ಕನ್ನಡಪ್ರಭ ವಾರ್ತೆ ಕೊರಟಗೆರೆ

ರಾಜ್ಯದಲ್ಲಿ ಯುವಕರು ಡ್ರಗ್ಸ್ ಮತ್ತು ಇತರೆ ವ್ಯಸನಗಳಿಂದ ದೂರ ಉಳಿಯಬೇಕಾದರೆ ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವ ಮೂಲಕ ಡ್ರಗ್ಸ್ ಮುಕ್ತ ರಾಜ್ಯವನ್ನಾಗಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಯುವಕರಿಗೆ ತಿಳಿಸಿದರು. ಭಾನುವಾರ ಪಟ್ಟಣದ ೪.೭೩ ಕೋಟಿ ರು. ಮೌಲ್ಯದ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿ ಸೇರಿ ವಿವಿಧ ಕಾಮಗಾರಿಗಳ ಒಟ್ಟು ೧೪ ಕೋಟಿ ರುಗಳ ಕಾಮಗಾರಿಗಳ ಚಾಲನೆ ನೀಡಿ ಮಾತನಾಡಿದರು. ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ರಾಜ್ಯ ಮಟ್ಟದ ಕ್ರೀಡಾಕೂಟಗಳು ನಡೆದಿದ್ದು ಮೇ ತಿಂಗಳಲ್ಲಿ ರಾಷ್ಟ್ರೀಯ ಮಹಿಳಾ ಕ್ರೀಡಾಕೂಟವನ್ನು ಆಯೋಜಿಸಲಾಗುವುದು ಮತ್ತು ಏಪ್ರಿಲ್ ತಿಂಗಳಲ್ಲಿ ರಾಷ್ಟ್ರೀಯ ಕಿರಿಯರ ಕ್ರೀಡಾಕೂಟವನ್ನು ಸಹ ನಡೆಸುವುದಾಗಿ ತಿಳಿಸಿದರು. ಜಿಲ್ಲೆ ಹಾಗೂ ಕೊರಟಗೆರೆ ವಿಧಾನ ಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಸಾಕಷ್ಟು ಅನುದಾನವನ್ನು ತಂದಿದ್ದೇನೆ. ಈಗಾಗಲೇ ಪಟ್ಟಣದಲ್ಲಿ ೪.೭೩ ಕೋಟಿ ರು. ಮೌಲ್ಯದ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣವನ್ನು ಸುಸರ್ಜಿತವಾಗಿ ನಿರ್ಮಿಸಲಾಗಿದ್ದು ಇದರೊಂದಿಗೆ ಕ್ರೀಡಾಂಗಣದ ಮುಂಭಾಗದಲ್ಲಿರುವ ಮೈದಾನವನ್ನು ೩ ಕೋಟಿ ರು. ಮೌಲ್ಯದಲ್ಲಿ ಅಭಿವೃದ್ಧಿ ಪಡಿಸಲು ಚಾಲನೆ ನೀಡಲಾಗಿದೆ ಎಂದರು. ಯುವಜನ ಮತ್ತು ಕ್ರೀಡಾ ಆಯುಕ್ತರಾದ ಚೇತನ್ ಮಾತನಾಡಿ ತುಮಕೂರು, ಜಿಲ್ಲೆಯಲ್ಲಿ ತಾಲೂಕು ಮಟ್ಟದ ಸುಸಜ್ಜಿತ ಕ್ರೀಡಾಂಗಣ ಆಗಿದ್ದು ಕ್ರೀಡಾಪಟುಗಳ ವಿವಿಧ ಕೌಶಲ್ಯಗಳ ಅಭಿವೃದ್ಧಿಗೆ ಇದು ಪೂರಕವಾಗಲಿದೆ. ಶೀಘ್ರದಲ್ಲಿಯೇ ಹೊರಾಂಗಣ ಕ್ರೀಡಾಂಗಣವನ್ನು ಸಹ ಅಭಿವೃದ್ಧಿ ಪಡಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಅಶ್ವಿಜ, ಎಸ್.ಪಿ ಅಶೋಕ್, ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್ ಮಂಜುನಾಥ್, ಇಒ ಅಪೂರ್ವ, ಪ.ಪಂ ಸಿಒ ಉಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟೇಶ್‌ಮೂರ್ತಿ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಮುಖಂಡರಾದ ವಾಲೆಚಂದ್ರಯ್ಯ, ಕವಿತಮ್ಮ, ಮಹಾಲಿಂಗಪ್ಪ, ವಿನಯ್, ಈಶಣ್ಣ, ಹನುಮಾನ್, ಅರವಿಂದ್, ಸೇರಿದಂತೆ ಇತರರು ಇದ್ದರು. ಕನ್ನಡಪ್ರಭ ವರದಿಗೆ ಸ್ಪಂದಿಸಿದ ಗೃಹ ಸಚಿವರು ಇತ್ತೀಚಿಗೆ ತಾಲೂಕಿನ ಅಕ್ಕಿರಾಂಪುರ ಗ್ರಾಮದಲ್ಲಿ ಮೂಢ ನಂಬಿಕೆಯಿಂದಾಗಿ ಸರ್ಕಾರಿ ಕಟ್ಟಡ ಪಾಳು ಬಿದ್ದಿರುವ ವಿದ್ಯಾರ್ಥಿನಿಯದ ಕುರಿತು ಕನ್ನಡಪ್ರಭ ಮಾರ್ಚ್‌ 12ರಂದು "ಮೂಢನಂಬಿಕೆಯಿಂದಾಗಿ ಸರ್ಕಾರಿ ಕಟ್ಟಡ ಪಾಳು " ಎಂಬ ಶೀರ್ಷಿಕೆಯಡಿ ರಾಜ್ಯಮಟ್ಟದಲ್ಲಿ ವರದಿ ಪ್ರಸಾರವಾಗಿದ್ದನ್ನು ಪ್ರಸ್ತಾಪಿಸಿದ ಗೃಹ ಸಚಿವರು ಆ ಬಾಲಕಿಯರ ವಿದ್ಯಾರ್ಥಿನಿಯಲವನ್ನು ಅಲ್ಲಿಯೇ ಇರುವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಅದಲು ಬದಲು ಮಾಡಿ ಎಂದು ಡಿಸಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದರು.