ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಯಾವುದೇ ಸಮುದಾಯಗಳಲ್ಲಿ ಒಗ್ಗಟ್ಟಿದ್ದರೆ ಏನು ಬೇಕಾದರೂ ಸಾಧಿಸಬಹುದಾಗಿದೆ, ಈ ಒಂದು ಸಮುದಾಯ ಭವನವಲ್ಲ ಇಡೀ ರಾಜ್ಯವನ್ನೇ ಕಟ್ಟಬಹುದಾಗಿದೆ ಎಂದು ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ಅಭಿಪ್ರಾಯಪಟ್ಟರು.ನಗರದ ಕಾರಂಜಿಕಟ್ಟೆಯಲ್ಲಿ ಶ್ರೀ ಧರ್ಮರಾಯಸ್ವಾಮಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಸಮುದಾಯವು ಒಗ್ಗಟ್ಟಾಗಿದ್ದರೆ ಇಂತಹ ೧೦ ಸಮುದಾಯವನ್ನು ನಿರ್ಮಿಸುವಂತ ತಾಕತ್ತು ಇರುತ್ತೆ, ಇಂತಹ ೧೦ ಸಮುದಾಯಗಳು ಒಗ್ಗಟಾಗಿದ್ದರೆ ಆಡಳಿತ ಚುಕ್ಕಾಣಿ ಹಿಡಿಯಲು ಸಾಧ್ಯ ಎಂದು ತಿಳಿಸಿದರು.ಹಾಸ್ಟೆಲ್ ಕಟ್ಟಲು ₹10 ಲಕ್ಷ ನೆರವು
ಮುಂದಿನ ದಿನಗಳಲ್ಲಿ ಈ ಸಮುದಾಯದ ಆರ್ಥಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಸಮುದಾಯದ ವಿದ್ಯಾರ್ಥಿನಿಲಯ ನಿರ್ಮಿಸಿ ಇದಕ್ಕೆ ನನ್ನಿಂದ ೧೦ ಲಕ್ಷ ರೂ ದೇಣಿಗೆ ನೀಡುತ್ತೇನೆ, ಈ ಹಿಂದೆ ಸಮುದಾಯದ ನಿರ್ಮಾಣಕ್ಕೆ ನಾನೇ ಶಂಕು ಸ್ಥಾಪನೆ ಮಾಡಿ ೨೮ ಲಕ್ಷ ರೂ ನೀಡಿದ್ದೇ, ಈ ಕ್ಷೇತ್ರದಲ್ಲಿ ಹಲವು ದೇವಾಲಯಗಳ ನಿರ್ಮಾಣಕ್ಕೆ ಹಾಗೂ ಸಮುದಾಯಕ್ಕೂ ನನ್ನ ಅಧಿಕಾರವಧಿಯಲ್ಲಿ ಅರ್ಥಿಕ ನೆರವು ನೀಡಿದ್ದೇನೆ, ಮುಂದೆ ವಿದ್ಯಾರ್ಥಿನಿಲಯಕ್ಕೂ ನೀಡುತ್ತೇನೆ. ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರಿಯಬೇಕು ಎಂದರು.ಮಾಜಿ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಮಾತನಾಡಿ, ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವಂತ ಸಮುದಾಯಕ್ಕೆ ಎಲ್ಲ ಮೂಲಭೂತ ಸೌಲಭ್ಯಗಳು ಅವಶ್ಯಕವಿದೆ, ಆದರೆ ನಮ್ಮ ಸಮುದಾಯಕ್ಕೆ ನಿರೀಕ್ಷಿತ ಸೌಲಭ್ಯಗಳು ಸಿಗದಿರುವುದ ವಿಷಾದನೀಯ ಸಂಗತಿ. ಸಮುದಾಯವರು ತಮ್ಮ ಮಕ್ಕಳಿಗೆ ಆಸ್ತಿ ಪಾಸ್ತಿ ಮಾಡಿದರೆ ಅದು ತಮ್ಮ ವೈಯುಕ್ತಿಕ ಆಸ್ತಿಯಾಗಲಿದೆ, ಆದರೆ ಅವರಿಗೆ ಶಾಶ್ವತವಾದ ಆಸ್ತಿ ನೀಡಬೇಕಾದರೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸಿ ಈ ಸಮಾಜದ ಆಸ್ತಿಯನ್ನಾಗಿ ರೂಪಿಸಬೇಕು ಎಂದರು.ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ
