ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಬೈಲಹೊಂಗಲ ಉಪವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಸಿಇಐಆರ್ ತಂತ್ರಾಂಶದ ಸಹಾಯದಿಂದ ಮೊಬೈಲ್ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ, ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ 104 ಮೊಬೈಲ್‌ಗಳನ್ನು ಜಪ್ತಿ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಡಿವೈಎಸ್ಪಿ ಡಾ.ವೀರಯ್ಯಾ ಹಿರೇಮಠ ತಿಳಿಸಿದರು.

ಉಪವಿಭಾಗದ ಬೈಲಹೊಂಗಲ, ಕಿತ್ತೂರು, ಖಾನಾಪೂರ, ನಂದಗಡ, ದೊಡವಾಡ ಮತ್ತು ನೇಸರಗಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್‌ಗಳ ಕುರಿತು ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ಪತ್ತೆ ಕಾರ್ಯಾಚರಣೆ ಆರಂಭಿಸಿ, ತಂತ್ರಾಂಶದ ಮೂಲಕ ಐಎಂಇಐ ಸಂಖ್ಯೆಯ ಆಧಾರದಲ್ಲಿ ಮೊಬೈಲ್‌ಗಳ ಚಲನವಲನವನ್ನು ಪತ್ತೆಹಚ್ಚಿ ವಿವಿಧ ಸ್ಥಳಗಳಿಂದ 104 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾಗಿ ತಿಳಿಸಿದರು.

ವಶಪಡಿಸಿಕೊಂಡ ಮೊಬೈಲ್‌ಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ದೃಢಪಡಿಸಿದ ಬಳಿಕ ಸಂಬಂಧಿತ ಮಾಲೀಕರನ್ನು ಸಂಪರ್ಕಿಸಿ ಹಸ್ತಾಂತರಿಸಲಾಗಿದೆ. ಮೊಬೈಲ್‌ಗಳನ್ನು ಮರಳಿ ಪಡೆದ ಸಾರ್ವಜನಿಕರು ಪೊಲೀಸರ ಕಾರ್ಯಕ್ಷಮತೆಯನ್ನು ಮೆಚ್ಚಿ ಧನ್ಯವಾದಗಳನ್ನು ತಿಳಿಸಿದರು.ಎಲ್ಲೆಲ್ಲಿ ಎಷ್ಟು ಮೊಬೈಲ್‌ ಪತ್ತೆ: ಬೈಲಹೊಂಗಲ – 19, ಕಿತ್ತೂರು – 27, ದೊಡವಾಡ – 20, ನೇಸರಗಿ – 13, ಖಾನಾಪೂರ – 18, ನಂದಗಡ – 07; ಒಟ್ಟು 104 ಮೊಬೈಲ್‌ಗಳು ಪತ್ತೆಯಾಗಿವೆ.ಮೊಬೈಲ್ ಕಳೆದ ತಕ್ಷಣ ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸುವುದರಿಂದ ಪತ್ತೆ ಸುಲಭವಾಗುತ್ತದೆ. ಸಾರ್ವಜನಿಕರು ತಮ್ಮ ಮೊಬೈಲ್‌ಗಳ ಐಎಂಇಐ ಸಂಖ್ಯೆಯನ್ನು ದಾಖಲಿಸಿಕೊಂಡಿರಬೇಕು ಹಾಗೂ ಅನುಮಾನಾಸ್ಪದವಾಗಿ ಕಡಿಮೆ ದರದಲ್ಲಿ ದೊರೆಯುವ ಮೊಬೈಲ್‌ಗಳನ್ನು ಖರೀದಿಸಬಾರದು ಎಂದು ಡಿವೈಎಸ್ಪಿ ಹೇಳಿದರು.

ಈ ಕಾರ್ಯಾಚರಣೆಯಲ್ಲಿ ಉಪವಿಭಾಗದ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದು, ತಂತ್ರಜ್ಞಾನ ಬಳಸಿ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.


ಕಾರ್ಯಾಚರಣೆಯಲ್ಲಿ ಐಪಿಎಸ್ ಅಧಿಕಾರಿ ಡಾ.ಬಾನುಪ್ರಕಾಶ, ಪಿಐ ಶಿವಾನಂದ ಗುಡಗನಟ್ಟಿ, ಪ್ರವೀಣ ಗಂಗೋಳ, ಎಚ್.ಕೆ.ಪಾಟೀಲ, ರವಿಕುಮಾರ ಧರ್ಮಟ್ಟಿ, ಗಂಗಾಧರ ಹಂಪಣ್ಣವರ, ನಿರಂಜನಸ್ವಾಮಿ, ಪ್ರೊಬೇಷನರಿ ಪಿಎಸ್‌ಐ ಸಂತೋಷ ಸೇರಿ ಕ್ರೈಂ ಸಿಬ್ಬಂದಿ ಪಾಲ್ಗೊಂಡಿದ್ದರು.