ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಶ್ರೀಗೀತಾ ಪ್ರೌಢಶಾಲೆ ಅಭಿವೃದ್ಧಿಗೆ ೧೦ ಲಕ್ಷ ರು. ಬಿಡುಗಡೆಗೊಳಿಸುವುದಾಗಿ ಶಾಸಕ ಪಿ.ರವಿಕುಮಾರ್ ಹೇಳಿದರು.

ನಗರದ ಶಂಕರನಗರದಲ್ಲಿರುವ ಶ್ರೀಗೀತಾ ಪ್ರೌಢಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ, ವಿದ್ಯಾರ್ಥಿಗಳಿಗೆ ಉಚಿತ ಟ್ರ್ಯಾಕ್ ಸೂಟ್, ಸಮವಸ್ತ್ರ, ನೋಟ್‌ಬುಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಎನ್ನುವುದು ದುಬಾರಿಯಾಗಿರುವ ದಿನಗಳಲ್ಲಿ ಉಚಿತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಚಾರ. ಅದಕ್ಕಾಗಿ ಶಾಸಕರ ಅನುದಾನದಲ್ಲಿ ೧೦ ಲಕ್ಷ ರು. ಹಣ ನೀಡುತ್ತಿದ್ದೇನೆ ಎಂದರು.

ಶಾಸಕರ ಅನುದಾನದಿಂದ ಬಿಡುಗಡೆಯಾಗುವ ಹಣದಲ್ಲಿ ನೀವು ಶಾಲೆಗೆ ಬಸ್ ವ್ಯವಸ್ಥೆ ಮಾಡುವಿರೋ, ಶಾಲೆಯ ಅಭಿವೃದ್ಧಿಗೆ ಬಳಸಿಕೊಳ್ಳುವಿರೋ ಗೊತ್ತಿಲ್ಲ. ಒಟ್ಟಿನಲ್ಲಿ ಓದಲು ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಣವನ್ನು ಬಳಸಿಕೊಳ್ಳಬೇಕು. ಈ ಶಾಲೆಗೆ ಬಸ್ ವ್ಯವಸ್ಥೆ ಮಾಡುವ ಅಗತ್ಯವಿದೆ. ಈ ಶಾಲೆಗೆ ಓದಲು ಬರುವ ಮಕ್ಕಳು ಖಾಸಗಿ ಶಾಲೆಯ ಮಕ್ಕಳಂತೆ ಬಸ್‌ನಲ್ಲಿ ಬಂದಿಳಿಯುವಂತಾಗಬೇಕು. ಗೀತಾ ಪ್ರೌಢಶಾಲೆಯೂ ಖಾಸಗಿ ಶಾಲೆಗಳ ಮಟ್ಟಕ್ಕೆ ಬೆಳೆದು ನಿಲ್ಲಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಈ ಶಾಲೆಗೆ ಬರುವ ವಿದ್ಯಾರ್ಥಿಗಳು ಬಡವರು, ಕೂಲಿ ಕಾರ್ಮಿಕ ಮಕ್ಕಳಾಗಿದ್ದಾರೆ. ಆದರೆ, ಅವರಲ್ಲೂ ಉತ್ತಮ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪುಸ್ತಕ, ಸಮವಸ್ತ್ರಗಳನ್ನು ನೀಡಲಾಗುತ್ತಿದೆ. ಅವರು ಚೆನ್ನಾಗಿ ಓದಿ ವಿದ್ಯಾವಂತರಾಗುವಂತೆ ಶಿಕ್ಷಕರು ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವಂತೆ ತಿಳಿಸಿದರು.


ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ಕೆಲ ದಶಕಗಳ ಹಿಂದೆ ಶ್ರೀಗೀತಾ ಪ್ರೌಢಶಾಲೆಗೆ ದಾಖಲಾಗುವುದಕ್ಕೆ ಮುಗಿ ಬೀಳುತ್ತಿದ್ದರು. ಬಹು ಬೇಡಿಕೆಯ ಪ್ರತಿಷ್ಠಿತ ಪ್ರೌಢಶಾಲೆಯಾಗಿತ್ತು. ಖಾಸಗಿ ಶಾಲೆಗಳು ಬೆಳವಣಿಗೆ ಸಾಧಿಸಿದ ಬಳಿಕ ಈಗ ಶ್ರೀಗೀತಾ ಪ್ರೌಢಶಾಲೆಗೆ ದಾಖಲಾತಿ ಕಡಿಮೆಯಾಗಿದ್ದರೂ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಸಿಗುತ್ತಿರುವುದು ಹೆಮ್ಮೆಯ ಸಂಗತಿ. ಈ ಶಾಲೆಯು ಹಿಂದಿನ ಗತವೈಭವಕ್ಕೆ ಮರಳಲಿ ಎಂದರು.

ಮುಡಾ ಮಾಜಿ ಸದಸ್ಯ ಎಂ.ಕೃಷ್ಣ ಮಾತನಾಡಿ, ಗೀತಾ ಪ್ರೌಢಶಾಲೆಗೆ ಇತಿಹಾಸವಿದೆ. ಪ್ರತಿಷ್ಠಿತರ ಮಕ್ಕಳು ಓದುತ್ತಿದ್ದ ಶಾಲೆ ಇದಾಗಿತ್ತು. ಶಿಫಾರಸಿನ ಮೇಲೆ ಮಕ್ಕಳನ್ನು ಇಲ್ಲಿಗೆ ದಾಖಲಿಸುತ್ತಿದ್ದ ದಿನಗಳನ್ನೂ ನಾವು ನೋಡಿದ್ದೇವೆ. ಪ್ರಸ್ತುತ ಆ ಹಳೆಯ ದಿನಗಳು ಮರುಕಳಿಸಬೇಕಿದೆ. ಈ ಶಾಲೆಯಲ್ಲಿ ಶಿಕ್ಷಣ ಕಲಿತ ಮಕ್ಕಳು ಸರ್ಕಾರದ ಉನ್ನತ ಹುದ್ದೆಯನ್ನು ಅಲಂಕರಿಸಲಿ ಎಂಬ ಅಭಿಲಾಷೆ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ಶ್ರೀಗೀತಾ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಬಿ.ಶ್ರೀಕಂಠಯ್ಯ, ಕಾರ್ಯದರ್ಶಿ ಕೆ.ಎಸ್.ಬಸವರಾಜು, ಎಡಿಬಿಐ ಬ್ಯಾಂಕ್ ವ್ಯವಸ್ಥಾಪಕ ಅಜಿತ್‌ಕುಮಾರ್, ಉಪಾಧ್ಯಕ್ಷ ಪಂಚಲಿಂಗೇಗೌಡ, ಜವರೇಗೌಡ, ಉದ್ಯಮಿ ಚೇತನ್‌ಕುಮಾರ್ ಇತರರಿದ್ದರು.