ಎಫ್‌ಐಆರ್‌ ರದ್ದು ನ್ಯಾಯಕ್ಕೆ ಸಂದ ಜಯ: ಸಂಸದ

| Published : Sep 17 2025, 01:05 AM IST

ಸಾರಾಂಶ

ಲೋಕಸಭಾ ಚುನಾವಣೆ ವೇಳೆ ಯಲಹಂಕ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾದನಾಯಕನಹಳ್ಳಿಯ ಗೋವಿಂದಪ್ಪ ಎಂಬುವವರ ಮನೆಯಲ್ಲಿ 4.8 ಕೋಟಿ ರು. ಪತ್ತೆಯಾಗಿತ್ತು. ಹಣ ಡಾ.ಕೆ. ಸುಧಾಕರ್‌ಗೆ ಸೇರಿದ್ದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ರದ್ದು ಕೋರಿ ಸಂಸದ ಡಾ.ಕೆ. ಸುಧಾಕರ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಲೋಕಸಭಾ ಚುನಾವಣಾ ಸಮಯದಲ್ಲಿ ₹ 4.8 ಕೋಟಿ ಪತ್ತೆ ಕೇಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಹೈಕೋರ್ಟ್‌ ರದ್ದು ಮಾಡಿ ನೀಡಿರುವ ತೀರ್ಪು ಧರ್ಮಕ್ಕೆ ಮತ್ತು ನ್ಯಾಯಕ್ಕೆ ಸಂದ ಜಯ ಎಂದು ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಯಲಹಂಕ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾದನಾಯಕನಹಳ್ಳಿಯ ಗೋವಿಂದಪ್ಪ ಎಂಬುವವರ ಮನೆಯಲ್ಲಿ 4.8 ಕೋಟಿ ರು. ಪತ್ತೆಯಾಗಿತ್ತು. ಹಣ ಡಾ.ಕೆ. ಸುಧಾಕರ್‌ಗೆ ಸೇರಿದ್ದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ರದ್ದು ಕೋರಿ ಸಂಸದ ಡಾ.ಕೆ. ಸುಧಾಕರ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅರುಣ್ ಅವರಿದ್ದ ಏಕಸದಸ್ಯ ಪೀಠ ಬುಧವಾರ ಎಫ್‌ಐಆರ್‌ ರದ್ದುಗೊಳಿಸಿ.

ಸರ್ಕಾರದ ಕುಮ್ಮಕ್ಕು:

ಕಳೆದ ಲೇಕಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಸರ್ಕಾರ ಮತ್ತು ಅಧಿಕಾರಿಗಳ ಕುಮ್ಮಕ್ಕಿನಿಂದ ಯಲಹಂಕದ ನಮ್ಮ ಮುಖಂಡ ಗೋವಿಂದಪ್ಪ ನವರ ಮನೆಯಲ್ಲಿ 4.8 ಕೋಟಿ ಹಣ ಸಿಕ್ಕಿದೆ, ಇದು ನನಗೆ ಸೇರಿದ್ದು ಎಂದು ನನ್ನ ಮೇಲೆ ಐಟಿ ಮತ್ತು ಇಡಿಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ಡಾ.ಸುಧಾಕರ್‌ ಆರೋಪಿಸಿದರು.

ಚುನಾವಣೆಯಲ್ಲಿ ಈ ವಿಷಯವನ್ನಿಟ್ಟುಕೊಂಡು ನನ್ನನ್ನು ಸೋಲಿಸಲು ವ್ಯವಸ್ಥಿತಿ ಸಂಚು ರೂಪಿಸಿದ್ದರು. ಆದರೆ ಜನ ನನ್ನ ಕೈಹಿಡಿದರು. ಅದರಲ್ಲೂ ಯಲಹಂಕದ ಜನತೆ ಅತಿ ಹೆಚ್ಚು ಮತ ನೀಡಿ ನನ್ನ ಕೈಹಿಡಿದರು. ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯಲ್ಲಿ ಸಾರ್ವಕಾಲಿಕ ದಾಖಲೆಯ ಅತಿ ಹೆಚ್ಚು ಮತ ನೀಡಿ, ಜನರ ಕೋರ್ಟಿನಲ್ಲಿ ತೀರ್ಪು ನೀಡಿದ್ದರು. ಈಗ ಹೈ ಕೋರ್ಟ್ ಸಹಾ ತೀರ್ಪು ನೀಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.