ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲಇಂದು ಜಗತ್ತಿನಲ್ಲಿ ಭಾರತೀಯ ಮಹಿಳೆಗೆ ವಿಶೇಷ ಗೌರವ ಇದೆ. ನಾವು ಮಹಿಳೆಯನ್ನು ಮಾತೃ ಸ್ವರೂಪಿಯಾಗಿ ಕಾಣುತ್ತೇವೆ. ಇದೇ ಕಾರಣಕ್ಕೆ ನಮ್ಮ ದೇಶದ ಮಹಿಳೆಯಿಗೆ ಜಗತ್ತಿನ ಎಲ್ಲ ದೇಶದವರು ಗೌರವಿಸುತ್ತಾರೆ ಎಂದು ಕರ್ನಾಟಕದ ಮಾಜಿ ಸಿಎಂ ದಿ. ಎಸ್.ಆರ್.ಕಂಠಿ ಅವರು ಪುತ್ರ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮಹೇಂದ್ರ ಕಂಠಿ ಹೇಳಿದರು.
ಇಳಕಲ್ಲ ನಗರದ ಎಸ್.ಆರ್. ಕಂಠಿ ವೇದಿಕೆ ವತಿಯಿಂದ ಇಳಕಲ್ಲಿನ ವಿಜಯ ಮಹಾಂತೇಶ್ವರ ಶ್ರೀಮಠದ ಬಸವ ದಾಸೋಹ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ, ಮಹಿಳಾ ಕಾಯಕ ಜೀವಿಗಳಿಗೆ, ಪ್ರತಿಭಾ ಮತ್ತು ಸೇವಾ ಪ್ರತಿಭೆಗಳ ಗೌರವ ಸತ್ಕಾರ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಇಂದು ಮುಂದುವರೆದ ರಾಷ್ಟ್ರಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮೂಂಚುಣಿಯಲ್ಲಿ ಸೇವೆ ಸಲ್ಲಿಸುತಿದ್ದಾರೆ. ಭಾರತದಲ್ಲಿ ಕೂಡ ಮಹಿಳೆಯರಿಗೆ ಇನ್ನೂ ಹೆಚ್ಚಿನ ಅವಕಾಶಗಳು ದೊರೆಯಬೇಕು ಎಂದು ಅಭಿಪ್ರಾಯ ಪಟ್ಟರು.ವಿಶೇಷ ಉಪನ್ಯಾಸ ನೀಡಿದ ಎಸ್.ಆರ್. ಕಂಠಿ ಶಿಕ್ಷಣ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕಿ ಅನ್ನಪೂರ್ಣ ಮಠ, ಸಮಾಜದಲ್ಲಿ ಲಿಂಗ ತಾರತಮ್ಯ ತೊಲಗಬೇಕು. ಇಂದಿಗೂ ಕೃಷಿ, ಕೈಗಾರಿಕೆ ಮತ್ತು ಇತರ ಸೇವಾ ವಲಯಗಳಲ್ಲಿ ಮಹಿಳಾ ಕೂಲಿ ಕೆಲಸಗಾರರಿಗೆ ವೇತನ ನೀಡುವಲ್ಲಿ ತಾರತಮ್ಯ ಇದೆ. ಇದು ಬದಲಾಗಬೇಕು. ದುಡಿಯುವ ಹೆಣ್ಣು ಮತ್ತು ಗಂಡಿಗೂ ಒಂದೇ ರೀತಿ ವೇತನ ನೀಡಬೇಕು. ಹೆಣ್ಣು ಭ್ರೂಣ ಹತ್ಯೆಯಿಂದ ಲಿಂಗಾನುಪಾತ ಅಸಮತೋಲನವಾಗುತ್ತಿರುವುದು ಗಂಭೀರ ಸಂಗತಿಯಾಗಿದೆ. ಇದರಿಂದ ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ವಿಶ್ವನಾಥ ವಂಶಾಕೃತಮಠ ಮಾತನಾಡಿ, ಒಬ್ಬ ಮಹಿಳೆ ಶಿಕ್ಷಣ ಕಲಿತರೆ ಒಂದು ಶಾಲೆ ತೆರೆದಂತೆ. ಮಹಿಳೆಯರು ಅವಕಾಶಗಳನ್ನು ಬಳಸಿಕೊಂಡು ಎಲ್ಲ ಕ್ಷೇತ್ರಗಳಲ್ಲೂ ಬೆಳೆಯಬೇಕು. ಒಂದು ಕಾಲದಲ್ಲಿ ಮಹಿಳಾ ಸಂಘಟನೆಗಳ ಕೊರತೆ ಇತ್ತು. ಆದರೆ, ಇಂದು ಮಹಿಳಾ ಸಂಘಟನೆಗಳು ವಿಫುಲವಾಗಿ ಬೆಳೆದು ಕ್ರಿಯಾಶೀಲವಾಗಿ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಡಾ.