ಸಾರಾಂಶ
ಹೇಮಂತ್ ಪಾರೇರಾ ರಚಿಸಿರುವ ‘ಒಲವಿನ ಸವಾರಿ’ ಕಥಾ ಸಂಕಲನ ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಲೋಕಾರ್ಪಣೆಗೊಂಡಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಕೃತಿ ಬಿಡುಗಡೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಹೇಮಂತ್ ಪಾರೇರಾ ರಚಿಸಿರುವ ‘ಒಲವಿನ ಸವಾರಿ’ ಕಥಾ ಸಂಕಲನ ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಲೋಕಾರ್ಪಣೆಗೊಂಡಿತು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಸಾಹಿತ್ಯ ರಚನೆ ಎಲ್ಲರಿದಲೂ ಸಾಧ್ಯವಿಲ್ಲ. ಯಾರಿಗೆ ಸಾಹಿತ್ಯ ಮನಸ್ಸು ಮತ್ತು ಇಚ್ಛಾಶಕ್ತಿ ಇರುತ್ತದೆಯೋ ಅಂತಹವರು ಮಾತ್ರ ಸಾಹಿತಿಗಳಾಗಲು ಸಾಧ್ಯ ಎಂದರು.
ಹಿರಿಯ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಆಶಯ ನುಡಿಗಳನ್ನಾಡಿ, ಸುಂದರ ಪರಿಸರ ಮತ್ತು ಒಂಟಿತನ ಸಾಹಿತ್ಯ ಹೊರಬರಲು ಪೂರಕ ವಾತಾವರಣವಾಗಿದೆ. ಹೆಚ್ಚಿನವರು ಭ್ರಮೆಯಲ್ಲಿಯೇ ಬದುಕುವುದನ್ನು ಕಾಣಬಹುದು. ಇದರಿಂದಾಗಿ ಬರವಣಿಗೆದಾರರು ಕಡಿಮೆಯಿದ್ದಾರೆ. ಮೊದಲು ಭ್ರಮೆಯಿಂದ ಹೊರಬಂದು ಬರವಣಿಗೆಯತ್ತ ಸಾಗಬೇಕಿದೆ ಎಂದರು.ಸಾಹಿತಿಗಳು ನಿಂತ ನೀರಾಗದೆ, ಒಂದೇ ರೀತಿಯ ಬರವಣಿಗೆ ಮೈಗಂಟಿಸಿಕೊಳ್ಳುವುದನ್ನು ಬಿಟ್ಟು, ವಿಭಿನ್ನ ರೀತಿಯ ದೃಷ್ಟಿಕೋನದಿಂದ ಬರೆಯಬೇಕು. ಜನರ ಮತ್ತು ವಿಮರ್ಷಕರ ಹೇಳಿಕೆಗಳನ್ನು ಕೇಳಿಸಿಕೊಳ್ಳಲು ಸಿದ್ಧರಾಗಿ ಬರವಣಿಗೆ ಮುಂದುವರೆಸಬೇಕು. ಆಗ ಮಾತ್ರ ಸಾಹಿತಿಗಳಿಂದ ಪರಿಪೂರ್ಣ ಬರವಣಿಗೆ ಹೊರಬರಲು ಸಾಧ್ಯ ಎಂದರು.
ಹಿರಿಯ ಸಾಹಿತಿ ಜಲಾ ಕಾಳಪ್ಪ ಪುಸ್ತಕ ಪರಿಚಯ ಮಾಡಿದರು.ಲೇಖಕಿ ಎಚ್.ಆರ್. ಪವಿತ್ರ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಮಿಲನಾ ಭರತ್, ಯಡವನಾಡು ಶ್ರೀ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್ ಇದ್ದರು.