ಸಾರಾಂಶ
ಸುಮಾರು ₹2ಕೋಟಿ ಗಳಲ್ಲಿ ಈ ಕ್ರೀಡಾಂಗಣ ಅಭಿವೃದ್ಧಿಯಾಗುತ್ತಿದ್ದು, ಎಲ್ಲ ಕಾಮಗಾರಿಗಳು ಗುಣಮಟ್ಟತೆಯೊಂದಿಗೆ ನಿರ್ಮಾಣವಾಗಿ ಕ್ರೀಡಾಪಟುಗಳು ಸಮರ್ಪಕವಾಗಿ ಬಳಸುವಂತಾಗಲಿ.
ಕನ್ನಡಪ್ರಭ ವಾರ್ತೆ ಸವದತ್ತಿ
ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕು ಕ್ರೀಡಾಂಗಣಗಳನ್ನು ಅಭಿವೃದ್ಧಿ ಮಾಡಿ, ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸುಮಾರು ₹2ಕೋಟಿ ಗಳಲ್ಲಿ ಈ ಕ್ರೀಡಾಂಗಣ ಅಭಿವೃದ್ಧಿಯಾಗುತ್ತಿದ್ದು, ಎಲ್ಲ ಕಾಮಗಾರಿಗಳು ಗುಣಮಟ್ಟತೆಯೊಂದಿಗೆ ನಿರ್ಮಾಣವಾಗಿ ಕ್ರೀಡಾಪಟುಗಳು ಸಮರ್ಪಕವಾಗಿ ಬಳಸುವಂತಾಗಲಿ ಎಂದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ತಾಲೂಕು ಕ್ರೀಡಾಂಗಣದಲ್ಲಿ ಕಬಡ್ಡಿ, ಖೋಖೋ, ಕ್ರಿಕೆಟ್ ನೆಟ್, ವಾಲಿಬಾಲ್, ಉದ್ದಜಿಗಿತ, ಎತ್ತರ ಜಿಗಿತ ಸೇರಿದಂತೆ ಟಿನ್ನಿಸ್ ಕ್ರಿಕೆಟ್ ಮೈದಾನವನ್ನು ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದ್ದು, ವೀಕ್ಷಕರ ಗ್ಯಾಲರಿಗಳ ಜೊತೆಗೆ ಕುಡಿಯುವ ನೀರು ಮತ್ತು ಹೈಮಾಸ್ಟ್ ವಿದ್ಯುತ್ತ ದ್ವೀಪಗಳನ್ನು ಅಳವಡಿಸಲಾಗುತ್ತಿದೆ ಎಂದರು.ರಾಜಶೇಖರ ಕಾರದಗಿ, ಬಿ.ಎನ್.ಪ್ರಭುನವರ, ಸಿ.ಬಿ.ಬಾಳಿ, ಶಿವಾನಂದ ಪಟ್ಟಣಶೆಟ್ಟಿ, ಮಲ್ಲು ಜಕಾತಿ, ಅಶೋಕ ಹಾದಿಮನಿ, ಪ್ರವೀಣ ರಾಮಪ್ಪನವರ, ಮೋಹನ ಬೋಪೆ, ಆನಂದ ಚಿಂಚಣಿ, ಸೋಮನಿಂಗ ಚೌವ್ವಾನ, ಎಫ್.ವೈ.ಗಾಜಿ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇದ್ದರು.