ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕೇಂದ್ರದ ಮೇಲೆ ಬೊಟ್ಟು ಮಾಡುವ ಕಾಂಗ್ರೆಸ್ ಸರ್ಕಾರ ಮೊದಲು ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಹಾಗೂ ಕಳೆದ 20 ವರ್ಷಗಳಿಂದ ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಒಟ್ಟು ಅನುದಾನ, ತೆರಿಗೆ ಹಂಚಿಕೆ ಸೇರಿದಂತೆ ಎಲ್ಲ ಅಂಶಗಳನ್ನೊಳಗೊಂಡ ಶ್ವೇತಪತ್ರ ಹೊರಡಿಸಲಿ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು.ಬೆಳಗಾವಿ ಮಹಾವೀರ ಭವನದಲ್ಲಿ ಸೋಮವಾರ ನಡೆದ ಗ್ರಾಮಾಂತರ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರು ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದು ಸತ್ಯವಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮ್ಯಯನವರೇ, ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುವುದನ್ನು ಬಿಟ್ಟು, ಶ್ವೇತಪತ್ರ ಹೊರಡಿಸಿ. ಬೆಳಗಾವಿ ಜಿಲ್ಲೆ ಒಂದಕ್ಕೆ 12 ಲಕ್ಷ ಪಡಿತರದಾರರಿಗೆ ಉಚಿತ ಅಕ್ಕಿ, 3.46 ಲಕ್ಷ ಜನರಿಗೆ ಉಜ್ವಲಾ ಗ್ಯಾಸ್, ₹ 12.5 ಸಾವಿರ ಕೋಟಿ ರೈಲ್ವೆ ಯೋಜನೆ ಹೀಗೆ ಪಟ್ಟಿ ಮಾಡುತ್ತಾ ಹೊದರೆ ಹಿಂದೆಂದೂ ಸಿಗದಷ್ಟು ಅನುದಾನ ರಾಜ್ಯಕ್ಕೆ ಸಿಕ್ಕಿದೆ ಎಂದರು.
ವಿಧಾನ ಪರಿಷತ್ತಿನ ಸದಸ್ಯ, ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್.ಅರುಣ ಮಾತನಾಡಿ, ಯುಪಿಎ ಅವಧಿಗೆ ಹೋಲಿಸಿದರೆ ಎನ್ಡಿಎ ಅವಧಿಯಲ್ಲಿ ದೇಶದ ಚಿತ್ರಣವೆ ಬದಲಾಗಿದೆ. ಯುವಕರಿಗೆ ಸ್ವಯಂ ಉದ್ಯೋಗ, ಕುಶಲಕರ್ಮಿ ಶ್ರಮಯೊಜನೆ ಮೂಲಕ ಕರ್ನಾಟಕಕ್ಕೆ ಹಿಂದಿನಕ್ಕಿಂತ ಮೂರು ಪಟ್ಟು ಹಣ ದೊರೆತಿದೆ. ಈ ಸತ್ಯ ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಿದೆ. ಜಲಜೀವನ್ ಮಿಷನ್, ಅಮೃತ್ ಯೋಜನೆ, ಸ್ಮಾರ್ಟ್ಸಿಟಿ, ಪಿಎಂ ಅವಾಸ್ ಯೋಜನೆ, ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಇದುವರೆಗೆ ಎಷ್ಟು ಅನುದಾನ ನೀಡಿದೆ, ಅದು ಎಷ್ಟರ ಮಟ್ಟಿಗೆ ಬಳಕೆಯಾಗಿದೆ ಎಂಬ ಶ್ವೇತಪತ್ರ ಹೊರಡಿಸುವ ಧಮ್ಮು ತಾಕತ್ತು ನಿಮಗಿದೆಯೇ ಎಂದು ಸವಾಲು ಹಾಕಿದರು.ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಪಟಾಲಮ್ ಕಟ್ಟಿಕೊಂಡು ಬೊಬ್ಬೆ ಹೊಡೆಯುತ್ತಿರುವ ಸಿದ್ದರಾಮಯ್ಯನವರೇ, ಕನ್ನಡಿಗರ ಶ್ರಮದ ಹಣವನ್ನು ವಾಮಮಾರ್ಗದಲ್ಲಿ ಸಂಗ್ರಹಿಸಿ ಛತ್ತೀಸ್ಘಡ, ಮಧ್ಯ ಪ್ರದೇಶ ಚುನಾವಣೆಗೆ ನೀಡಿದ ನಿಮಗೆ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದರು.
