ರಾಮದುರ್ಗ ಪುರಸಭೆ ಬಜೆಟ್‌ಗೆ ಅನುಮೋದನೆ

| Published : Feb 26 2024, 01:30 AM IST

ಸಾರಾಂಶ

₹4.20 ಕೋಟಿ ಆದಾಯ ಪುರಸಭೆಯ ಕರ ಸೇರಿ ವಿವಿಧ ಮೂಲಗಳಿಂದ ನಿರೀಕ್ಷಿಸಲಾಗಿದೆ.

ಕನ್ನಡಪ್ರಭ ವಾರ್ತೆ ರಾಮದುರ್ಗ

2024-25ನೇ ಸಾಲಿನ ರಾಮದುರ್ಗ ಪುರಸಭೆಯ ₹15.56 ಲಕ್ಷ ಉಳಿತಾಯ ಬಜೆಟ್‌ಗೆ ಪುರಸಭೆ ಆಡಳಿತಾಧಿಕಾರಿಯೂ ಆಗಿರುವ ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಅನುಮೋದನೆ ನೀಡಿದ್ದಾರೆ ಎಂದು ಮುಖ್ಯಾಧಿಕಾರಿ ಈರಣ್ಣ ಗುಡದಾರಿ ತಿಳಿಸಿದ್ದಾರೆ.

2024-25ನೇ ಸಾಲಿನಲ್ಲಿ ಪುರಸಭೆಗೆ ವಿವಿಧ ಮೂಲಗಳಿಂದ ಸಂಗ್ರಹವಾಗುವ ಸಂಪನ್ಮೂಲ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನ ನಿರೀಕ್ಷಿಸಿ ನಾಗರಿಕರಿಗೆ ಮೂಲ ಸೌಕರ್ಯ ಒದಗಿಸುವ ಹಾಗೂ ಪಟ್ಟಣದ ಸೌಂದರೀಕರಣ ಹೆಚ್ಚಿಸಲು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ, ಕುಡಿಯುವ ನೀರು ಪೂರೈಕೆ, ಬೀದಿದೀಪಗಳ ನಿರ್ವಹಣೆ, ನೈರ್ಮಲ್ಯಕರಣ ಸೇರಿದಂತೆ ವಿವಿಧ ಕಾರ್ಯಕ್ಕಾಗಿ ಈ ಬಜೆಟ್‌ನಲ್ಲಿ ಹಣ ಮೀಸಲೀಡಲಾಗಿದೆ ಎಂದು ತಿಳಿಸಿದ್ದಾರೆ.

