ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಭುಗಿಲೆದ್ದ ಆಕ್ರೋಶ

| Published : Dec 20 2024, 12:49 AM IST

ಸಾರಾಂಶ

ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಬಗ್ಗೆ ಹಗುರವಾಗಿ ಮತ್ತು ಜವಾಬ್ದಾರಿಯಿಲ್ಲದೆ ಮಾತನಾಡಿರುವ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಹೇಳಿಕೆ ಖಂಡಿಸಿ ಅಂಬೇಡ್ಕರ್‌ ಪ್ರತಿಮೆ ಮುಂದೆ ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಬಗ್ಗೆ ಹಗುರವಾಗಿ ಮತ್ತು ಜವಾಬ್ದಾರಿಯಿಲ್ಲದೆ ಮಾತನಾಡಿರುವ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಹೇಳಿಕೆ ಖಂಡಿಸಿ ಅಂಬೇಡ್ಕರ್‌ ಪ್ರತಿಮೆ ಮುಂದೆ ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಇದೇ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾತನಾಡಿ, ದೇಶದ ಗೃಹಮಂತ್ರಿ ಅಮಿತ್ ಶಾ ಅವರು, ಡಿ. ೧೭ರಂದು ಸಂಸತ್ತಿನಲ್ಲಿ ಮಾತನಾಡುವಾಗ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಬಗ್ಗೆ ಅತ್ಯಂತ ಹಗುರವಾಗಿ ಮತ್ತು ಜವಾಬ್ದಾರಿಯಿಲ್ಲದೆ ನಾಲಿಗೆಯ ಮೇಲೆ ಹಿಡಿತವಿಲ್ಲದೆ ಮಾತನಾಡಿರುವುದು ಖಂಡನೀಯ. ಈತ "ಈಗ ಫ್ಯಾಷನ್ ಆಗಿದೆ, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುತ್ತಿರುವುದು. ಇವರೆಲ್ಲಾ ಇಷ್ಟು ಸಾರಿ ಭಗವಂತನ ಸ್ಮರಣೆ ಮಾಡಿದ್ದೇ ಆಗಿದ್ದಲ್ಲಿ ಏಳು ಜನ್ಮದವರೆಗೆ ಸ್ವರ್ಗವಾದರೂ ದೊರೆಯುತ್ತಿತ್ತು " ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರ ಬಗ್ಗೆ ಇಷ್ಟೊಂದು ಹಗುರವಾಗಿ ನಾಲಿಗೆ ಹರಿಬಿಟ್ಟಿರುವ ಅಮಿತ್ ಶಾಗೆ ಒಂದು ಗಂಭೀರವಾದ ಎಚ್ಚರಿಕೆಯೊಂದನ್ನು ರವಾನಿಸಬೇಕಾಗಿದೆ ಎಂದರು.

"ಹೇಳುತ್ತೇವೆ ಕೇಳು ಅಮಿತ್ ಶಾ ನಮಗೆ ಏಳು ಜನ್ಮದ ಪುಣ್ಯ, ಸ್ವರ್ಗ ಬೇಡವೇ ಬೇಡ. ನಮಗೆ ಸ್ವರ್ಗ, ನರಕಗಳಲ್ಲಿ ನಂಬಿಕೆ ಇಲ್ಲ. ನಮಗೆ ಅಗತ್ಯವೂ ಇಲ್ಲ. ನಮಗೆ ಅಂಬೇಡ್ಕರ್ ಒಬ್ಬರೇ ಏಕೈಕ ದೇವರು. ಅದರಲ್ಲಿ ಎಂದಿಗೂ ರಾಜಿ ಇಲ್ಲ. ಅಂಬೇಡ್ಕರ್ ಅವರ ಹೆಸರನ್ನು ಉಸಿರಾಗಿಸಿಕೊಂಡಿದ್ದೇವೆ. ಕೊನೆಯ ಉಸಿರಿರುವವರೆಗೂ ಅಂಬೇಡ್ಕರ್ ಅವರ ಹೆಸರನ್ನೇ ಉಸಿರಾಗಿಸಿಕೊಳ್ಳುತ್ತೇವೆ ಕೂಡ. ಅಮಿತ್ ಶಾ ನೀವೆಲ್ಲಾ ಅಂಬೇಡ್ಕರ್ ಅವರ ಸಾಧನೆ, ಏಳಿಗೆ ಸಹಿಸದೆ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಬರುವ ಮೂಲಕ ನಿಮ್ಮ ಅಸಹಿಷ್ಣುತೆ ಪ್ರದರ್ಶಿಸುತ್ತಿದ್ದೀರಿ " ಎಂದು ಅಸಮಾಧಾನ ಹೊರಹಾಕಿದರು.

