ಜುಲೈನಲ್ಲಿ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

| Published : May 20 2024, 01:36 AM IST

ಜುಲೈನಲ್ಲಿ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತಿನ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜುಲೈ ತಿಂಗಳ 2ನೇ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಡೋಣೂರ, ಗೌರವ ಕಾರ್ಯದರ್ಶಿ ವಾಯ್.ಎನ್.ಮಿಣಜಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಕನ್ನಡ ಸಾಹಿತ್ಯ ಪರಿಷತ್ತಿನ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜುಲೈ ತಿಂಗಳ 2ನೇ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಡೋಣೂರ, ಗೌರವ ಕಾರ್ಯದರ್ಶಿ ವಾಯ್.ಎನ್.ಮಿಣಜಗಿ ತಿಳಿಸಿದರು.

ಪಟ್ಟಣದ ಬಸವೇಶ್ವರ ದೇವಸ್ಥಾನ ಉದ್ಯಾನವನದಲ್ಲಿ ಕಸಾಪ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತು ಕನ್ನಡ ನಾಡು, ನುಡಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. 10ನೇ ಕನ್ನಡ ತಾಯಿಯ ತೇರನ್ನು ಜುಲೈ ತಿಂಗಳ 2ನೇ ವಾರದಲ್ಲಿ ಎಳೆಯಲು ಸಿದ್ಧವಾಗಿದೆ. ಈ ಕುರಿತು ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು, ಮಠಾಧೀಶರು, ಊರಿನ ಹಿರಿಯರು, ಸಾಹಿತಿಗಳು, ಕನ್ನಡ ಪರ ಸಂಘಟನೆಗಳ ಸಮ್ಮುಖದಲ್ಲಿ ಪಟ್ಟಣದ ವಿರಕ್ತಮಠದಲ್ಲಿ ಜೂನ್‌ ತಿಂಗಳ ಮೊದಲ ಭಾನುವಾರ ಪೂರ್ವಭಾವಿ ಸಭೆ ಕರೆದು ಸಮ್ಮೇಳನ ನಡೆಸುವ ದಿನಾಂಕ ಹಾಗೂ ಸ್ಥಳ ನಿಗದಿ ಮಾಡುವ ಬಗ್ಗೆ ಚರ್ಚಿಸಲು ಪೂರ್ವಭಾವಿ ಸಭೆ ಕರೆಯಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಶಿವು ಮಡಿಕೇಶ್ವರ, ಗೌರವ ಕೋಶಾಧ್ಯಕ್ಷ ಬಸವರಾಜ ಮೇಟಿ, ಬಿ.ವ್ಹಿ.ಚಕ್ರಮನಿ, ಕೊಟ್ರೇಶ ಹೆಗಡ್ಯಾಳ, ಎ.ಎಂ.ಗುಡದಿನ್ನಿ, ಎಂ.ಎನ್.ಅಂಗಡಗೇರಿ, ನಾಗೇಶ ನಾಗೂರ, ಚಂದ್ರಶೇಖರ ಹದಿಮೂರ, ಬಸವರಾಜ ಚಿಂಚೋಳಿ, ಬಸವರಾಜ ನಾಗೂರ ಇದ್ದರು.

--ಬಾಕ್ಸ್‌.

ಸರ್ವಾಧ್ಯಕ್ಷರ ಆಯ್ಕೆ ಪಾರದರ್ಶಕವಾಗಿರಲಿ

ಬಸವನಬಾಗೇವಾಡಿ:

ಜುಲೈ ತಿಂಗಳಲ್ಲಿ ನಡೆಯುವ 10ನೇ ಬಸವನ ಬಾಗೇವಾಡಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಪಾರದರ್ಶಕವಾಗಿರಬೇಕು ಎಂದು ಹೂವಿನಹಿಪ್ಪರಗಿಯ ಯುವ ಸಾಹಿತಿ ಭೀಮರಾಯ ಹೂಗಾರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಸಾಹಿತ್ಯವೇ ಜೀವ ಎಂದು ತಿಳಿದು ಹಲವಾರು ದಶಕಗಳಿಂದ ಸೇವೆ ಮಾಡಿದವರು ಹಲವಾರು ಇದ್ದಾರೆ. ಒಳ್ಳೆಯ ಸಾಹಿತ್ಯ ರಚಿಸಿರುವ ಸಾಹಿತಿಗಳು ಇದ್ದರೂ ಕನ್ನಡ ಸಾಹಿತ್ಯ ಪರಿಷತ್ತು ಗುರುತಿಸದಿರುವುದು ದುರಂತವೇ ಸರಿ. ಹಣ ಕೊಟ್ಟವರನ್ನು, ತಾವು ಹೇಳಿದಂತೆ ಕುಣಿವವರನ್ನು, ತಮ್ಮ ಆಪ್ತರನ್ನು ಮಾತ್ರ ಗುರುತಿಸಿ, ಸರ್ವಾಧ್ಯಕ್ಷರನ್ನಾಗಿ ಮಾಡಿ, ನಿಜವಾದ ಸಾಹಿತಿಗಳನ್ನು, ಸಾಹಿತ್ಯ ಪರಿಷತ್ ಅಧ್ಯಕ್ಷರು ಕಡೆಗಣಿಸುತ್ತಿರುವುದು ದುರಂತ. ಈ ರೀತಿಯಲ್ಲಿ ಜುಲೈ ತಿಂಗಳಲ್ಲಿ ನಡೆಯುವ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯಲ್ಲಿ ನಡೆದರೆ, ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.