ಕೆಎಂಎಫ್ ಮಾಜಿ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿರಬಹುದು. 10 ತಿಂಗಳ ಕಾಂಗ್ರೆಸ್ ಸರ್ಕಾರ ಜನತೆಗೆ ಬೇಸರವಾಗಿದ್ದು, ಸದ್ಯದಲ್ಲಿ ಮರು ಚುನಾವಣೆ ನಡೆದರೆ ಬಿಜೆಪಿ 140ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ. ಕಾರ್ಯಕರ್ತರು ಯಾವುದೆ ಕಾರಣಕ್ಕೂ ಎದೆಗುಂದದೆ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಂಬರುವ ಲೊಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ವಿಜಯ ಸಾಧಿಸೋಣ. ಬೈಲಹೊಂಗಲ ಸವದತ್ತಿ ಹಾಗೂ ರಾಮದುರ್ಗದಲ್ಲಿ ಪಕ್ಷಕ್ಕೆ ಹೆಚ್ಚು ಮತಗಳು ದೊರೆಯುವಂತೆ ಶ್ರಮ ವಹಿಸೋಣ ಪಕ್ಷದ ಕಾರ್ಯಕರ್ತರೊಂದಿಗೆ ನಾನಿದ್ದೇನೆ ಎಂದರು.ಸಂಸದೆ ಮಂಗಲ ಅಂಗಡಿ, ಶಾಸಕ ವಿಠ್ಠಲ ಹಲಗೇಕರ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಖಾನಾಪುರ ಶಾಸಕ ವಿಠಲ ಹಲಗೇಕರ, ಮಾಜಿ ಶಾಸಕ ಅರವಿಂದ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿದರು.
ವಿಭಾಗ ಪ್ರಭಾರಿ ಪ್ರಕಾಶ ಅಕ್ಕಲಕೋಟ ಸಮಘಟನಾತ್ಮಕ ಅವಧಿ ತಗೆದುಕೊಂಡರು. ಸಂದೀಪ ದೇಶಪಾಂಡೆ ಮೊದಿಯವರಿಗೆ ರಾಮ ಮಂದಿರ ಕಾರ್ಯನಿರ್ವಹಿಸಿದ್ದಕ್ಕೆ ಅಭಿನಂದನೆ ನಿರ್ಣಯ ಮಂಡಿಸಿದರೆ ನೀತಿನ ಚೌಗಲೆ ಅನಮೋದನೆ ಮಾಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ಜಗದೀಶ ಮೆಟಗುಡ್, ಸುರೇಶ ಮಾರಿಹಾಳ, ಮಂಜುಳಾ ಹಿರೇಮಠ, ಯುವರಾಜ ಜಾಧವ, ಜಗದೀಶ ಕೌಜಗೇರಿ, ಡಾ.ಗುರುಪ್ರಸಾದ ಕೋತಿನ, ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್. ಸಿದ್ದನಗೌಡರ ಇದ್ದರು.---------
ಕೋಟ್....ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿರಬಹುದು. 10 ತಿಂಗಳ ಕಾಂಗ್ರೆಸ್ ಸರ್ಕಾರ ಜನತೆಗೆ ಬೇಸರವಾಗಿದ್ದು, ಸದ್ಯದಲ್ಲಿ ಮರು ಚುನಾವಣೆ ನಡೆದರೆ ಬಿಜೆಪಿ 140ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ. ಕಾರ್ಯಕರ್ತರು ಯಾವುದೆ ಕಾರಣಕ್ಕೂ ಎದೆಗುಂದದೆ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಂಬರುವ ಲೊಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ವಿಜಯ ಸಾಧಿಸೋಣ.- ಬಾಲಚಂದ್ರ ಜಾರಕಿಹೊಳಿ, ಶಾಸಕ, ಕೆಎಂಎಫ್ ಮಾಜಿ ಅಧ್ಯಕ್ಷ-------------
ಕೋಟ್..ಕಾಂಗ್ರೆಸ್ನವರು ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದು ಸತ್ಯವಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮ್ಯಯನವರೇ, ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುವುದನ್ನು ಬಿಟ್ಟು ಆರ್ಥಿಕ ಪರಿಸ್ಥಿತಿ ಬಗ್ಗೆ ಹಾಗೂ ಕಳೆದ 20 ವರ್ಷಗಳಿಂದ ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಒಟ್ಟು ಅನುದಾನ, ತೆರಿಗೆ ಹಂಚಿಕೆ ಸೇರಿದಂತೆ ಎಲ್ಲ ಅಂಶಗಳನ್ನೊಳಗೊಂಡ ಶ್ವೇತಪತ್ರ ಹೊರಡಿಸಿ.
- ಈರಣ್ಣ ಕಡಾಡಿ. ರಾಜ್ಯಸಭಾ ಸದಸ್ಯ