ಮಹೇಂದ್ರ ಕಂಠಿ ಹಾಗೂ ಅವರ ಪತ್ನಿ ಗೀತಾ ಮಹೇಂದ್ರ ಕಂಠಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ವಿಶ್ವನಾಥ ವಂಶಾಕೃತಮಠ, ಸ್ನೇಹರಂಗದ ಅಧ್ಯಕ್ಷ ಬಸವರಾಜ ಮಠದ, ಉಪನ್ಯಾಸಕಿ ಅನ್ನಪೂರ್ಣ ಮಠ, ಕಾಯಕ ಮಹಿಳಾ ಜೀವಿಗಳಾದ ಶಾಂತಮ್ಮ ಕುಂಬಾರ, ಪದ್ಮಾ ಗಂಜಿ, ಶಾಂತಮ್ಮ ಜಕೇರಿ, ಯಲ್ಲವ್ವ ಹಡಪದ, ಮಂಜುಳಾ ಹೂಗಾರ, ಹಿರಿಯ ಪತ್ರಕರ್ತ ಸಿ.ಸಿ. ಚಂದ್ರಾಪಟ್ಟಣ, ಇಳಕಲ್ಲ ಬಣಜಿಗ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟರ, ಪ್ರತಿಭಾ ಮತ್ತು ಸೇವಾ ಅಡಿಯಲ್ಲಿ ಬೈಕ ಸಾಹಸಿ ವೀರಣ್ಣ ಕುಂದರಗಿಮಠ, ಶಿಕ್ಷಕ ವೀರೇಶ ಮುದಗಲ್ಲ, ಚಿತ್ರಕಲಾವಿದ ಚನ್ನಬಸವ ಹವಾಲ್ದಾರ, ಪ್ರತಿಭಾವಂತ ವಿದ್ಯಾರ್ಥಿನಿ ಐಶ್ವರ್ಯ ಕಂಠಿ, ಪ್ರತಿಭಾವಂತ ಕ್ರೀಡಾಪಟು ಅಭಿಷೇಕ ಗುಗ್ಗರಿ, ಕಂಠಿ ವೇದಿಕೆಯ ನೂತನ ಅಧ್ಯಕ್ಷ ವೀರಣ್ಣ ನಂದಾಪೂರ, ಪ್ರಧಾನ ಕಾರ್ಯದರ್ಶಿ ಬಸವರಾಜ ಅಂಗಡಿ, ಖಜಾಂಚಿ ಅಮರೇಶ ಕಕ್ಕಸಗೇರಿ ಇವರನ್ನು ಸತ್ಕರಿಸಲಾಯಿತು.
ಅಧ್ಯಕ್ಷತೆ ಶಕುಂತಲಾ ನಂದಾಪೂರ ವಹಿಸಿದ್ದರು. ಕಂಠಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷೆ ವಿಜಯಲಲಕ್ಷ್ಮಿ ಲೆಕ್ಕಿಹಾಳ, ವೇದಿಕೆಯ ಸದಸ್ಯರಾದ ಶಿವಬಸಪ್ಪ ತೊಂತನಾಳ, ಅಮರೇಶ ಐಹೊಳ್ಳಿ, ಅಮರೇಶ ಕೊಡಕೇರಿ, ಅಡಿವೆಪ್ಪ ಅಂಗಡಿ, ಕಳಕಪ್ಪ ಅಂಗಡಿ, ಮಹಾಂತೇಶ ಹೂಲಗೇರಿ ಉಪಸ್ಥಿತರಿದ್ದರು. ನೀಲಮ್ಮ ಬಾದಿಮನಾಳ ಪ್ರಾರ್ಥಿಸಿದರು. ಶಿಲ್ಪಾ ಅಂಗಡಿ ಸ್ವಾಗತಿಸಿದರು. ವಿಜಯಲಲಕ್ಷ್ಮೀ ಲೆಕ್ಕಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಲಕ್ಷ್ಮೀ ಕಂಠಿ ನಿರೂಪಿಸಿದರು. ಶೈಲಾ ಪಟ್ಟಣಶೆಟ್ಟಿ, ಅನುರಾಧಾ ಪಟ್ಟಣಶೆಟ್ಟಿ, ಮೇಘಾ ಕಕ್ಕಸಗೇರಿ, ಅಕ್ಕಮ್ಮ ಕಕ್ಕಸಗೇರಿ ಪರಿಚಯಿಸಿದರು. ನೇತ್ರಾವತಿ ಅಂಗಡಿ ವಂದಿಸಿದರು.