ನಮ್ಮೆಲ್ಲರ ಉಳಿವಿಗಾಗಿ ಮೋದಿ ಗೆಲ್ಲಬೇಕು

| Published : Apr 21 2024, 02:19 AM IST

ಸಾರಾಂಶ

ದಿಟ್ಟ ನಿರ್ಧಾರಗಳಿಂದ ಇಂದು ಭಾರತ ಜಗತ್ತಿನ 5ನೇ ಆರ್ಥಿಕ ರಾಷ್ಟವಾಗಿ ಬೆಳೆದು ನಿಂತಿದೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ನರೇಂದ್ರ ಮೋದಿ ಅಪರೂಪದ ಅಪ್ಪಟ ವಜ್ರ. ಅವರನ್ನು ಕಳೆದುಕೊಂಡರೆ ಭಾರತಕ್ಕೆ ಭವಿಷ್ಯವಿಲ್ಲ. ದೇಶ ಮತ್ತು ನಮ್ಮ ಉಳಿವಿಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೇಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಮೋ ಬ್ರಿಗೇಡ್ ಮಹಾಲಿಂಗಪುರ ಘಟಕದ ವತಿಯಿಂದ ಕೆಎಲ್‌ಇ ಕಾಲೇಜು ಎದುರು ಶುಕ್ರವಾರ ಸಂಜೆ ಆಯೋಜಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯೀಕರಣದಂತಹ ದಿಟ್ಟ ನಿರ್ಧಾರಗಳಿಂದ ಇಂದು ಭಾರತ ಜಗತ್ತಿನ 5ನೇ ಆರ್ಥಿಕ ರಾಷ್ಟವಾಗಿ ಬೆಳೆದು ನಿಂತಿದೆ. ತ್ರಿವಳಿ ತಲಾಖ್ ರದ್ಧತಿಯಿಂದ ಮುಸ್ಲಿಂ ಮಹಿಳೆಯರ ಶಕ್ತಿ ಹೆಚ್ಚಿದೆ ಎಂದು ನುಡಿದರು.

ತಾವು ದಲಿತ ಪರ ಎಂದು ಹೇಳಿಕೊಳ್ಳುವ ಸಿದ್ಧರಾಮಯ್ಯ ಮುಸ್ಲಿಮರ ಓಲೈಕೆಗಾಗಿ ದಲಿತರ ಆಭಿವೃದ್ಧಿಗಾಗಿ ಮೀಸಲಿದ್ದ ₹11 ಸಾವಿರ ಕೋಟಿ ಮುಸ್ಲಿಮರಿಗೆ ನೀಡಿ ದಲಿತರಿಗೆ ದ್ರೋಹ ಬಗೆದಿದ್ದಾರೆ. ಆದರೆ, ಮೋದಿ ಅಂಬೇಡ್ಕರ್‌ ಜನ್ಮಸ್ಥಳ, ವಿದ್ಯಾಭ್ಯಾಸ ಸ್ಥಳ, ಸಮಾಧಿಗಳನ್ನು ಪಂಚ ತೀರ್ಥಗಳೆಂದು ಅಭಿವೃದ್ಧಿ ಮಾಡಿದ್ದಾರೆ. ಹಾಗೂ ದಲಿತ ಮಹಿಳೆಯನ್ನು ರಾಷ್ಟ್ರಪತಿಗಳನ್ನಾಗಿ ಮಾಡಿ ಗೌರವ ನೀಡಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ನವರಿಗೆ ದೇಶದ ಅಭಿವೃದ್ಧಿ ಬೇಕಿಲ್ಲ. ಕಳೆದ 10 ವರ್ಷಗಳ ಮೋದಿ ಆಡಳಿತಾವಧಿಯಲ್ಲಿ ಇಡೀ ದೇಶದಲ್ಲೇ ಬಾಂಬ್ ಸ್ಪೋಟದ ಸದ್ದಡಗಿತ್ತು. ಆದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಬಂದ ತಕ್ಷಣವೇ ಬೆಂಗಳೂರಿನಲ್ಲಿ ಬಾಂಬ್ ಸ್ಪೋಟ ನಡೆಯಿತು. ಬೆಳಗಾವಿ ಹಾಗೂ ವಿಧಾನಸೌಧದಲ್ಲೂ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೇಳಿಬಂದವು. ಹಿಂದೂ ಯುವತಿಯರ ಹತ್ಯೆ, ಯುವಕರ ಮೇಲೆ ಹಲ್ಲೆ ನಡೆಯಿತ್ತಲೇ ಇವೆ. ಇದು ಕಾಂಗ್ರೆಸ್‌ನ ವೋಟ್‌ ಬ್ಯಾಂಕ್‌ ಗಿಫ್ಟ್‌ ಎಂದು ಟೀಕಿಸಿದರು.

