ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಸಮಿಪದ ದಂಡಳ್ಳಿ ಗ್ರಾ.ಪಂ.ಯ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಗ್ರಂಥಾಲಯ ಇಲಾಖೆಯ ಓದುವ ಬೆಳಕು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಪ್ರಯುಕ್ತ ‘ನನ್ನ ಸಂಕಲ್ಪ’ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ, ಗಣರಾಜ್ಯೋತ್ಸವ, ಸಂವಿಧಾನ ಮತ್ತು ಮಕ್ಕಳು ಹಾಗೂ ಹುತಾತ್ಮರನ್ನು ಸ್ಮರಿಸೋಣ ಸರಣಿ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಜ. 1ರಿಂದ 31 ವರೆಗೂ ಈ ಅಭಿಯಾನ ಗ್ರಂಥಾಲಯದಲ್ಲಿ ನಡೆಯಿತು.
2024 ರ ವರ್ಷದ ಪ್ರಾರಂಭದೊಂದಿಗೆ ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ನಿರ್ದರಿಸಿಕೊಂಡು ಸಂಕಲ್ಪ ಮಾಡುವುದರೊಂದಿಗೆ ಸಾಧನೆಗೆ ಅಭಿಯಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಲಾಯಿತು.ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ವಿದ್ಯಾರ್ಥಿನಿಯರಿಗೆ ಹೆಣ್ಣು ಮಕ್ಕಳ ಮಹತ್ವದ ಕುರಿತು 2008ರಿಂದ ಪ್ರತಿವರ್ಷ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸುತ್ತಿರುವುದಾಗಿ ಮತ್ತು ಹೆಣ್ಣು ಮಕ್ಕಳ ಹಕ್ಕು , ಹೆಣ್ಣು ಮಕ್ಕಳ ರಕ್ಷಣೆಗಾಗಿರುವ ಕಾಯಿದೆ ನಿಯಮಗಳು ಹಾಗೂ ಬಾಲ್ಯ ವಿವಾಹ ನಿರ್ಮೂಲನೆ, ಬಾಲ ಕಾರ್ಮಿಕರ ಪದ್ಧತಿ, ಹೆಣ್ಣು ಮತ್ತು ಗಂಡು ಮಕ್ಕಳ ತಾರತಮ್ಯ ಮುಂತಾದ ವಿಷಯಗಳ ಕುರಿತು ಅಭಿಯಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
ಅಭಿಯಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಬರೆಯುವ ಸ್ಪರ್ಧೆ, ಆಶು ಭಾಷಣ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು. ಅಭಿಯಾನ ಕಾರ್ಯಕ್ರಮ ದುಂಡಳ್ಳಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯದ ಮೇಲ್ವೀಚಾರಕಿ ಎಸ್.ಪಿ.ದಿವ್ಯ ನೇತೃತ್ವದಲ್ಲಿ ನಡೆಯಿತು.