ಕನ್ನಡಪ್ರಭ ವಾರ್ತೆ ಅರಸೀಕೆರೆನಗರದ ಸಂಧ್ಯಾ ಕೃಷ್ಣಮೂರ್ತಿ ಅವರು ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಪ್ರಥಮ ಸ್ಥಾನ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಅವರು ಟ್ರೆಡಿಷನಲ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದು ಇದೀಗ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಮೈಸೂರಿನಲ್ಲಿ ಶ್ರೀ ಗಣಪತಿ ಸಿ.ಎಸ್ ಯೋಗ ಟ್ರಸ್ಟ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ನ್ಯಾಷನಲ್ ಯೋಗಾಸನ ಚಾಂಪಿಯನ್‌ಶಿಪ್ 2026ನಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಸಂಧ್ಯಾ ಕೃಷ್ಣಮೂರ್ತಿ ತಮ್ಮ ಅದ್ಭುತ ಯೋಗಾಸನ ಪ್ರದರ್ಶನದ ಮೂಲಕ ನ್ಯಾಯಾಧೀಶರ ಮೆಚ್ಚುಗೆಗೆ ಪಾತ್ರರಾಗಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಈ ಸಾಧನೆಯೊಂದಿಗೆ ಅವರು ಏಪ್ರಿಲ್ ತಿಂಗಳಲ್ಲಿ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಇಂಟರ್‌ನ್ಯಾಷನಲ್ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.ಯೋಗಾಭ್ಯಾಸ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ದೈನಂದಿನ ಜೀವನದಲ್ಲಿ ಯೋಗ, ಪ್ರಾಣಾಯಾಮ ಹಾಗೂ ನಡೆದು ವ್ಯಾಯಾಮ ಮಾಡುವುದರಿಂದ ಅನೇಕ ರೋಗಗಳನ್ನು ತಡೆಯಬಹುದು ಎಂದು ಸಂಧ್ಯಾ ಕೃಷ್ಣಮೂರ್ತಿ ತಿಳಿಸಿದ್ದಾರೆ. ನಿಯಮಿತ ಅಭ್ಯಾಸದ ಮೂಲಕ ಸದೃಢ ದೇಹ ಹಾಗೂ ಮನಸ್ಸು ಕಾಪಾಡಿಕೊಳ್ಳಲು ಯೋಗ ಬಹಳ ಸಹಾಯಕವಾಗುತ್ತದೆ ಎಂದು ಹೇಳಿದರು.