ಕೇವಲ 10 ವರ್ಷದಲ್ಲಿ ಹಿಂದೂಗಳ 500 ವರ್ಷಗಳ ಕನಸು ರಾಮಮಂದಿರ ನಿರ್ಮಾಣವಾಗಿದೆ. ಕೇದಾರನಾಥ ಸ್ವರ್ಗವಾಗಿದೆ. ಮುಸ್ಲಿಂ ರಾಷ್ಟ್ರ ಅರಬ್‌ನ ಅಬುದಾಬಿಯಲ್ಲಿ ಹಿಂದೂ ದೇವಾಲಯ ನಿರ್ಮಾಣವಾಗಿದೆ. ಕಾಶಿ ವಿಶ್ವನಾಥ ದೇಗುಲದ ಕಾಯಕಲ್ಪಕ್ಕೆ ನಿರ್ಧಾರವಾಗಿದೆ. ಇಂದು ದೇಶ ಬದಲಾಗಿದೆ. ಜಗತ್ತಿನಲ್ಲಿ ಭಾರತದ ಗೌರವ ಉತ್ತುಂಗಕ್ಕೇರಿದೆ. ಭಾರತ ಜಗತ್ತಿನ ನಂಬರ್ ಒನ್ ರಾಷ್ಟ್ರವಾಗಬೇಕಾದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೇಬೇಕು ಎಂದರು.

ಹುಕ್ಕೇರಿ ಕ್ಷೇತ್ರ ಕ್ಯಾರಗುಡ್ಡ ಮಠದ ಅಭಿನವ ಮಂಜುನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತ ಈಗ ಬದಲಾಗಿದೆ. ಈಗ ನಮ್ಮ ಸಮಯ ಬಂದಿದೆ. ಸಮರ್ಥ ನಾಯಕ ಮೋದಿಯವರಿಂದ ಭಾರತ ವಿಶ್ವಗುರುವಾಗಿದೆ. ಇತಿಹಾಸ ನಿರ್ಮಾಣಕ್ಕಾಗಿ ಮತ್ತೊಮ್ಮೆ ಮೋದಿ ಗೆಲ್ಲಬೇಕು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಫಯಾಜ್‌ನಿಂದ ಹತಳಾದ ನೇಹಾ ಹಿರೇಮಠ ಅವರಿಗೆ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಪನೆ ಮಾಡಿ ಉದ್ಘಾಟಿಸಲಾಯಿತು.

ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಸಿದ್ದು ಸವದಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಶೇಖರ ಅಂಗಡಿ, ಮಹಾಲಿಂಗಪ್ಪ ಕುಳ್ಳೊಳ್ಳಿ, ಶ್ರೀಮಂತ ಹಳ್ಳಿ, ಮನೋಹರ ಶಿರೋಳ, ಜಿ.ಎಸ್. ಗೊಂಬಿ, ಶಿವಾನಂದ ಅಂಗಡಿ, ರವಿ ಜವಳಗಿ, ರಾಕೇಶ ಕೆಸರಗೊಪ್ಪ, ಆನಂದ ಶಿರಗುಪ್ಪಿ, ಮಹಾಲಿಂಗ ದೇಸಾಯಿ, ಮಂಜು ಗೊಂಬಿ, ರವಿ ಗಿರಿಸಾಗರ, ವಿನೋದ ಹುಣಶ್ಯಾಳ, ಸಚಿನ್ ಕಲ್ಮಡಿ, ಸಂಗಮೇಶ ಅಂಬಲ್ಯಾಳ, ತಮ್ಮಣ್ಣಿ ಆದೆಪ್ಪನವರ, ಶಶಿ ಬದ್ನಿಕಾಯಿ, ಸಚಿನ್ ಖೋತ್, ಸಿದ್ದುಗೌಡ ಪಾಟೀಲ, ಶಿವಾನಂದ ತಿಪ್ಪಾ, ಪರಪ್ಪ ಹುದ್ದಾರ ಇತರರಿದ್ದರು.

ಡಾ.ಗೀತಾ ಕೋಲ್ಕರ್ ಮತ್ತು ಸಂಗಡಿಗರ ವೈಯಕ್ತಿಕ ಗೀತೆಯೊಂದಿಗೆ ಹಿಂದೂ ಮುಖಂಡ ನಂದು ಗಾಯಕವಾಡ ಸ್ವಾಗತಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು, ರಾಜೇಂದ್ರ ನಾವಿ ವಂದಿಸಿದರು.

ಕೋಟ್..

ಕಳೆದ 10 ವರ್ಷಗಳ ಮೋದಿ ಆಡಳಿತಾವಧಿಯಲ್ಲಿ ಇಡೀ ದೇಶದಲ್ಲೇ ಬಾಂಬ್ ಸ್ಪೋಟದ ಸದ್ದಡಗಿತ್ತು. ಆದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಬಂದ ತಕ್ಷಣವೇ ಬೆಂಗಳೂರಿನಲ್ಲಿ ಬಾಂಬ್ ಸ್ಪೋಟ ನಡೆಯಿತು. ಬೆಳಗಾವಿ ಹಾಗೂ ವಿಧಾನಸೌಧದಲ್ಲೂ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೇಳಿಬಂದವು. ಹಿಂದೂ ಯುವತಿಯರ ಹತ್ಯೆ, ಯುವಕರ ಮೇಲೆ ಹಲ್ಲೆ ನಡೆಯಿತ್ತಲೇ ಇವೆ. ಇದು ಕಾಂಗ್ರೆಸ್‌ನ ವೋಟ್‌ ಬ್ಯಾಂಕ್‌ ಗಿಫ್ಟ್‌.

ಚಕ್ರವರ್ತಿ ಸೂಲಿಬೆಲೆ. ಬ್ರಿಗೇಡ್ ಸಂಸ್ಥಾಪಕ