು ರಾಜ್ಯಗಳ ಸರ್ಕಾರಗಳು ಉಪಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮತ್ತು ಅನೇಕ ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಸಂಘರ್ಷ ನಡೆಸುತ್ತಿವೆ. ಈಗ ಪರಿಷ್ಕೃತ ನಿಯಮಗಳು ಕುಲಪತಿಗಳ ಆಯ್ಕೆಯಲ್ಲಿ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ ಎಂದರು. ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಮತ್ತು ತಂತ್ರಜ್ಞಾನ ಸ್ನಾತಕೋತ್ತರ ಪದವಿ ಪಡೆದವರು ಕನಿಷ್ಠ ಶೇ ೫೫ ರಷ್ಟು ಅಂಕಗಳನ್ನು ಗಳಿಸಿದರೆ ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇರವಾಗಿ ಅರ್ಹತೆ ಪಡೆಯುತ್ತಾರೆ. ಅವರು ಎನ್‌ಇಟಿ ಅರ್ಹತೆ ಪಡೆದುಕೊಳ್ಳುವ ಅಗತ್ಯ ಇಲ್ಲ. ಇದು ಗುಣಮಟ್ಟದ ಶಿಕ್ಷಣದ ನೀಡುವುದರ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು. ಮೀಸಲಾತಿ ಪ್ರಸ್ತಾಪ ಇಲ್ಲ

ಸಂಘಟನೆಯ ತಾಲೂಕು ಉಪಾಧ್ಯಕ್ಷೆ ಹರ್ಷಿತ ಮಾತನಾಡಿ, ಈ ನಿಯಮಗಳಿಂದ ಇಡೀ ಶಿಕ್ಷಣ ವ್ಯವಸ್ಥೆಯನ್ನು ಮಾರುಕಟ್ಟೆ ಆಧಾರಿತ ಸಂಶೋಧನೆಯತ್ತ ಕೊಂಡೊಯ್ಯುತ್ತದೆ. ವೆಂಚರ್ ಫಂಡ್‌ಗಳ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ನಿಡಲಾಗಿಲ್ಲ ಹಾಗೂ ಮೀಸಲಾತಿಯ ಬಗ್ಗೆಯೂ ಮೌನ ವಹಿಸಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡರಾದ ಮಹೇಶ್, ಲೋಕೇಶ್, ಅನುಶ್ರೀ ಇದ್ದರು.