ಜಲಜೀವನ ಮಿಷನ್‌: ಜಲಮೂಲದ ಗ್ಯಾರಂಟಿ ಕೊಡಿ

| Published : Jan 04 2024, 01:45 AM IST

ಸಾರಾಂಶ

ದೀವಳ್ಳಿಯಲ್ಲಿ ನದಿಯಲ್ಲಿ ಈಗಲೇ ಮರಾಕಲ್ ಕುಮಟಾ-ಹೊನ್ನಾವರ ಜಂಟಿ ಯೋಜನೆಗೆ ಸಮರ್ಪಕ ನೀರಿಲ್ಲ. ಮತ್ತೊಂದು ಬೃಹತ್ ಯೋಜನೆಗೆ ಎಲ್ಲಿಂದ ನೀರು ಕೊಡಲು ಸಾಧ್ಯ. ಯೋಜನೆಯನ್ನು ಸಮರ್ಪಕವಾಗಿ ಮಾಡದೇ ಇರುವ ಕಾರಣಕ್ಕೆ ಭವಿಷ್ಯದಲ್ಲಿ ನೀರಿನ ಕೊರತೆಯಿಂದ ನೂರಾರು ಕೋಟಿ ಕಾಮಗಾರಿ ವ್ಯರ್ಥ.

ಕುಮಟಾ:

ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಕಾಮಗಾರಿ ನಡೆಸಿ ದೀವಳ್ಳಿ ಬಳಿ ಅಘನಾಶಿನಿ ನದಿ ನೀರೆತ್ತುವ ಮುನ್ನ ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನದಿಯಲ್ಲಿ ನೀರಿನ ಲಭ್ಯತೆ ಬಗ್ಗೆ ಶಾಸಕ ದಿನಕರ ಶೆಟ್ಟಿ ಖಚಿತಪಡಿಸಿ ಜವಾಬ್ದಾರಿ ಹೊರಬೇಕು. ಇಲ್ಲದಿದ್ದರೆ ವೃಥಾ ಕಾಮಗಾರಿಯಿಂದ ಸರ್ಕಾರದ ನೂರಾರು ಕೋಟಿ ಹಣ ಪೋಲು ಮಾಡುವುದಾದರೆ ಸಾರ್ವಜನಿಕ ಹೋರಾಟ ಅನಿವಾರ್ಯ ಎಂದು ಸಾಮಾಜಿಕ ಕಾರ್ಯಕರ್ತ ಭಾಸ್ಕರ ಪಟಗಾರ ತಿಳಿಸಿದರು.