₹4.20 ಕೋಟಿ ಆದಾಯ ಪುರಸಭೆಯ ಕರ ಸೇರಿ ವಿವಿಧ ಮೂಲಗಳಿಂದ ನಿರೀಕ್ಷಿಸಲಾಗಿದೆ. ₹ 13.44 ಕೋಟಿ ಅನುದಾನವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ (ಎಸ್‌ಎಫ್‌ಸಿ, ಮುಕ್ತ ನಿಧಿ, ಎಸ್‌ಎಫ್‌ಸಿ ವಿಶೇಷ ಅನುದಾನ ಮತ್ತು 15ನೇ ಹಣಕಾಸು ಯೋಜನೆಯಿಂದ ಅನುದಾನ ನಿರೀಕ್ಷಿಸಿದರೆ, ವಿಶೇಷ ಅನುದಾನಿತ ಖಾತೆಗಳಿಂದ ಆದಾಯ ಮತ್ತು ಅಸಾಧರಣ (ಜಿಎಸ್‌ಟಿ, ಆಧಾಯ ತೆರಿಗೆ ಇತರೆ) ಮೂಲಗಳಿಂದ ನಿರೀಕ್ಷಿಸಿ ಒಟ್ಟು ₹20.36 ಕೋಟಿ ಆದಾಯ ನಿರೀಕ್ಷಿಸಿ ಬಜೆಟ್ ತಯಾರಿಸಲಾಗಿದೆ ಎಂದು ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ರಸ್ತೆ ನಿರ್ಮಾಣ ಮತ್ತು ದುರಸ್ಥಿಗೆ ₹180 ಲಕ್ಷ, ರಸ್ತೆಬದಿ ಚರಂಡಿ ನಿರ್ಮಾಣ, ಗಟಾರಗಳ ಮೇಲೆ ಸ್ಲ್ಯಾಬ ಅಳವಡಿಸುವುದು, ಸಿ.ಡಿ. ನಿರ್ಮಾಣ, ಒಳಚರಂಡಿ ಕಾಮಗಾರಿಗೆ ₹74 ಲಕ್ಷ, ಕುಡಿಯುವ ನೀರು ಪೂರೈಕೆ ವಿತರಣೆಗೆ ₹123.60 ಲಕ್ಷ, ಘನತ್ಯಾಜ ವಸ್ತುಗಳ ವಿಲೇವಾರಿಗೆ ಸಂಬಂಧಿಸಿದ ಕಾಮಗಾರಿಗೆ ₹75 ಲಕ್ಷ, ಬೀದಿದೀಪಗಳ ಜೋಡಣೆಗಾಗಿ ₹59.60 ಲಕ್ಷ, ಸ್ಮಶಾನ ಅಭಿವೃದ್ಧಿಗೆ ₹20 ಲಕ್ಷ, ಉದ್ಯಾನವನ ಅಭಿವೃದ್ಧಿಗೆ ₹15 ಲಕ್ಷ, ಬೀದಿದೀಪಗಳ ನಿರ್ವಹಣೆಗೆ ₹24 ಲಕ್ಷ.

ಹೊರಗುತ್ತಿಗೆ ವಾಹನ ಚಾಲಕರ ವೇತನಕ್ಕೆ ₹44.40 ಲಕ್ಷ, ನೀರು ಸರಬರಾಜು ಹೊರಗುತ್ತಿಗೆ ಕಾರ್ಮಿಕರ ವೇತನ ₹28.90 ಲಕ್ಷ, ಬೀದಿದೀಪಗಳ ಹಾಗೂ ನೀರು ಸರಬರಾಜು ಮಾಡಲು ವಿದ್ಯುತ್ ಬಳಕೆ ವೆಚ್ಚ ₹325 ಲಕ್ಷ, ಸಾರ್ವಜನಿಕ ಶೌಚಾಲಯ ಕಟ್ಟಡ ನಿರ್ಮಾಣಕ್ಕೆ ₹70 ಲಕ್ಷ, ಎಸ್‌ಡಬ್ಲುಎಂ ಯೋಜನೆಯ ವಾಹನ ಖರೀದಿಗೆ ₹50 ಲಕ್ಷ, ನೀರು ಸರಬರಾಜು ನಿರ್ವಹಣೆ ಮತ್ತು ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ₹15 ಲಕ್ಷ, ಯಂತ್ರೋಪಕರಣ ಖರೀದಿಗೆ ₹31.60 ಲಕ್ಷ, ಜಾಹೀರಾತು ವೆಚ್ಚಕ್ಕೆ ₹10 ಲಕ್ಷ, ಪುರಸಭೆಯ ವಾಹನಗಳ ಇಂಧನಕ್ಕೆ ₹18 ಲಕ್ಷ, ಪುರಸಭೆ ಸಿಬ್ಬಂದಿ ವೇತನಕ್ಕೆ ₹256 ಲಕ್ಷ ಹಾಗೂ ಪರಿಶಿಷ್ಠ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಮತ್ತು ಅಂಗವಿಕಲರ ಅಭಿವೃದ್ಧಿಗೆ ₹37.17 ಲಕ್ಷ ಅನುದಾನ ವೆಚ್ಚ ಮಾಡಲು ಆಡಳಿತಾಧಿಕಾರಿಗಳು ಅನುಮೋದನೆ ನೀಡಿದ್ದಾರೆ ಎಂದು ಮುಖ್ಯಾಧಿಕಾರಿ ಐ. ಕೆ. ಗುಡದಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.