ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸುವ ಪೋಷಕರ ಅಭಿಲಾಷೆಗೆ ಪೂರಕವಾಗಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಈ ಸುಜ್ಞಾನ ನಿಧಿ ಯೋಜನೆ ಕಾರ್ಯಕ್ರಮ ನಡೆಯುತಿದೆ. ಇದರ ಉಪಯೋಗವನ್ನು ಪೋಷಕರು ಹಾಗೂ ಮಕ್ಕಳು ಪಡೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಾಲೂರು

ಸೌಲಭ್ಯ ವಂಚಿತ ಗ್ರಾಮಾಂತರ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದ್ದು ,ಆ ಯೋಜನೆಯಡಿಯ ಸುಜ್ಞಾನ ನಿಧಿ ಶಿಷ್ಯ ವೇತನ ವು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪರಿಣಾಮಕಾರಿಯಾಗಿದೆ ಎಂದು ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ್‌ ಹೇಳಿದರು.

ಅವರು ಪಟ್ಟಣದ ಪದ್ಮಾವತಿ ಸಂಕೀರ್ಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ವತಿಯಿಂದ ಅಯೋಜಿಸಿದ್ದ ಸುಜ್ಞಾನ ನಿಧಿ ಶಿಷ್ಯ ವೇತನ ಕಾರ್ಯಕ್ರಮ ಮತ್ತು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಈ ಯೋಜನೆ ಅತ್ಯಂತ ಸಹಕಾರಿಯಾಗಿದೆ ಎಂದರು.

ಸುಜ್ಞಾನ ನಿಧಿ ಯೋಜನೆ

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಲಾ ಅವರು ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನದ ಮಂಜೂರು ಪತ್ರಗಳನ್ನು ವಿತರಿಸಿ ಮಾತನಾಡಿ, ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸುವ ಪೋಷಕರ ಅಭಿಲಾಷೆಗೆ ಪೂರಕವಾಗಿ ಈ ಸುಜ್ಞಾನ ನಿಧಿ ಯೋಜನೆ ಕಾರ್ಯಕ್ರಮ ನಡೆಯುತಿದೆ. ಇದರ ಉಪಯೋಗವನ್ನು ಪೋಷಕರು ಹಾಗೂ ಮಕ್ಕಳು ಪಡೆದುಕೊಳ್ಳಬೇಕೆಂದರು.

ಇದೇ ಸಂದರ್ಭದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್‌ ಅವರು ದುಶ್ಚಟದಿಂದ ಮಕ್ಕಳು ಜಾಗೃತರಾಗುವ ಬಗ್ಗೆ ಪೋಷಕರು ವಹಿಸಬೇಕಾದ ಎಚ್ಚರಿಕೆ ಬಗ್ಗೆ ಮಾಹಿತಿ ನೀಡಿದರು.

55 ಮಕ್ಕಳಿಗೆ ಶಿಷ್ಯವೇತನ

ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಸತೀಶ್‌ ಮಾತನಾಡಿ ಧಗ್ರಾ ಯೋಜನೆಯ ಪಾಲುದಾರ ಕುಟುಂಬಗಳ ಮಕ್ಕಳಿಗೆ ತಾಂತ್ರಿಕ ಹಾಗೂ ವೃತಿಪರ ಶಿಕ್ಷಣಕ್ಕೆ ಅನುಕೂಲವಾಗುವಂತೆ ಯೋಜನೆಯನ್ನು ರೂಪಿಸಿದ್ದು, ನಮ್ಮ ತಾಲೂಕಿನಲ್ಲಿ ಸುಮಾರು ೫೫ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಶಿಷ್ಯವೇತನವನ್ನು ನೀಡಲು ಮಂಜೂರಾತಿ ಆಗಿದೆ ಎಂದರು.

ಪುರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಕೃಷ್ಣಪ್ಪ, ಸದಸ್ಯರಾದ ವೇಮನ,ಪರಮೇಶ್‌, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ರಾಮಸ್ವಾಮಿ ರೆಡ್ಡಿ , ಉಮೇಶ್‌, ಮರಿರಾಜ್‌, ರವಿಕುಮಾರ್‌ ಮಾತನಾಡಿದರು. ಯೋಜನೆಯ ಕೃಷಿ ಅಧಿಕಾರಿ ಮಧುರಾಜ್‌,ಮೇಲ್ವಿಚಾರಕರಾದ ರಮೇಶ್‌, ನೇತ್ರ, ಕವಿತಾ, ಪುರುಷೋತ್ತಮ್‌, ಮಂಜುನಾಥ್‌, ಅದಿ ನಾರಾಯಣ್‌, ರಂಜಿತಾ, ಲತಾ ಇನ್ನಿತರರು ಇದ್ದರು.