ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಸರ್ಕಾರಿ ಆಸ್ಪತ್ರೆಯ ಏಳಿಗೆಗೆ ಖಾಸಗಿ ಉದ್ಯಮದವರು, ಸಂಘಸಂಸ್ಥೆಗಳು ಸಹಕಾರ ನೀಡುತ್ತಿರುವುದು ಪ್ರಶಂಸನೀಯ ಎಂದು ಶಾಸಕ ಎ. ಮಂಜು ಹೇಳಿದರು.ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಾಸನದ ಶಾಹಿ ಎಕ್ಸ್ಪೋರ್ಟ್ ಪ್ರೈ.ಲಿ. ಸಂಸ್ಥೆ ಸಾಮಾಜಿಕ ಕಳಕಳಿ ಯೋಜನೆಯಡಿ (ಸಿ.ಆರ್ ಫಂಡ್) ಕೊಡುಗೆಯಾಗಿ ನೀಡಿರುವ 20.60 ಲಕ್ಷ ರು. ವೆಚ್ಚದ ಯುಎಸ್ ಜಿ ಪೋರ್ಟಬಲ್ ಸ್ಕ್ಯಾನಿಂಗ್ ಯಂತ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಂತ್ರವನ್ನು ಕೊಡುಗೆಯಾಗಿ ನೀಡಿದ ಶಾಹಿ ಎಂಟರ್ಪ್ರೈಸಸ್ ಸಂಸ್ಥೆ ಹಾಗೂ ಇದನ್ನು ಈ ಆಸ್ಪತ್ರೆಗೆ ಕೊಡುಗೆಯಾಗಿ ನೀಡುವಂತೆ ಸಂಸ್ಥೆಯನ್ನು ಸಂಪರ್ಕಿಸಿ ಮನವಿ ಮಾಡಿದ್ದ ರೋಟರಿ ಸಂಸ್ಥೆಯ ಕಾರ್ಯ ಪ್ರಶಂಸನೀಯ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡಲು ಸಂಸ್ಥೆ ಮುಂದಾಗುವಂತೆ ಮನವಿ ಮಾಡಿದರು.
ಆಸ್ಪತ್ರೆ ಆವರಣದಲ್ಲಿ ಇಂಟರ್ ಲಾಕಿಂಗ್ ವ್ಯವಸ್ಥೆ, ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಆಸ್ಪತ್ರೆ ಮೊದಲನೆ ಮಹಡಿಯ ಮೇಲ್ಛಾವಣಿ ಕಾಮಗಾರಿಗೆ 7 ಲಕ್ಷ ರು. ಹಣವನ್ನು ತಾಲೂಕು ಪಂಚಾಯತ್ ಅನುದಾನದಲ್ಲಿ ನೀಡಿರುವುದಾಗಿ ಹೇಳಿದರು.ಶಾಹಿ ಸಂಸ್ಥೆಯ ಎಜಿಎಂ ವಿದ್ಯಾರಾಜೇ ಅರಸ್ ಮಾತನಾಡಿ, ನಮ್ಮ ಸಂಸ್ಥೆ ಸಾಮಾಜಿಕ ಕಳಕಳಿ ಯೋಜನೆಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ತಾಲೂಕಿನ ಸಂತೆಮರೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷ ವಿಜ್ಞಾನ ಪ್ರಯೋಗಾಲಯ ಮತ್ತು ಸ್ಮಾರ್ಟ್ ಕ್ಲಾಸ್ ಸಲಭ್ಯ ಕಲ್ಪಿಸಲು 13 ಲಕ್ಷ ರು. ಧನಸಹಾಯ ನೀಡಿರುವುದಾಗಿ ಹೇಳಿದರು.
ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ದೀಪಕ್, ಶಾಹಿ ಸಂಸ್ಥೆಯ ಮುಖ್ಯಸ್ಥರಾದ ಧನಂಜಯ್, ಭಾಸ್ಕರ್, ಬಸವರಾಜ್, ಸಂದೀಪ್, ರೋಟರಿ ವಲಯ ಸೇನಾನಿ ಬಿ.ಸಿ.ಶಶಿಧರ್, ಕಾರ್ಯದರ್ಶಿ ಪ್ರದೀಪ್, ಖಜಾಂಚಿ ಎಂ. ಮಹೇಶ್, ಮಾಜಿ ಅಧ್ಯಕ್ಷ ರಾಜೀವ್, ಡಾ. ಸ್ವಾಮಿಗೌಡ, ಚನ್ನಕೇಶವೇಗೌಡ, ಪರಮೇಶ್, ರಾಜೇಶ್ ಉಪಸ್ಥಿತರಿದ್ದರು.