ನಮ್ಮ ಸಮುದಾಯದಲ್ಲೂ ಐ.ಪಿ.ಎಸ್, ಐ.ಎ.ಎಸ್. ಕೆ.ಎ.ಎಸ್. ಮೆಡಿಕಲ್, ಇಂಜನಿಯರ್ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಆಚಾರ ವಿಚಾರಗಳನ್ನು ಕಲಿಸುವ ಮೂಲಕ ಸಮಾಜಮುಖಿಗಳಾಗಿ ಸೇವೆಸಲ್ಲಿಸುವಂತೆ ಮಾಡಿದಾಗ ಮಾತ್ರ ಪೋಷಕರಿಗೂ, ನಮ್ಮ ಸಮುದಾಯಕ್ಕೂ, ನಮ್ಮ ಜಿಲ್ಲೆಗೆ ಕೀರ್ತಿ ಲಭಿಸದಂತಾಗುವುದು ಹಾಗಾಗಿ ಶೈಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಂತಾಗ ಬೇಕೆಂದು ಕಿವಿಮಾತು ತಿಳಿಸಿದರು.ತಿಗಳ ಸಮುದಾಯವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿಯೂ ಹಿಂದುಳಿದಿದೆ. ನಮಗೆ ಅವಕಾಶ ಸಿಗುತ್ತಿರುವುದು ಮೀಸಲಾತಿಯಿಂದಾಗಿದೆ. ಇದರಿಂದಾಗಿ ನಾವು ತಲೆ ಎತ್ತುವಂತಾಗಿದೆ ಎಂಬುವುದನ್ನು ಮರೆಯದೆ ದೊರೆಯುವಂತ ಅವಕಾಶ ಸದ್ಬಳಿಸಿಕೊಂಡು ಮುಂದುವರೆದು ನಮ್ಮ ಪೀಳಿಗೆಗಳು ಭವಿಷ್ಯದಲ್ಲಿ ಸುಧಾರಣೆಯಾಗಲು ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯವಶ್ಯಕ ಎಂದರು.ಮುಳಬಾಗಿಲಿನಲ್ಲಿ ಭವನಮುಳಬಾಗಿಲಿನಲ್ಲಿಯೋ ಸಮುದಾಯ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ, ಇದಕ್ಕೂ ಸಹ ಸಮುದಾಯದ ದಾನಿಗಳು ಉದಾರವಾಗಿ ದೇಣಿಗೆ ನೀಡಬೇಕು, ಪ್ರಥಮವಾಗಿ ಯಾವುದೇ ಸಾಧನೆಗೆ ಸಂಘಟನೆ ಮುಖ್ಯವಾಗುತ್ತದೆ ಎಂದರು.ಶಿವನಾಪುರ ಶ್ರೀಆಧಿಶಕ್ತಿ ಮಹಾ ಸಂಸ್ಥಾನ ಪೀಠಾಧಿಪತಿ ಶ್ರೀ ಪ್ರಣವಾನಂದಪುರಿ ಮಹಾಸ್ವಾಮಿ ದಿವ್ಯಸಾನಿಧ್ಯ ನುಡಿಗಳಾಡಿ ನಮ್ಮ ಸಮುದಾಯವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದು ಗಣಿತದಲ್ಲಿನ ಶೂನ್ಯ ಸ್ಥಾನದಲ್ಲಿದ್ದರೂ ಮೌಲ್ಯಯುತವಾದದ್ದು ಎಂದು ಉದಾಹರಣೆ ನೀಡಿದರು.ರಾಜ್ಯ ತಿಗಳ ನೌಕರರ ಸಂಘದ ಅಧ್ಯಕ್ಷ ಎಲ್.ಎ.ಮಂಜುನಾಥ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಧರಕಾಸ್ತು ಸಮಿತಿ ಮಾಜಿ ಅಧ್ಯಕ್ಷ ಬೆಗ್ಲಿ ಸೂರ್ಯ ಪ್ರಕಾಶ್, ಪೆಟ್ರೋಲ್ ಬಂಕ್ ಮಂಜುನಾಥ್, ನಗರಸಭೆ ಸದಸ್ಯ ವಿ.ಮಂಜುನಾಥ್, ನಗರಸಭಾ ಮಾಜಿ ಸದಸ್ಯ ಕೀಲುಕೋಟೆ ಕಾಶಿ, ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ, ಬೆಂಗಳೂರು ಚಿತ್ರಕಲಾ ಪರಿಷತ್ ಮಾಜಿ ಉಪಾಧ್ಯಕ್ಷ ಎ.ರಾಮಕೃಷ್ಣ, ಸಮಾಜ ಸೇವಕಿ ಗಾಯತ್ರಮ್ಮ, ಬಂಗಾರಪೇಟೆ ಕುಮರೇಶ್ ಇದ್ದರು.