ಸಾರಾಂಶ
ಬೀದರ್: ಅಷ್ಟೂರ ಜಾತ್ರೆಯ ಕೊನೆಯ ದಿನವಾದ ಶುಕ್ರವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿವಿಧ ವಿಭಾಗಗಳಲ್ಲಿ ಸುಮಾರು 65ಕ್ಕೂ ಹೆಚ್ಚು ಕುಸ್ತಿ ಸ್ಪರ್ಧೆಗಳು ನಡೆದವು. ಇದರಲ್ಲಿ 200 ರು.ಗಳಿಂದ ಹಿಡಿದು ಗರಿಷ್ಠ 5000 ರು.ವರೆಗೆ ಕುಸ್ತಿ ಪಂದ್ಯಗಳ ಜರುಗಿದವು.
ಕಲಬುರಗಿ ಜಿಲ್ಲೆಯ ಕಮಲಾಪುರದ ಪ್ರವೀಣ ಕೊನೆಯ 5000 ರು. ಬಹುಮಾನ ಗೆದ್ದು ಮಿಂಚಿದರು. ಪ್ರವೀಣ ಅವರು ಸುರಪುರದ ಬಸವರಾಜ ಅವರಿಗೆ ಸೋಲಿಸಿ ಅಷ್ಟೂರ್ ಜಾತ್ರೆ ಕುಸ್ತಿಯ ವರ್ಷದ ಪೈಲ್ವಾನ್ ಹಿರೋ ಆಗಿ ಹೊರಹೊಮ್ಮಿದರು.10 ವರ್ಷದ ಬಾಲಕಿಯೊಬ್ಬಳು ಇದೇ ವಯಸ್ಸಿನ ಬಾಲಕನ ಜೊತೆಗೆ ಸೆಣೆಸಾಟ ನಡೆಸುವ ಮೂಲಕ ಅಷ್ಟೂರ್ ಜಾತ್ರೆಯಲ್ಲಿ ಹೊಸ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದಳು. ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯ ಲೋಹಾರಾದ ಶ್ವೇತಾ ರಾಮೇಶ್ವರ ಕಾರಲೆ ಸ್ವ-ಇಚ್ಛೆಯಿಂದ ಕುಸ್ತಿ ಅಖಾಡಕ್ಕಿಳಿದು ಎಲ್ಲರ ಗಮನ ಸೆಳೆದಳು.
ಈಕೆಯ ಸ್ಪರ್ಧೆಗೆ ಆಯೋಜಕರು ಅವಕಾಶ ನೀಡಿ ಪ್ರೋತ್ಸಾಹಿಸಿದರು. ಶ್ವೇತಾ ಜೊತೆಗೆ ಮಹಾರಾಷ್ಟ್ರದ ಲಾತೂರಿನ 10 ವರ್ಷದ ಬಾಲಕ ಸಮರ್ಥ ಕಣಕ್ಕೆ ಇಳಿದಿದ್ದ. ಶ್ವೇತಾ ಅಲ್ಪ ಸಮಯದಲ್ಲೇ ಸಮರ್ಥಗೆ ಚಿತ್ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದಳು.ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಇರ್ಷಾದ್ ಪೈಲ್ವಾನ್ ಸೇರಿದಂತೆ ವೇದಿಕೆ ಮೇಲಿದ್ದ ಗಣ್ಯರು ಕುಸ್ತಿ ಅಂಗಳದೊಳಗೆ ತೆರಳಿ ಶ್ವೇತಾ ಹಾಗೂ ಸಮರ್ಥ ಪಂದ್ಯ ವೀಕ್ಷಿಸಿದರು. ಸ್ಪರ್ಧೆಯಲ್ಲಿ ಗೆದ್ದ ಶ್ವೇತಾಗೆ ಶಾಸಕ ಬೆಲ್ದಾಳೆ ಬಹುಮಾನ ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಶ್ವೇತಾ 4ನೇ ತರಗತಿ ಓದುತ್ತಿದ್ದು, ಕುಸ್ತಿ ಪಟುವಾಗಿರುವ ತಂದೆ ರಾಮೇಶ್ವರ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಮಗಳಿಗೆ ಅಂತಾರಾಷ್ಟ್ರೀಯ ಮಟ್ಡದ ಕುಸ್ತಿ ಪಟುವಾಗಿ ಮಾಡಿ ಓಲಿಂಪಿಕ್ಸ್ನಲ್ಲಿ ಕಳುಹಿಸುವ ಗುರಿಯಿದೆ ಎಂದು ರಾಮೇಶ್ವರ ಹೇಳಿದರು.