ಸಾರಾಂಶ
ಬಡವರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಯೋಜನೆಯಡಿ ಈ ಯೋಜನೆ ರೂಪಿಸಲಾಗಿದೆ.
ಕನ್ನಡಪ್ರಭ ವಾರ್ತೆ ಕೋಲಾರ
ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಡವರಿಗಾಗಿ ಕೇಂದ್ರ ಸರ್ಕಾರದಿಂದ ವಿತರಿಸುವ ಭಾರತ್ ಬ್ರ್ಯಾಂಡ್ ಅಕ್ಕಿಯನ್ನು ನಗರದ ಡೂಂಲೈಟ್ ವೃತ್ತದಲ್ಲಿ ಸಾರ್ವಜನಿಕರಿಗೆ ವಿತರಿಸಿದರು.ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಬಡವರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಯೋಜನೆಯಡಿ ಈ ಯೋಜನೆ ರೂಪಿಸಲಾಗಿದೆ, ೨೯ ರು.ಗಳಿಗೆ ಕೆಜಿ ಅಕ್ಕಿ, ಗೋದಿ ಕೆಜಿಗೆ ೫೦ ರು., ಹೆಸರು ಕಾಳು ಕೆಜಿಗೆ ೯೦ ರು., ತೊಗರಿ ಬೇಳೆ ಕೆಜಿಗೆ ೬೦ ರು. ಗಳಿಗೆ ಮಾರಲಾಗುತ್ತಿದೆ, ಜನರಿಗೆ ಅನುಕೂಲವಾಗುವಂತೆ ದಿನನಿತ್ಯ ಬೇಕಾಗುವ ಆಹಾರ ಸಾಮಾಗ್ರಿಗಳನ್ನು ರಿಯಾಯತಿ ದರದಲ್ಲಿ ನೀಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಪ್ರತಿ ವ್ಯಕ್ತಿಗೆ ೧೦ಕೆಜಿ ಅಕ್ಕಿಯನ್ನು ಉಚಿತವಾಗಿ ಒದಗಿಸುತ್ತೇವೆಂದು ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿದೆ. ನಂತರ ಕೇಂದ್ರ ಸರ್ಕಾರ ನೀಡುತ್ತಿರುವ ೫ ಕೆಜಿ ಅಕ್ಕಿ ಹೊರತುಪಡಿಸಿ ಒಂದು ಗ್ರಾಂನಷ್ಟು ಅಕ್ಕಿ ಹೆಚ್ಚುವರಿಯಾಗಿ ಒದಗಿಸಲು ಸಾಧ್ಯವಾಗಲಿಲ್ಲ, ಆದರೆ, ಕೇಂದ್ರ ಸರ್ಕಾರವು ಟೊಳ್ಳು ಭರವಸೆ ನೀಡದೆ ಪ್ರತಿ ಕೆಜಿ ಗೆ ರು.೨೯ ಮಾತ್ರ ಪಡೆದು ದೇಶದ ಪ್ರತಿಯೊಬ್ಬರಿಗೂ ಅಕ್ಕಿ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.ಜಿಪಂ ಮಾಜಿ ಸದಸ್ಯ ಎಸ್.ಬಿ ಮುನಿವೆಂಕಟಪ್ಪ, ಕುಡಾ ಮಾಜಿ ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ಸಾ.ಮಾ.ಬಾಬು, ನಾಮಾಲ್ ಮಂಜು, ಸಂಪತ್, ಭಜರಂಗದಳ ಬಾಲಾಜಿ, ತಿಮ್ಮರಾಯಪ್ಪ, ಓಹಿಲೇಶ್, ಶ್ರೀನಿವಾಸ್ ಇದ್ದರು.