ಅಂಬೇಡ್ಕರ್ ಅವರನ್ನು ಮತ್ತು ಮತ್ತವರ ಸಮುದಾಯಗಳನ್ನು ಒಪ್ಪಿಕೊಳ್ಳಲು ನೀವು ಎಂದಿಗೂ ತಯಾರಿಲ್ಲ. ಇಡೀ ವಿಶ್ವವೇ ಒಪ್ಪಿಕೊಂಡು ವಿಶ್ವಸಂಸ್ಥೆ ಇಂದು ಅಂಬೇಡ್ಕರ್‌ ಅವರ ಜನ್ಮದಿನವಾದ ಏಪ್ರಿಲ್ ೧೪ರ ದಿನವನ್ನು ವಿಶ್ವ ಜ್ಞಾನದ ದಿನ ಎಂದು ಘೋಷಿಸಿದೆ. ಅಂಬೇಡ್ಕರ್‌ ಎಂದರೆ ಜ್ಞಾನದ ಸಂಕೇತ. ನೀವು ಅವರನ್ನು ಅರಗಿಸಿಕೊಳ್ಳಲು ಆಗದಂತ ಅಸೂಯೆ..ಛೇ..ನಮಗೆ ನೀವು ಹೇಳುವ ಸ್ವರ್ಗ, ದೇವರು, ಸ್ಮರಣೆ ಬೇಡ. ಅಂಬೇಡ್ಕರ್‌ ಹೆಸರೊಂದೇ ಸಾಕು. ನಮಗದೇ ಶಕ್ತಿ ನಮಗದೇ ಚೈತನ್ಯ ಮತ್ತು ಸ್ಫೂರ್ತಿ. ಸಾವಿರಾರು ವರ್ಷಗಳಿಂದ ನೀವು ಹೇಳುವ ದೇವರನ್ನು ಪೂಜಿಸಿ ಸಾಕಾಯ್ತು. ನಿಮ್ಮ ದೇವರು ನಮ್ಮನ್ನು ದೂರವೇ ಇಟ್ಟ. ಕಡೆಗೆ ಎಲ್ಲರಂತೆ ದೇವಾಲಯದೊಳಕ್ಕೆ ಬಿಟ್ಟುಕೊಳ್ಳಲಿಲ್ಲ ಮಾತ್ರವಲ್ಲ, ದೇವಾಲಯದ ಬಳಿಗೆ ಸುಳಿದರೂ ನಮಗೆ ಕಷ್ಟ ಕೊಡುತ್ತಿದ್ದ. ಅಂಬೇಡ್ಕರ್‌ ಬಂದ ಮೇಲೆಯೇ ನಮಗೆ ಸ್ವರ್ಗ, ಮೋಕ್ಷ ಎಲ್ಲವೂ, ನಮಗೆ ಅಂಬೇಡ್ಕರ್ ಸ್ಮರಣೆಯೇ ಸಾಕು ಎಂದರು. ಅಮಿತ್ ಶಾರನ್ನು ಕೇಂದ್ರ ಸಚಿವ ಸ್ಥಾನದಿಂದ ವಜಾ ಮಾಡಲು ಆಗ್ರಹಪಡಿಸಿದರು. ಇಲ್ಲವಾದಲ್ಲಿ ಈತನನ್ನು ವಜಾ ಮಾಡುವವರೆಗೂ ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ಮುಂದುವರಿಯುತ್ತವೆ ಎಂದು ಎಚ್ಚರಿಸಿ ಮನವಿ ನೀಡಿದರು.ಪ್ರತಿಭಟನೆಯಲ್ಲಿ ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಯ ದಲಿತ ಚಳವಳಿ ಜಿಲ್ಲಾ ಸಂಚಾಲಕ ಕೃಷ್ಣ, ರೈತ ಸಂಘದ ವಿಠ್ಠಲ, ಜಗದೀಶ್, ಪವಿತ್ರ, ಕಾಳಕ್ಕ, ಶಿವಣ್ಣ ಸೇರಿದಂತೆ ಇತರರು ಇದ್ದರು.