ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆ
ದೇವಾಲಯಕ್ಕೆ ಬರುವ ಭಕ್ತಾದಿಗಳು ಹಾಗೂ ಯಾತ್ರಾರ್ಥಿಗಳು ತಂಗಲು, ವಿಶ್ರಮಿಸಲು ನೆರವಾಗುವಂತೆ ಮುಗಬಾಳ ಗ್ರಾಮದಲ್ಲಿ ಯಾತ್ರಾ ನಿವಾಸ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಭರವಸೆ ನೀಡಿದರು.ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಮುಗಬಾಳ ಶ್ರೀ ವೀರಭದ್ರಸ್ವಾಮಿ ಮಂಟಪ ಟ್ರಸ್ಟ್ ವತಿಯಿಂದ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಯಾತ್ರಿ ನಿವಾಸ ಹಾಗೂ ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ 75ರಲ್ಲಿರುವ ಶ್ರೀ ಕ್ಷೇತ್ರ ಮುಗಬಾಳ ವೀರಭದ್ರಸ್ವಾಮಿ ದೇವಾಲಯವನ್ನು ಅಭಿವೃದ್ಧಿಪಡಿಸಿದ್ದು, ಈಗ ಕೆರೆ ದಂಡೆಯಲ್ಲಿರುವ ಸೋಮೇಶ್ವರ ದೇವಾಲಯದ ಬಳಿ ಯಾತ್ರಿ ನಿವಾಸವನ್ನು ನಿರ್ಮಿಸಲಾಗುತ್ತಿದ್ದು, ತಿರುಪತಿ ಹಾಗೂ ಶಬರಿಮಲೆಗೆ ತಿರುಳುವ ಯಾತ್ರಾರ್ಥಿಗಳು ಇಲ್ಲಿ ವಿಶ್ರಾಂತಿ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದರು.ಪ್ರವಾಸಿ ತಾಣವಾಗಿ ಅಭಿವೃದ್ಧಿ: ಶ್ರೀ ಕ್ಷೇತ್ರ ಮುಗಬಾಳ ಗ್ರಾಮವು ಶ್ರೀ ವೀರಭದ್ರಸ್ವಾಮಿ ದೇವಾಲಯದಿಂದ ಆಧ್ಯಾತ್ಮಿಕ ಕೇಂದ್ರವಾಗಿ ರೂಪುಗೊಂಡಿದ್ದು, ಜೊತೆಗೆ ಸೋಮೇಶ್ವರ ದೇವಾಲಯವೂ ಇದೆ. ದೇವಾಲಯದ ಪಕ್ಕದಲ್ಲಿನ ಕೆರೆಯೂ ಸುಂದರವಾಗಿದ್ದು ಬೋಟಿಂಗ್ ವ್ಯವಸ್ಥೆ ಮಾಡಲು ಕೆಲವರು ಮುಂದೆ ಬಂದಿದ್ದಾರೆ. ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸುವುದರ ಮೂಲಕ ಶ್ರೀ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ವೀರಭದ್ರ ಸ್ವಾಮಿ ದೇವಾಲಯ ಟ್ರಸ್ಟ್ ಗೌರವಾಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್, ಅಧ್ಯಕ್ಷರಾದ ಮಂಜುನಾಥ್ ಶ್ರಾಫ್, ಕಾರ್ಯದರ್ಶಿ ವೀರಸ್ವಾಮಿಗೌಡ, ಖಜಾಂಚಿ ಜ್ಞಾನಮೂರ್ತಿ, ಬಿಡಿಸಿಸಿ ನಿರ್ದೇಶಕ ಕೋಡಿಹಳ್ಳಿ ಸುರೇಶ್, ಮುಖಂಡರಾದ ವಿಶ್ವನಾಥ್, ಗುರುಬಸಪ್ಪ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.