ಈ ಬಗ್ಗೆ ಜೆಜೆಎಂ ಬಹುಗ್ರಾಮ ಯೋಜನೆಯಡಿ ಅಘನಾಶಿನಿ ನದಿ ನೀರು ಎತ್ತಲಾಗುವ ದೀವಳ್ಳಿಯಲ್ಲಿ ನದಿಪಾತ್ರಕ್ಕೆ ಬುಧವಾರ ತೆರಳಿದ ಭಾಸ್ಕರ ಪಟಗಾರ ಸ್ಥಳೀಯರೊಂದಿಗೆ ಚರ್ಚಿಸಿದರು. ಈ ವೇಳೆ ಸೊಪ್ಪಿನಹೊಸಹಳ್ಳಿ, ಸಂತೇಗುಳಿ ಭಾಗದ ಕೃಷಿಕರು ಸಮಸ್ಯೆ ವಿವರಿಸಿ ಕಳೆದ ಕೆಲ ವರ್ಷಗಳಿಂದ ಅಘನಾಶಿನಿ ನದಿಯಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ನೀರು ಬತ್ತುತ್ತಿದೆ. ದೀವಳ್ಳಿಯಿಂದ ಮರಾಕಲ್ ಯೋಜನೆಯಡಿ ಕುಮಟಾ-ಹೊನ್ನಾವರಕ್ಕೆ ಈಗಾಗಲೇ ನೀರು ಸರಬರಾಜು ವ್ಯವಸ್ಥೆ ಚಾಲ್ತಿಯಲ್ಲಿದ್ದು ಆ ಯೋಜನೆಗೂ ನೀರಿನ ತತ್ವಾರವಾಗುತ್ತದೆ. ಹೀಗಾಗಿ ಜೆಜೆಎಂ ಯೋಜನೆಯ ನೀರೆತ್ತುವ (ಪಂಪ್‌ಹೌಸ್) ಸ್ಥಳ ಬದಲಾವಣೆ ಮಾಡಬೇಕೆಂದು ಶಾಸಕ ದಿನಕರ ಶೆಟ್ಟಿ ಅವರಿಗೆ ಒತ್ತಾಯಿಸಿದ್ದೆವು. ಶಾಸಕರು ಸ್ಥಳ ವೀಕ್ಷಣೆ ಮಾಡಿ ನಿರ್ಧರಿಸುವುದಾಗಿ ತಿಳಿಸಿದ್ದರು. ಆದರೆ ಬದಲಾವಣೆಯೂ ಆಗಿಲ್ಲ. ಆದರೆ, ಯೋಜನೆಯ ಕಾಮಗಾರಿ ಈ ಭಾಗದಲ್ಲಿ ನಡೆದಿದೆ ಎಂದು ತಿಳಿಸಿದರು.ಕೇಂದ್ರ ಸರ್ಕಾರದ ₹ ೧೯೯ ಕೋಟಿ ವೆಚ್ಚದಲ್ಲಿ ೧೪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಪೂರೈಸಲಿರುವ ಯೋಜನೆಯ ಪೈಪ್‌ಲೈನ್ ಕಾಮಗಾರಿ ಜನ ವಿರೋಧದ ನಡುವೆಯೂ ಹಲವೆಡೆ ನಡೆದಿದೆ. ದೀವಳ್ಳಿಯಲ್ಲಿ ನದಿಯಲ್ಲಿ ಈಗಲೇ ಮರಾಕಲ್ ಕುಮಟಾ-ಹೊನ್ನಾವರ ಜಂಟಿ ಯೋಜನೆಗೆ ಸಮರ್ಪಕ ನೀರಿಲ್ಲ. ಮತ್ತೊಂದು ಬೃಹತ್ ಯೋಜನೆಗೆ ಎಲ್ಲಿಂದ ನೀರು ಕೊಡಲು ಸಾಧ್ಯ. ಯೋಜನೆಯನ್ನು ಸಮರ್ಪಕವಾಗಿ ಮಾಡದೇ ಇರುವ ಕಾರಣಕ್ಕೆ ಭವಿಷ್ಯದಲ್ಲಿ ನೀರಿನ ಕೊರತೆಯಿಂದ ನೂರಾರು ಕೋಟಿ ಕಾಮಗಾರಿ ವ್ಯರ್ಥವಾಗಬಾರದು. ಸ್ಥಳೀಯ ಕೃಷಿಕರಿಗೂ ಸಮಸ್ಯೆಯಾಗಬಾರದು. ಈ ನಿಟ್ಟಿನಲ್ಲಿ ಒಂದು ವಾರದೊಳಗೆ ಸೂಕ್ತ ನಿರ್ಣಯ ಕೈಗೊಳ್ಳದಿದ್ದರೆ ಬೃಹತ್ ಹೋರಾಟ ಮಾಡೋಣ. ಆದ್ದರಿಂದ ಈ ಬಗ್ಗೆ ಶಾಸಕ ದಿನಕರ ಶೆಟ್ಟಿ ಅವರನ್ನು ಜಲಮೂಲದ ಗ್ಯಾರಂಟಿ ಕೊಡಿ ಎಂದು ಗಮನ ಸೆಳೆದಿದ್ದೇನೆ ಎಂದು ತಿಳಿಸಿದರು.ಸ್ಥಳೀಯರಾದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಲ್ವದಾರ್ ಅಂಬ್ರೋಸ್, ಮೋಹನ ನಾಯ್ಕ, ಸಾತು ಗೌಡ, ತುಳಸು ಗೌಡ, ಸಂತೋಷ ಇನ್ನಿತರರು ಇದ್ದರು.